ಪ್ರಿಯರೇ
ಮಗ, ಅಭಯಸಿಂಹನ ಕಥೆ ಮತ್ತು ನಿರ್ದೇಶನದ ಕನ್ನಡ ಚಿತ್ರ – ಶಿಕಾರಿ, ನಾಳೆ ಅಂದರೆ ೩೦-೩-೨೦೧೨ರಂದು ಕರ್ನಾಟಕಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಶಿಕಾರಿಯಲ್ಲಿ ಮಲಯಾಳದ ಅಮೋಘ ನಟಶಿರೋಮಣಿ ಮಮ್ಮೂಟಿ ಪ್ರಥಮ ಬಾರಿಗೆ ಕನ್ನದ ಚಿತ್ರರಂಗವನ್ನು ಪ್ರವೇಶಿಸುತ್ತಿರುವುದನ್ನು ನೋಡಬಹುದು. ಎರಡು ಕಾಲಘಟ್ಟಗಳಲ್ಲಿ ನಡೆಯುವ ಈ ಚಿತ್ರ ಸಹಜವಾಗಿ ಮಮ್ಮೂಟಿಯ ದ್ವಿಪಾತ್ರಾಭಿನಯವನ್ನೂ ಬಯಸಿ ಪಡೆದಿದೆ. (ಪ್ರಾಸಂಗಿಕವಾಗಿ ಹೇಳುವುದಾದರೆ ಇದು ಮಲಯಾಳ ಸೇರಿದಂತೆ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡು, ಕೆಲವು ವಾರಗಳ ಮೊದಲೇ ಮಲಯಾಳದಲ್ಲಿ ತೆರೆ ಕಂಡು, ಸಿನಿವೀಕ್ಷಕರ ಮನ್ನಣೆ ಗಳಿಸಿದೆ) ಪೂನಂ ಬಾರ್ಜ್ವ (ಹರಿಯಾಣ್ವೀ) ಇದರ ನಾಯಕಿಯಾಗಿ ಮಮ್ಮುಟ್ಟಿ ಭಾವಪೋಷಣೆಗೆ ಉತ್ತಮ ಸಂಗಾತಿಯಾಗಿದ್ದಾಳೆ. ಕನ್ನಡದ ಸಿಹಿಕಹಿ ಚಂದ್ರು, ಮಲಯಾಳದ ಇನ್ನೋಸೆಂಟ್ ಅತ್ಯುತ್ತಮ ಪೋಷಕ ಪಾತ್ರಗಳನ್ನು ಎರಡೂ ಆವೃತ್ತಿಗಳಲ್ಲಿ ಕೊಟ್ಟಿರುವುದು ಗಮನಾರ್ಹವಾಗಿದೆ. ಹಾಗೇ ವೃತ್ತಿಪರ ತುಳು ನಾಟಕದಲ್ಲಿ ವಿಶ್ವಖ್ಯಾತರೇ ಆಗಿರುವ ನವೀನ್ ಡಿ. ಪಡೀಲ್ ಮತ್ತು ದಕ ವಲಯದ ಹವ್ಯಾಸೀ ನಟಶೇಖರರಲ್ಲಿ ಪ್ರಮುಖರಾದ ಚಂದ್ರಹಾಸ ಉಳ್ಳಾಲರೂ ಎರಡೂ ಆವೃತ್ತಿಗಳಲ್ಲಿ ಸ್ವತಂತ್ಗ್ರವಾಗಿ ಪಾತ್ರಪೋಷಣೆ ಮಾಡಿದ್ದು ಸ್ಮರಣೀಯ. ಬಹು ಖ್ಯಾತಿಯ ಅಚ್ಚುತ ಮತ್ತು ನೀನಾಸಂ ಅಶ್ವತ್ಥ ಕನ್ನಡ ಆವೃತ್ತಿಗೆ ಮಾತ್ರ ಸೀಮಿತಗೊಂಡದ್ದು ಚಿತ್ರದ ಕನ್ನಡತನವನ್ನು ಸಾರಿ ಹೇಳುತ್ತದೆ.
ಇನ್ನು ಹೆಚ್ಚಿನ ವಿವರಗಳನ್ನು ಕಣ್ತುಂಬಿಸಿಕೊಳ್ಳಲು, ಮನದುಂಬಿಕೊಳ್ಳಲು ಕೂಡಲೇ ನಿಮ್ಮೂರಿನ ಚಿತ್ರಮಂದಿರಗಳಿಗೆ ಇಷ್ಟ, ಮಿತ್ರ, ಬಂಧು, ಬಾಂಧವರೊಡನೆ ಭೇಟಿಕೊಡಿ.
ನೆನಪಿರಲಿ, ಈ ಸಿನಿಮಾ ಸಾಮಾನ್ಯ ಸಿನಿವೀಕ್ಷಕರನ್ನುದ್ದೇಶಿಸಿಯೇ ಬಂದಿದೆ. ಮತ್ತದಕ್ಕೆ ಸದಭಿರುಚಿಯನ್ನು ಬಲಿಗೊಡದಿರುವ ಲಕ್ಷ್ಯವನ್ನೂ ಹೊಂದಿದೆ.
(ಈ ವಲಯದ ಪ್ರೇಕ್ಷಕರಿಗೆ ಮಂಗಳೂರು – ಜ್ಯೋತಿ ಮತ್ತು ಬಿಗ್ ಸಿನೆಮಾದಲ್ಲೂ ಬಂಟ್ವಾಳ – ನಕ್ಶತ್ರ, ಪುತ್ತೂರು – ಮಯೂರ ಚಿತ್ರ ಮಂದಿರಗಳಲ್ಲೂ, ಉಡುಪಿಯಲ್ಲೂ ತೆರೆ ಕಾಣುತ್ತಿದೆ)
ಇಂತು ವಿಶ್ವಾಸಿ
ಅಶೋಕವರ್ಧನ]]>
ಅಶೋಕವರ್ಧನ Invites you
ನಿಮಗೆ ಇವೂ ಇಷ್ಟವಾಗಬಹುದು…





0 Comments