ನಟರಾಜ್ ಹುಳಿಯಾರ್ ಕುರಿತ ಉತ್ತಮ ಸಂದರ್ಶನ ಮಯೂರ’ದಲ್ಲಿ ಪ್ರಕಟವಾಗಿದೆ.
ಮಾಸಿಕದಲ್ಲಿರುವ ಹುಳಿಯಾರ್ ಅವರ ಪರಿಚಯದೊಂದಿಗೆ ಸಂದರ್ಶನದ ಒಂದು ಭಾಗ ಇಲ್ಲಿದೆ

ಕನ್ನಡದ ಅಪರೂಪದ ಸಮಾಜವಾದಿ ಚಿಂತಕ, ಲೇಖಕ ನಟರಾಜ್ ಹುಳಿಯಾರ್. ವಿಶಿಷ್ಟ ಒಳನೋಟಗಳನ್ನು ಉಳ್ಳ ವಿಮರ್ಶಕ ಕೂಡ. ‘ಮತ್ತೊಬ್ಬ ಸರ್ವಾಧಿಕಾರಿ’ (ಕಥಾಸಂಗ್ರಹ) , ‘ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳ ತೌಲನಿಕ ಅಧ್ಯಯನ’, ‘ರೂಪಕಗಳ ಸಾವು’ (ಕಾವ್ಯ), ‘ಗಾಳಿ-ಬೆಳಕು’ (ಅಂಕಣ), ರಾಮ ಮನೋಹರ ಲೋಹಿಯಾ ಬರಹಗಳ ಆರು ಸಂಪುಟಗಳ ಸಂಪಾದನೆ, ರೈತಮುಖಂಡ, ಹೋರಾಟಗಾರ ಎಂ.ಡಿ.ನಂಜುಂಡಸ್ವಾಮಿಯವರನ್ನು ಕುರಿತಾದ ‘ಹಸಿರು ಸೇನಾನಿ’ ಅವರ ಸಂಪಾದನೆಯ ಇತ್ತೀಚಿನ ಪುಸ್ತಕ. ಪತ್ರಿಕೋದ್ಯಮದ ಸೆಳೆತದಿಂದ ಅವರು ‘ಕನ್ನಡ ಟೈಮ್ಸ್’ ಎಂಬ ವಾರಪತ್ರಿಕೆಯ ಸಂಪಾದನೆಯನ್ನು ಮಾಡಿದ್ದರು. ಪಿ ಲಂಕೇಶ್, ತೇಜಸ್ವಿ, ರೈತ ಹೋರಾಟ, ಕರ್ನಾಟಕದ ರಾಜಕೀಯ, ಕನ್ನಡ ಸಾಹಿತ್ಯ ಸಂದರ್ಭ, ಕನ್ನಡ ಪಠ್ಯಕ್ರಮ, ಪತ್ರಿಕೋದ್ಯಮ, ಜಾತಿಪದ್ದತಿ, ಕಥಾ ಸಾಹಿತ್ಯ– ಈ ಎಲ್ಲದರ ಕುರಿತಂತೆ ತನ್ನ ಚೂಪು ಒಳನೋಟಗಳ ಮುಲಕ ಇಲ್ಲಿ ಮಾತನಾಡಿದ್ದಾರೆ.
ಪಿ.ಲಂಕೇಶ್ ನಿಮ್ಮನ್ನು ತುಂಬಾ ಪ್ರಭಾವಿಸಿದ್ದಾರೆ.
ಅವರ ಸೆಳೆತಕ್ಕೆ ಹೇಗೆ ಸಿಕ್ಕಿಕೊಂಡಿರಿ,
ಅವರಿಂದ ನೀವು ಪಡೆದುಕೊಂಡದ್ದು, ಅದನ್ನು ಅರಗಿಸಿಕೊಂಡದ್ದು ಹೇಗೆ?
ನಾವು ಪಿ.ಯು.ಸಿಯಲ್ಲಿ ಓದುತ್ತಿದ್ದಾಗ ಚಿದಾನಂದಸ್ವಾಮಿ ಎನ್ನುವವರು ಮೇಷ್ಟ್ರಾಗಿದ್ದರು. ನಾನು ಅವರ ನೇರ ವಿದ್ಯಾರ್ಥಿ ಅಲ್ಲ. ಆದರೆ ಅವರು ಒಮ್ಮೆ ‘ಲಂಕೇಶ್ ಅಂತ ಒಬ್ಬ ಇದ್ದಾನೆ. ಅವನು ಯಾವ ಸ್ವಾಮಿಗೂ ಕೇರ್ ಮಾಡಲ್ಲ’ ಎಂದರು.ಆಗ ಅವರ ಬಗ್ಗೆ ಒಂದು ಬಗೆಯ ಆಕರ್ಷಣೆ ಬೆಳೆಯಿತು. ವಿದ್ಯಾರ್ಥಿ ಆಗಿದ್ದಾಗ ‘ಪ್ರಜಾವಾಣಿ’ ಯಲ್ಲಿ ಶನಿವಾರ ಬರುತ್ತಿದ್ದ ಅವರ ಅಂಕಣ ಓದುತ್ತಿದ್ದೆ. ಆಗ ಅವರು ಯಾರಿಗೂ ಹೆದರಿದಿರುವ ವ್ಯಕ್ತಿ ಎಂದು ಅನಿಸಲು ಶುರುವಾಯಿತು.
ನನ್ನ ಓದಿನ ದೃಷ್ಟಿಯಲ್ಲಿ ಕನ್ನಡದಲ್ಲಿ ಕುವೆಂಪು ನಂತರದ ದೊಡ್ಡ ಲೇಖಕ ಲಂಕೇಶ್. ನನ್ನ ಹದಿನೇಳನೇ ವರ್ಷದಲ್ಲಿ ಸೊಫ್ಲೊಕಿಸ್ ನ ಗ್ರೀಕ್ ನಾಟಕದ ಅವರ ಅನುವಾದ ‘ದೊರೆ ಈಡಿಪಸ್ ಹಾಗೂ ಅಂತಿಗೊನೆ’ ಓದಿದ್ದೆ. ಆರಂಭದ ವರ್ಷಗಳಲ್ಲಿ ‘ಈಡಿಪಸ್’ ಓದಿದ್ದಾಗದ ದಿಗ್ಬ್ರಮೆಯಾಗಿತ್ತು. ಅವರು ತೀರಿಕೊಂಡ ನಂತರವೂ ಬಹುದೊಡ್ಡ ಚಿಂತಕ. ಲೇಖಕ ಆಗಿ ನನ್ನಲ್ಲಿ ಉಳಿದುಕೊಂಡಿದ್ದಾರೆ. ಈಗಲೂ ಲಂಕೇಶ್ ಮಾರ್ಗದಲ್ಲಿ ಹಾಗೇ ನಂಬಿಕೆ ಇಟ್ಟುಕೊಂಡಿದ್ದೇನೆ.
ಹಾಗೆಂದು ಅವರನ್ನು ನಾನು ವಿಮರ್ಶಾತ್ಮಕವಾಗಿ ನೋಡಿಲ್ಲ ಎಂದಲ್ಲ ನನ್ನ ಕವನ ಸಂಗ್ರಹ ರೂಪಕಗಳ ಸಾವು ನಲ್ಲಿ ಅವರನ್ನು ಟೀಕಿಸುವ ಪದ್ಯಗಳನ್ನು ಬರೆದಿದ್ದೇನೆ. ನನ್ನ ಮನಸ್ಸಿನಲ್ಲಿ ಅವರ ಬಗ್ಗೆ ಅಗಾಧ ಆರಾಧನೆ ಇತ್ತು. ಆದರೆ ಅವರನ್ನು ನಾನು ಮೆಚ್ಚಿಸಬೇಕಿರಲಿಲ್ಲ.ಅವರ ವ್ಯಕ್ತಿತ್ವ ದೊಡ್ಡದು. ಬಹು ಸೂಕ್ಷ ಮಾತುಗಾರ ಲಂಕೇಶ್ . ಸತ್ಯವನ್ನು ಅವರಂತೆ ಪ್ರಜ್ಞಾಪೂರ್ವಕವಾಗಿ ಮುಟ್ಟಿದ ಲೇಖಕ ಕನ್ನಡದಲ್ಲಿ ಇನ್ನೊಬ್ಬನಿಲ್ಲ.






ನಟರಾಜ್ ಹುಳಿಯಾರ್ ರಂಥ ಗ್ರಾಮೀಣ ಪ್ರತಿಭೆಗಳನ್ನ ಹುಡುಕಿ ಕರ್ನಾಟಕದ ಸಾಹಿತ್ಯಿಕ ಇತಿಹಾಸದಲ್ಲಿ ದೈತ್ಯ ಶಕ್ತಿಯಾಗಿ ಬೆಳೆಸಿದ ವೇದಿಕೆ ಲಂಕೇಶ್ ಪತ್ರಿಕೆ. ಇಲ್ಲದೆ ಇದ್ದಲ್ಲಿ ವೈದಿಕರ ಗೊಂಡಾರಣ್ಯದಲ್ಲಿ ನಟರಾಜ ರಂತಹ ಪ್ರತಿಭೆಗಳು ಕಮರಿ ಹೋಗುತಿದ್ದವು. ಡೀ ಅರ್ ನಾಗರಾಜ್ ರಂಥವರ ಗರಡಿಯಲ್ಲಿ ಪಳಗುತ್ತಾ ಲಂಕೇಶ್ ರವರ ವಿಚಾರಗಳ ಪ್ರಸ್ತುತತೆ ಯನ್ನೇ ವಸ್ತುನಿಷ್ಠವಾಗಿ ವಿಮರ್ಶೆ ಮಾಡಿದವರೋಲ್ಲಬ್ಬರು. ನಮ್ಮ ಕಾಲಘಟ್ಟದಲ್ಲಿ ಲಂಕೇಶ್ , ತೇಜಸ್ವಿ, ನಾಗರಾಜ್ ಮುಂತಾದವರಿಂದ ತೆರವಾದ ಸ್ಥಾನವನ್ನು ತುಂಬುವ ಶಕ್ತಿ ಇರುವಂಥಹ ಇವರೊಂದಿಗಿನ ಸಂವಾದ ಪ್ರಕಟಿಸಿದ ಮಯೂರ ಮಾಸಿಕ ನಿಜಕ್ಕೂ ಅತ್ಯುತ್ತಮ ಕೆಲಸ ಮಾಡಿದೆ.
dear avadhi
thanks for putting me on Avadhi.many of your readers have read mayura after seeing your announcement and intro.thanks once again