
ಶ್ರೀಪಾದ ಭಟ್
ಸ್ನೇಹಿತರು ರೋಹಿತ್ ವೇಮುಲ ಅವರ ಬದುಕನ್ನು ಆಧರಿಸಿದ ಮಹಾತ್ವಾಕಾಂಕ್ಷೆಯ ” ನಕ್ಷತ್ರದ ಧೂಳು” ಎನ್ನುವ ನಾಟಕ ಅಥವಾ ಏಕವ್ಯಕ್ತಿ ಪ್ರದರ್ಶನವನ್ನು ಏರ್ಪಡಿಸಿದ್ದರು.
ಇಡೀ ನಾಟಕದ ಉದ್ದಕ್ಕೂ ಅವರ ಪ್ರಾಮಾಣಿಕತೆ, ಬದ್ಧತೆ ಮತ್ತು ಸಮ ಸಮಾಜದ ಕುರಿತಾದ ಕಳಕಳಿ ಎದ್ದು ಕಾಣುತ್ತಿತ್ತು. ವೇಮುಲನ ಪಾತ್ರದಲ್ಲಿ ಕಿರಣ್ ಅವರ ಎನರ್ಜಿ ಉತ್ತಮವಾಗಿತ್ತು.
ಆದರೆ ಇಡೀ ನಾಟಕದಲ್ಲಿ “ದಲಿತ ಬ್ರದರ್ ಹುಡ್” ನ ಜೀವಂತಿಕೆಯ ಕೊರತೆ ಎದ್ದು ಕಾಣುತ್ತಿತ್ತು. ಏಕೆಂದರೆ ಸಮಕಾಲೀನ ವ್ಯಕ್ತಿಯೊಬ್ಬನ ಬದುಕನ್ನು ನಾಟಕವಾಗಿ ಹೇಳಲು ಹೊರಟಾಗ ಸಮಗ್ರತೆಗೆ ಕೈ ಹಾಕುವ ಮೊದಲು ತುಂಡು ಕನ್ನಡಿಗಳ ಮೂಲಕ ಗ್ರಹಿಸಬೇಕಾಗುತ್ತದೆ. ಅದು ಅನಿವಾರ್ಯ. ರೋಹಿತ್
ವೇಮುಲನ ಕುರಿತಾದ ನಾಟಕದಲ್ಲಿ ತಳ ಸಮುದಾಯವೆನ್ನುವ ಒಂದೇ ತಾಯಿ ಬೇರಿನಿಂದ ಹುಟ್ಟಿ, ಕಾಂಡವಾಗಿ, ಕೊಂಬೆಗಳಾಗಿ, ಗಿಡವಾಗಿ ಬೆಳೆಯುತ್ತ ನಕ್ಷತ್ರದ ಕನಸನ್ನು ಕಾಣುವ ವ್ಯಕ್ತಿಯೊಬ್ಬನ ಬದುಕನ್ನು ಕುರಿತು ಹೇಳುವಾಗ ಅಲ್ಲಿ ತಳದಿಂದ ಮುಟ್ಟಬೇಕಾಗುತ್ತದೆ.
ಇದನ್ನು ನಾಟಕ/ಏಕವ್ಯಕ್ತಿ ಪ್ರದರ್ಶನದಲ್ಲಿ ಸಾಧ್ಯವಾಗಿಸಲು ಮೆಟಫರ್ ಗಳನ್ನು ಬಳಸಿಕೊಳ್ಳಲೇಬೇಕಾಗುತ್ತದೆ. … ವೇಮುಲನ ಬದುಕಿನ ಘಟನೆಗಳನ್ನು ಅನುಕ್ರಮವಾಗಿ ಪೋಣಿಸಿ ನೇರವಾಗಿ ಹೇಳುತ್ತಾ ಹೋಗುತ್ತಾರೆ. ಇದು ಪ್ರದರ್ಶನವಾಗಲಾರದು. ಪ್ರಸೆಂಟೇಶನ್ ಅನಿಸಿಕೊಳ್ಳುತ್ತದೆ ಎಂಬುದು ನನ್ನ ಖಚಿತ ಅಭಿಪ್ರಾಯ.
ನೋಡಿ ಬ್ರೆಕ್ಟ್ ನ ’ಕಕೇಶಿಯನ್ ಚಾಕ್ ಸರ್ಕಲ್’ ನಾಟಕದಲ್ಲಿ ನ್ಯಾಯಾಧೀಶ ಕಾನೂನಿನ, ಸಂವಿಧಾನದ ಪುಸ್ತಕವನ್ನು ತನ್ನ ಕುಂಡಿಯ ಕೆಳಗೆ ಇಟ್ಟುಕೊಂಡು ತೀರ್ಪು ಕೊಡುತ್ತಿರುತ್ತಾನೆ. ಇದು ಆಗಿನ ಫ್ಯಾಸಿಸಂ ಕಾಲಘಟ್ಟದಲ್ಲಿ ಅನೇಕ ಮೆಟಫರ್ ಗಳನ್ನು ಬಿಚ್ಚಿಡುತ್ತದೆ. ಇದು ಒಂದು ಉದಾಹರಣೆ ಮಾತ್ರ.
ಕಡೆಗೆ
ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ತಮ್ಮ ಖ್ಯಾತಿಯ ಉತ್ತುಂಗದಲ್ಲಿದ್ದ ಬಿ.ವಿ.ಕಾರಂತರಿಗೆ ನಮ್ಮ ಲಂಕೇಶ್ ಅವರು “ಕಾರಂತರೇ ಚಪ್ಪಾಳೆ ನಿಮ್ಮ ಮೊದಲ ಶತ್ರು” ಎಂದು ಮಾರ್ಮಿಕವಾಗಿ ಎಚ್ಚರಿಸಿದ್ದರು. ಇದು ನಂತರ ನನ್ನ ತಲೆಮಾರಿಗೆ ಒಂದು ಪಾಠದಂತಿತ್ತು






0 Comments