ಶಶಿ ಸಂಪಳ್ಳಿ ಮೃದು ಭಾಷಿ. ಕವಿತೆ ಬರೆಯುತ್ತಾ ಬೆಳೆದ ಶಶಿ ನಂತರ ಆಯ್ದುಕೊಂಡದ್ದು ಸಮಾಜದೊಡನೆ ಸದಾ ಸಂಪರ್ಕವಿರುವ ಮಾಧ್ಯಮ ಕಾಯಕವನ್ನು. ಪ್ರಜಾವಾಣಿಯಲ್ಲಿದ್ದು, ಈಗ ‘ಸಂಡೇ ಇಂಡಿಯನ್’ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದಾರೆ. ಪತ್ರಿಕೋದ್ಯಮ ಎಂಬ ಗಿರಣಿಯಲ್ಲಿ ಕಾಣೆಯಾಗುವವರೇ ಹೆಚ್ಚು. ಅಂತಹದ್ದರಲ್ಲಿ ಶಶಿ ಸಂಪಳ್ಳಿ ಹಲ್ಲು ಕಚ್ಚಿ ನಿಂತಿದ್ದಾರೆ. ಕವಿತೆ ಬರೆಯುತ್ತಾ, ಬ್ಲಾಗ್ ನಡೆಸುತ್ತಾ ಹಲವರಲ್ಲಿ ಉತ್ಸಾಹದ ಬೆಳೆ ತೆಗೆಯುತ್ತಾ ನಡೆಯುತ್ತಿದ್ದಾರೆ.
‘ಮಲೆಯ ಮಾತು’ ಶಶಿಯ ಬ್ಲಾಗ್. ಇವರಿಗೆ ಬ್ಲಾಗ್ ಎಂಬುದು ‘ನನ್ನೊಂದಿಗೇ ಮಾತನಾಡುವ ಮತ್ತೊಂದು ಸಾಧ್ಯತೆ’. ಶಶಿ ಬರಹ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿದೆ ಒಂದು ಉದಾಹರಣೆ. ಇದು ಲಂಕೇಶ್ ನೆನಪೂ ಹೌದು. ಶಶಿ ಸಂಪಳ್ಳಿ
ಬರೋಬ್ಬರಿ ಹತ್ತು ವರ್ಷ ಕಾಲ ಲಂಕೇಶ್ ಪತ್ರಿಕೆಯನ್ನು ಓದಿಕೊಂಡು ಬೆಳೆದವನು ನಾನು. ಹಾಗೇ ಭ್ರಷ್ಟ, ನಿರ್ಲಜ್ಜ ಮತ್ತು ಅದೆಲ್ಲಕ್ಕಿಂತ ಹೆಚ್ಚಾಗಿ ದಾಸ್ಯ ಮತ್ತು ದೌರ್ಜನ್ಯಗಳ ಕೂಪವಾಗಿರುವ ವ್ಯವಸ್ಥೆಯ ವಿರುದ್ಧ ಸಿಟ್ಟು ಮತ್ತು ಕನಿಕರವನ್ನೂ ಕೂಡ ಅವರಿಂದ ಅಷ್ಟಿಷ್ಟಾದರೂ ಕಲಿತಿದ್ದೇನೆ ಎಂದುಕೊಂಡಿರುವೆ. ಹಾಗೆ ನೋಡಿದರೆ, ಈ ಮಾತು ಕನ್ನಡದಲ್ಲಿ ಸಂವೇದನಾಶೀಲರಾಗಿ ಬರೆಯುತ್ತಿರುವ ಮತ್ತು ವಿವಿಧ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಎರಡು- ಮೂರು ತಲೆಮಾರಿಗೇ ಅನ್ವಯಿಸುತ್ತದೆ.
ಈಗಲೂ, ಎಲ್ಲೋ ಬುಂದೇಲಖಂಡದಲ್ಲಿ ಹಸಿವಿನಿಂದ ಜೀವ ಬಿಡುವ ಮಣ್ಣಿನ ಮಕ್ಕಳು, ದೂರದ ಒರಿಸ್ಸಾದಲ್ಲೋ, ಬಿಹಾರದಲ್ಲೋ ನಡೆಯುವ ದೌರ್ಜನ್ಯದಿಂದ ಹಿಡಿದು, ಇಲ್ಲೇ ನಮ್ಮ ನಡುವೆಯೇ ನಿತ್ಯ ನಡೆಯುವ ಶೋಷಣೆ, ಅವಮಾನ, ದಬ್ಬಾಳಿಕೆಗಳನ್ನು ಕಂಡಾಗ ಮನಸ್ಸು ಮುದುಡಿಹೋಗುತ್ತದೆ. ನಿತ್ಯದ ಜಂಜಾಟಗಳ ನಡುವೆ, ಯಾಂತ್ರಿಕ ಬದುಕಿನಲ್ಲಿ ಮೂಲೆಗೆ ಸೇರಿದ್ದ ನಮ್ಮೊಳಗಿನ ಮಗು ರಚ್ಚೆ ಹಿಡಿದಂತೆ ಆಡತೊಡಗುತ್ತದೆ. ಕಣ್ಣಾಲಿಗಳ ತೇವವಾಗುತ್ತವೆ. ನಡುರಾತ್ರಿಯಲಿ ಬುಂದೇಲಖಂಡದ ಆ ವೃದ್ಧ ರೈತನ ಹಸಿವಿನ ನರಳುವಿಕೆ ದುತ್ತೆಂದು ಎದೆಮೇಲೆ ಕೂತು ಗುದ್ದಾಟಕ್ಕೆ ತೊಡಗುತ್ತದೆ….
ಇಂತಹ ಸೂಕ್ಷ್ಮತೆ ನಮ್ಮೊಳಗೆ ಮೂಡಿದ್ದಕ್ಕೆ ನನ್ನ ಕನ್ನಡದ ಎಲ್ಲ ಒಳ್ಳೆಯ ಮನಸ್ಸುಗಳ ಬರವಣಿಗೆ ಮತ್ತು ಕಾರ್ಯಗಳು ಎಂಬುದು ಒಂದು ತೂಕವಾದರೆ, ಲಂಕೇಶ್ ಅವರ ಬರವಣಿಗೆ ಮತ್ತೊಂದು ತೂಕಕ್ಕೆ ಸರಿದೂಗುತ್ತದೆ.
ಅಂತಹ ಅಪ್ಪಟ ‘ಹುಳಿ ಮಾವಿನ ಮರ’ದ ಒಗರು, ಮೋಹಕ ಸಿಹಿ, ಆಕರ್ಷಣೆ ಮತ್ತು ಹುಳಿಯ ಪಾಕದಂತಿರುವ ನೀಲು ಪದ್ಯಗಳು ನಮ್ಮನ್ನು ಮನುಷ್ಯನನ್ನು ಮುಖವಾಡಗಳಿಲ್ಲದೆ ಅರ್ಥಮಾಡಿಕೊಳ್ಳುವಂತೆ ಪ್ರೇರೇಪಿಸುತ್ತವೆ ಎಂದು ನಾನು ನಂಬಿದ್ದೇನೆ.
ಲಂಕೇಶರ ಹುಟ್ಟುಹಬ್ಬದ ಈ ದಿನ ಕೆಲವು ‘ನೀಲುಗಳು’ ನಿಮಗಾಗಿ… ಹಾಗೇ ಸುಮ್ಮನೇ ಆ ಕ್ಷಣಕ್ಕೆ ಕಣ್ಣಿಗೆ ಬಿದ್ದು ಖುಷಿ ಕೊಟ್ಟವು ಇವು…
* ಪೋಲಿ ಹೆಂಗಸರು ಏನೇ ಹೇಳಿದರೂ
ಪತಿವ್ರತೆಯ ನಿಷ್ಠೆ ಇದೆಯಲ್ಲ
ಅದರಲ್ಲಿ ಭೀಕರ ಅರ್ಥಗಳಿವೆ.
* ಪ್ರಖ್ಯಾತ ಮಹಾತ್ಮ ಕೂಡ
ಹೆಣ್ಣಿನ ಎದೆಯ ಮೇಲೆ
ಅಸಹಾಯಕ ಹಸುಗೂಸು
* ಕಗ್ಗಾಡಿನ ಬೇಡರ ಮೋನಿ
ತೀರಿಕೊಂಡಾಗ
ಪತ್ರಿಕೆಗಳ ವಿಷಾದಕ್ಕೆ ಬದಲು
ಸೇವಂತಿ ದುಃಖದಿಂದ ದಳ
ಉದುರಿಸಿತು.
* ನಾನು ನಿನ್ನನ್ನು ಪ್ರೀತಿಸುವೆ
ಎನ್ನುವಾಗಲೇ
ಅರ್ಧ ಪ್ರೇಮ ಸೋರಿಹೋಗುವುದು
ಮನುಷ್ಯನ
ಮಾತಿಗಿರುವ ಶಾಪ.
* ನನ್ನ ಇನಿಯನ ನಲ್ಲೆಯಾದ
ನಾನು
ಅವನ ತಾಯಿ ಕೂಡ
ಎಂಬುದು
ಅವನು ಒಪ್ಪದಿದ್ದರೂ ನಿಜ.
ವಾ! ಅಲ್ವಾ…? ಇವತ್ತಿಗೆ ಇಷ್ಟು ಸಾಕು,… ನೀಲುವಿನೊಂದಿಗೆ ಮೇಷ್ಟ್ರ ನೆನಪು ಮತ್ತು ಅವರ ವಿವೇಚನೆಯ ಎಚ್ಚರಿಕೆಯನ್ನು ಜತನಮಾಡಿಕೊಳ್ಳಲು ಪ್ರಯತ್ನಿಸೋಣ, ಎಲ್ಲ ಪ್ರಲೋಭನೆ, ಆಕ್ರಮಣಗಳ ನಡುವೆಯೂ! ನೀಲು ಮೌನವಾಗಿ ಎಂಟು ವರ್ಷಗಳ ಬಳಿಕ ಹೀಗೆ ಮೇಷ್ಟ್ರರನ್ನೂ, ಅವರೊಳಗಿನ ‘ಅವ್ವ’ನನ್ನೂ ಕಾಪಿಟ್ಟುಕೊಳ್ಳೋಣ!






0 Comments