ಎಲ್ ಸಿ ಸುಮಿತ್ರಾ
ರಂಗಕರ್ಮಿ ಎಸ್ ಮಾಲತಿ ನಿಧನ . .ಓದಿದಾಗ ಅಯ್ಯೋ ಇಷ್ಟು ಬೇಗ ಅನಿಸಿತು..
ನನಗೆ ಮಾಲತಿಯವರನ್ನು ನೆನಪಿಸಿಕೊಂಡಾಗ ಅವರ ತಾರುಣ್ಯದ ನಗುಮೊಗವೇ ನೆನಪಿಗೆ ಬರುವುದು.
ಮಾನಸಗಂಗೋತ್ರಿಯಲ್ಲಿ ನಾನು ಎಂಎ ಓದಲು ಹೋದಾಗ ಮಾಲತಿ ತಮ್ಮ ಪಿಎಚ್ಡಿ ಅಧ್ಯಯನ ದ ಕೊನೆಯ ಹಂತದಲ್ಲಿದ್ದರು. ಹಾಸ್ಟೆಲ್ ನಲ್ಲಿ ನನ್ನ ರೂಮ್ ಎದುರಿಗೇ ಅವರ ಕೊಠಡಿ ಇತ್ತು.. ಪಕ್ಕದಲ್ಲಿ ಇಂಗ್ಲಿಷ್ ಅಧ್ಯಾಪಿಕೆ ಸೂಸನ್ ಡೇನಿಯಲ್ ರೂಮು. ಮಾಲತಿ ಸೂಸನ್ ಇಬ್ಬರೂ ಸಾಗರದವರು. ನಾನು ತೀರ್ಥಹಳ್ಳಿ… ಸ್ನೇಹ ಬೆಳೆಯಿತು..
ನನ್ನನ್ನು ಮಾಲತಿ “ಮರಿ” ಎಂದು ಕರೆಯುತ್ತಿದ್ದರು..

ಅವರ ಕೊಠಡಿಯಲ್ಲಿ ಪುಸ್ತಕ ಗಳ ಸಂಗ್ರಹವಿತ್ತು..ಸಿತಾರ್ ಕಲಿಯುತ್ತಿದ್ದರು, ಲಹರಿ ಬಂದಾಗ ನುಡಿಸುತ್ತಿದ್ದರು.. ಕೆಲವೊಮ್ಮೆ ಹೊರಗೆ ಹೋಗುವಾಗ ನನ್ನ ನ್ನೂ ಕರೆದುಕೊಂಡು ಹೋಗುತ್ತಿದ್ದರು. ಹಾಗೆ ‘ಕಾಕನಕೋಟೆ’ ಸಿನಿಮಾಕ್ಕೆ ಹೋಗಿದ್ದೆವು. ಅದು ನಮಗೆ ಪಠ್ಯವಾದುದರಿಂದ ನಾನು ಕುತೂಹಲ ದಿಂದ ನೋಡಿದೆ ..ಅವರಿಗೆ ಇಷ್ಟ ಆಗಲಿಲ್ಲ.
ಮಹಾರಾಜ ಕಾಲೇಜಿನಲ್ಲಿದ್ದ ಲಿಟರರಿ ಕ್ಲಬ್ ಕಾರ್ಯ ಕ್ರಮಗಳಿಗೆ ಒಂದರಡು ಸಲ ಹೋಗಿದ್ದೆ ಅವರ ಜತೆಗೆ.. ಆಕರ್ಷಕ ಕಣ್ಣುಗಳ ಲವಲವಿಕೆಯ ಮಾಲತಿಯವರಿಗೆ ಹಲವು ಆಸಕ್ತಿಗಳಿಂದಾಗಿ ಸಂಶೋಧನಾ ಪ್ರಬಂಧ ಬರೆಯಲಾಗದೆ ಮಾರ್ಗದರ್ಶಕರಾದ ಹಾ ಮಾ ನಾಯಕ್ ಜತೆ ಮನಸ್ತಾಪ ಆಯಿತು..
‘ತಾಯಿ’ ನಾಟಕ ಮೈಸೂರಿನಲ್ಲಿ ನಡೆದಾಗ ನಿರ್ದೇಶಕ ಪ್ರಸನ್ನ ಅವರ ಪರಿಚಯವಾಗಿ ಮದುವೆಯಾಯಿತು.. ಅವರ ಬದುಕಿನ ಎರಡನೇ ಹಂತದಲ್ಲಿ ನಾನು ಅವರನ್ನು ನೋಡಿದಾಗ ಅವರು ತೀರ್ಥಹಳ್ಳಿ ಯ ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು.. ನಾಟಕ ನಿರ್ದೇಶಕರಾಗಿದ್ದರು.. ಆಗ ಅವರು ಇಲ್ಲಿ ಕಾರ್ನಾಡರ “ಹಯವದನ” ನಿರ್ದೇಶನ ಮಾಡಿದರು..
ನನ್ನ ಪತಿ ಅವರ ನಿರ್ದೇಶನದಲ್ಲಿ ದೇವದತ್ತನ ಪಾತ್ರ ಮಾಡಿದ್ದರು.. ಅವರ ಸೋದರ ಸಂಬಂಧಿ ರಾಘವ ಜವಳಿಯವರು ಮಾಲತಿಯವರ ನಾಟಕವೊಂದರ ಬಿಡುಗಡೆಗೆ ನನ್ನ ನ್ನು ಆಹ್ವಾನಿಸಿದ್ದರು..ಹೂವಿನ ಪಲ್ಲಕ್ಕಿ ಯಲ್ಲಿ ಪುಸ್ತಕ ವಿರಿಸಿ ಇಬ್ಬರು ಮಕ್ಕಳು ಅದನ್ನು ಹೊತ್ತು ಕೊಂಡು ಬರುವಂತೆ ಬಹಳ ಸುಂದರವಾಗಿ ವ್ಯವಸ್ಥೆ ಮಾಡಿದ್ದರು…
ಮಾಲತಿ ಕವಿಯೂ ಹೌದು. ಮೊದಲು ಬರೆದಿದ್ದ ಎಲ್ಲಾ ಕವಿತೆಗಳನ್ನು ಸುಟ್ಟುಹಾಕಿದೆ ಎಂದು ಇಪ್ಪತ್ತು ವರ್ಷಗಳ ಹಿಂದೆಯೇ ಹೇಳಿದ್ದರು.. ನನಗೆ ಕನಸುಗಣ್ಣಿನ ತರುಣಿ ಮಾಲತಿಯೆ ನೆನೆಪಿನಲ್ಲಿದ್ದಾರೆ… ಅವರು ಶಾಂತಿಯಲ್ಲಿ ನೆಲೆಸಲಿ..ಶ್ರದ್ಧಾಂಜಲಿ..






Very sad that Malathi mamm.. is know more.