ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅನಾನಿಮಸ್ ಕಮೆಂಟುಗಳು ಕೊಟ್ಟ ಆಘಾತ ಒಂದೆರಡಲ್ಲ’

shutterstock_25955569-748782

ನಮಸ್ತೇ

ಮುಖಹೀನರಾಗಿ ಕಮೆಂಟ್ ಮಾಡೋದು- ಇದೊಂದು ವಿಕೃತಿಯಲ್ಲದೆ ಬೇರೇನೂ ಅಲ್ಲ. ಮುಖವಿಲ್ಲದ ಬ್ಲಾಗ್ ಗಳಷ್ಟೇ ಮುಖವಿಲ್ಲದ ಕಮೆಂಟುದಾರರೂ ಇದ್ದಾರೆ. ವಿಷಯಕ್ಕೆ ಸಂಬಂಧಿಸಿದ ಹಾಗೆ, ಆದರೆ ಕೀಳು ಭಾಷೆಯಲ್ಲಿ ಕಮೆಂಟ್ ಮಾಡುವವರು ಕೆಲವರಾದರೆ, ಅಸಲು ಲೇಖನದ ವಿಷಯಾಂತರ ಮಾಡಿ ಹಾದಿ ತಪ್ಪಿಸುವ ಮುಖಹೀನರು ಕೆಲವರು. ಮತ್ತೆ ಕೆಲವರಿದ್ದಾರೆ, ಅವರು ಸುಖಾಸುಮ್ಮನೆ ಹೆಣ್ಣುಮಕ್ಕಳ ಹೆಸರಲ್ಲಿ ಕಮೆಂಟ್ ಮಾಡಿ ಖುಷಿಪಡುತ್ತಾರೆ. ಇದು ಮಾತ್ರ ನಿರುಪದ್ರವಿ ವರ್ಗ. ಹೆಣ್ಣುಹೆಸರಿಟ್ಟುಕೊಳ್ಳುವ ತೆವಲೊಂದು ಬಿಟ್ಟರೆ ಅಂಥಾ ಏನೂ ಸಮಸ್ಯೆಯಾಗೋದಿಲ್ಲ ಇವರಿಂದ.

ನಾನೂ ಅದನ್ನೇ ಹೇಳ್ತೇನೆ. ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸುವಾಗ ಹೆಸರು ಹಾಕದಿದ್ದರೂ ನಡೆಯುತ್ತೆ. ಹಾಗಂತ ಯಾರೋ ಬರೆದಿದ್ದನ್ನ ಎಲ್ಲರೂ ಮೆಚ್ಚಿ ಹೊಗಳಲೇ ಬೇಕೆಂದೇನೂ ಇಲ್ಲ. ಬಯ್ಯಬೇಕೆನಿಸಿದರೆ ಅವಶ್ಯವಾಗಿ ಅವಕಾಶವಿದೆ. ಹೇಡಿಗಳು ಮಾತ್ರವೇ ಹೀಗೆ ಮುಖಹೀನರಾಗಿ ಕಮೆಂಟ್ ಮಾಡುವವರು. ಇದನ್ನು ವಿರೋಧಿಸುವವರ ಜೊತೆಯಲ್ಲಿ ನಾನಂತೂ ಇದ್ದೇನೆ.

ಹೀಗೆ ಅನಾನಿಮಸ್ ಕಮೆಂಟುಗಳು ಕೊಟ್ಟ ಆಘಾತ ಒಂದೆರಡಲ್ಲ ನನಗೆ. ತೀರಾ ವೈಯಕ್ತಿಕ ಸಂಗತಿಗಳವರೆಗೂ ಈ ಪ್ರಹಾರ ನಡೆದಿದೆ. ಇದರಿಂದ ಬೇಸತ್ತು ಬ್ಲಾಗ್ ಅಪ್ ಡೇಟ್ ಮಾಡುವುದನ್ನೇ ಕಡಿಮೆ ಮಾಡಿಬಿಟ್ಟಿದೇನೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಇಂಥ ಅನುಭವ ಜಾಸ್ತಿ ಅನ್ನೋದು ನನ್ನ ಅನಿಸಿಕೆ. ಬ್ಲಾಗ್ ನಲ್ಲಿ ಬರುವ ಹೇಟ್ ಕಮೆಂಟ್ ಗಳು, ಹೆರಾಸ್ ಮಾಡುವಂಥ ಕಮೆಂಟ್ ಗಳು ಸೈಬರ್ ಕ್ರೈಮ್ ವ್ಯಾಪ್ತಿಗೆ ಬರುತ್ತದೆಯಾ? ಇಂಥವರನ್ನು ಪತ್ತೆ ಹಚ್ಚೋದು ಹೇಗೆ? ಇದರಿಂದ ಉಂಟಾಗುವ ಮಾನಸಿಕ ತಲ್ಲಣದಿಂದ ಹೊರಬರೋದು ಹೇಗೆ ಇತ್ಯಾದಿ ಕುರಿತು ಯಾರಾದರೂ ಮಾಹಿತಿ ನೀಡಿದರೆ ನಾನು ಆಭಾರಿಯಾಗಿರುತ್ತೇನೆ.

ಅವಧಿ,

ಸುಮಾರು ಒಂದು ವರ್ಷದ ಹಿಂದಿನಿಂದಲೂ ಅನಾಮಿಕ ಕಮೆಂಟುದಾರರಿಂದ ಇಂತಹ ಸಮಸ್ಯೆಯನ್ನು ಎದುರಿಸಿಕೊಂಡು ಬಂದಿದೇನೆ. ತಿರುಗಿ ಉತ್ತರಿಸಿದ್ದು, ಐಪಿ ನಂಬರಿನ ಮೂಲಕ ಕೆಲವರನ್ನು ಪತ್ತೆ ಹಚ್ಚಿ ಝಾಡಿಸಿದ್ದು ಕೂಡ ನಡೆದಿದೆ. ಆದರೆ ಇವೆಲ್ಲ ಏಕಾಂಗಿ ಹೋರಾಟವಾಗಿತ್ತಷ್ಟೆ. ಈಗ ಇದೊಂದು ಸಂಘಟಿತ ಪ್ರಯತ್ನವಾಗಿ, ನಾನು ಬಹಳವಾಗಿ ಪ್ರೀತಿಸುವ ಬ್ಲಾಗ್ಲೋಕದ ಸ್ವಾಸ್ಥ್ಯ ರಕ್ಷಣೆಯಾಗುವ ಹಾಗಿದ್ದರೆ ಯಾಕಾಗಬಾರದು? ನಾವು ಕೆಲವರು ಇಷ್ಟು ದಿನ ನಮ್ಮಲ್ಲೇ ಗೊಣಗುತ್ತಿದ್ದೆವು. ನೀವು ದನಿಯೆತ್ತಿದ್ದು ಒಳ್ಳೆಯದಾಯ್ತು. ಈ ಬಗ್ಗೆ ಚರ್ಚಿಸಲು, ಚರ್ಚೆ ಮಾತ್ರವಲ್ಲ, ಪರಿಹಾರದ ನಿಟ್ಟಿನಲ್ಲಿ ಸಮಾಲೋಚಿಸಲು ಇದೊಂದು ವೇದಿಕೆಯಾಗಬಾರದೇಕೆ?

ಧನ್ಯವಾದ.

ನಲ್ಮೆ,

ಚೇತನಾ ತೀರ್ಥಹಳ್ಳಿ

‍ಲೇಖಕರು avadhi

19 August, 2009

5 Comments

  1. ರಂಜಿತ್

    ಅನಾನಿಮಸ್ ಗಳ ಕಾಟ ಒಂದಾದರೆ, ಬೇರೆ ಮುಗ್ಧ ಜನರ ಹೆಸರು ಬಳಸಿಕೊಂಡು ಮಾಡುವ ಕಾಮೆಂಟುಗಳ ವಿಕೃತಿ ಇನ್ನೊಂದು ರೀತಿ.(ಇತ್ತೀಚೆಗಷ್ಟೇ ತಾನು ಕನ್ನಡಪ್ರಭ ಪತ್ರಿಕೆಯ ಎಡಿಟೋರಿಯಲ್ ವಿಭಾಗದಿಂದ ಅಂತ ಹೇಳಿಕೊಂಡು ಒಬ್ಬ ವ್ಯಕ್ತಿಯಿಂದ ಕಾಮೆಂಟ್ ಬಂದಿತ್ತು. ನಿಜ ವಿಷಯ ಗೊತ್ತಾದದ್ದು ನಾನು ಕನ್ನಡಪ್ರಭ ಸಂಪಾದಕರಿಗೆ ಕಂಪ್ಲೇಂಟ್ ಮಾಡಿ ಅವರು ಸ್ಪಷ್ಟೀಕರಣ ನೀಡಿದ ಮೇಲೆಯೇ)

    ಸೈಬರ್ ಪೋಲೀಸರಿಲ್ಲದೇ ಹೋದರೆ ಇಂಥ ವಿಕೃತಿ ಮಟ್ಟಹಾಕಲು ಅಸಾಧ್ಯವೇನೋ ಅನ್ನಿಸುತ್ತದೆ.

  2. Balu

    ಎನೂ ಸಮಸ್ಯೆ ಇಲ್ಲ. ಅವರ ಕಾಮೆ೦ಟ್ ನ ಪ್ರಕಟಿಸದೆ ಇದ್ದರೆ ಆಯಿತು. ಬ್ಲಾಗು ನಮ್ಮದು, ಅದರಲ್ಲಿ ಬರುವ ವಿಷಯಗಳೂ, ಬರೆಯುವ ಸ್ವಾತ೦ತ್ರ್ಯ ನಮ್ಮದೆ. ೩-೪ ಬಾರಿ ಪ್ರಕಟಿಸದೆ ಇದ್ದರೆ ಅಮೇಲೆ ಅವರೆ ಕಾಮೆ೦ಟ್ ಹಾಕೊದನ್ನ ನಿಲ್ಲಿಸ್ತಾರೆ. ಎನ೦ತೀರಿ?

  3. ಶ್ರೀನಿವಾಸಗೌಡ

    ನಾನ್ ರೆಡಿ,
    ನನಗೆ ಬಂದಿರುವ ಒಂದಷ್ಟು ಕಾಮೆಂಟುಗಳನ್ನು ಕಳಿಸುತ್ತೇನೆ, ಅವುಗಳ ಐಪಿ ಅಡ್ರೆಸ್ ಕಳಿಸಿಕೊಡಿ ಉಳಿದದ್ದನ್ನ ನಾನ್ ನೋಡಿಕೊಳ್ತೇನೆ.

  4. ಟೀನಾ

    ಶಶಿಧರ ಭಟ್ಟರು ಪ್ರತಿಕ್ರಿಯಿಸಿರೋದು ಒಂದು ರೀತಿಯಲ್ಲಿ ಸರಿ ಅನ್ನಿಸಿದ್ರೂನು
    ನಮ್ಮೆದ್ರಿಗೇ ನಮ್ಮನೇಗೆ ಬಂದು ಅಸಹ್ಯವಾಗಾಡುವವರ ವಿರುದ್ಧ ನಾವು ಸುಮ್ಮನಿರಲಿಕ್ಕಾಗುತ್ತದೆಯೆ ಅಂತ ಯೋಚನೆ ಬಂತು. ನನ್ನ ಬ್ಲಾಗಿನಲ್ಲಿ ಕೆಲಕಾಲದ ಹಿಂದೆ ಇಂತಹ ಪರಿಸ್ಟಿತಿ ಬಂದಿತ್ತು. ನನ್ನ ಹೆಚ್ಚಿನ ಸ್ನೇಹಿತರು ಇಂತಹ ಕಮೆಂಟುಗಳನ್ನು ಇಗ್ನೋರ್ ಮಾಡುವದನ್ನ ಅರಿತಿದ್ದ ನಾನು ಮೊದಲ ಬಾರಿಗೆ ಪ್ರತಿಭಟಿಸುವ ಸಾಹಸ ಮಾಡಿದೆ. ನನ್ನ ಅನೇಕ ಬ್ಲಾಗರ್ ಗೆಳೆಯ ಗೆಳತಿಯರು ಜತೆ ಕೊಟ್ಟರು.ವಿಪರ್ಯಾಸ ಅಂದರೆ ಈ ಹೊತ್ತಿಗೇ ಮಾಧ್ಯಮದಲ್ಲೆ ಇರುವ ಹಿರಿಯ ಬ್ಲಾಗರ್ ಸ್ನೇಹಿತರೊಬ್ಬರು ’ನಿಮ್ಮ ಬ್ಲಾಗಿಗೊಂದು ಲುಕ್ ಇದೆ, ಇಂತಹದ್ದನ್ನೆಲ್ಲ ಮಾಡಿ ಅದನ್ನ ಕೆಡಿಸ್ಕೋಬೇಡಿ!’ ಎಂಬ ಸಲಹೆ ನೀಡಿದರು. ಕೆಲವರಿಂದ ಇಂತಹದ್ದನ್ನ ಮಾಡಿ ಕೆಸರು ಸಿಡಿಸಿಕೊಳ್ಳುವದು ಏಕೆ ಅನ್ನುವಂತಹ ಅರ್ಥದ ಮಾತೂ ಬಂತು. ಬ್ಲಾಗ್ ಟ್ರಾಫಿಕ್ ಜಾಸ್ತಿ ಮಾಡಿಕೊಳ್ಳುವದೇ ಉದ್ದೇಶವಾದರೆ ಇನ್ನೂ ಸ್ಲೀಜೀ ವಿಷಯಗಳ ಬಗ್ಗೆ ಬರೆದುಕೊಳ್ಳಬಹುದು. ನನ್ನ ಉದ್ದೇಶ ಪ್ರತಿಭಟನೆಯಷ್ಟೇ ಆಗಿದ್ದಿತ್ತು. ಆದರೆ ಅಂದಿನ ಪ್ರತಿಭಟನೆಯ ನಂತರ ನನಗೆ ಒಂದು ಅಶ್ಲೀಲ,ಅಬ್ಯೂಸಿವ್ ಕಮೆಂಟು ಬರಲಿಲ್ಲ ಅನ್ನುವದು ನನಗೆ ಸಮಾಧಾನ ಕೊಟ್ಟ ವಿಷಯ. ಎದುರಿಸದೆ ನಾವು ತೊಂದರೆಯನ್ನು ಪರಿಹರಿಸಿಕೊಳ್ಳುತ್ತೇವೆ ಅನ್ನುವದು ಆಗದ ಹೋಗದ ವಿಷಯ. ನೀತಿ ಸಂಹಿತೆಗಳು ಯಾವುದೇ ಜಾಗದಲ್ಲಿ ಲಾಗೂ ಆಗುವಾಗಲೇನೋ ಚೆನ್ನಾಗಿರುತ್ತವೆ. ಆದರೆ ತಿರುಚುವ ಕಲೆಯನ್ನು ಚೆನ್ನಾಗಿ ಬಲ್ಲ ಜಾಣರು ಅದರ ಆಶಯವನ್ನೆ ಉಲ್ಟಾ ಮಾಡಿಬಿಡುವ ಸಾಧ್ಯತೆಗಳು ಇವೆ!!
    ಎಲ್ಲಕಿಂತ ಮೊದಲು ನಾವು ಸುಮ್ಮನಿರದೆ ಇದರ ಬಗ್ಗೆ ದನಿಯೆತ್ತುವಾಗ ಬ್ಲಾಗ್ ಲೋಕದ ಗ್ರೂಪಿಸಮ್ಮು, ಭಿನ್ನಾಭಿಪ್ರಾಯಗಳನ್ನ ಮರೆತು ಎಲ್ಲರೂ ಒಬ್ಬರಿಗೊಬ್ಬರು ಜತೆ ಕೊಡುವದು ಒಳ್ಳೆಯದು. ಯಾವುದೆ ನೀತಿಸಂಹಿತೆ ಇಲ್ಲದೇನೆ 95% ಬ್ಲಾಗರುಗಳು ಇಲ್ಲಿಯತನಕ ಬರೆಯುತ್ತ ಬಂದಿದಾರೆ, ಒಳ್ಳೆಯ ಬರಹಗಳು ಹೊರಹೊಮ್ಮಿವೆ. ರೆಸ್ಪಾನ್ಸಿಬಲ್ ಕಮೆಂಟಿಂಗಿನ ಬಗ್ಗೆ ನಮ್ಮಲ್ಲಿ ಚರ್ಚೆ ಶುರುವಾಗಿರೋದು ಬಲೇ ಒಳ್ಳೇದು.

  5. hneshakumar@gmail.com

    ಸುಮ್ಮ ಸುಮ್ಮನೆ ಯಾವುದೋ ತೆವಲಿಗೆ ಬಿದ್ದವರಂತೆ ಕಾಮ್ಮೆನ್ಟ್ಗಳನ್ನು ಮಾಡಿ ಅದರಿಂದ ಸಿಗುವ ಯಾವುದೋ ವಿಚಿತ್ರ ಖುಷಿಯನು ಪಡೆದು, ತಾವು ಮಾಹನ್ ಕಾರ್ಯ ಮಾಡಿದ್ದೇವೆ ಎನುವಂತೆ ವರ್ತಿಸುತ್ತಿರುವ ಅಂತ ಕಾಮೆಂಟ್ ಧಾರಿಗಳ ಮಾನಸಿಕ ಪರಿಸ್ಥಿತಿಯ ಬಗ್ಗೆ ಅವರು ಗಮನ ಹರಿಸಿದರೆ ಅವರಿಗೆ ಒಳಿತು ಎನಿಸುವುದು.ಅಂತಹ ಕಾಮೆಂಟ್ ಗಳಿಂದ ತಮಗಾಗಲಿ,ಬ್ಲೋಗಿಗರಾಗಲಿ ವೈಯಕ್ತಿಕವಾಗಿ ಯಾವುದೇ ಪ್ರಯೋಜನ ವಿಲ್ಲ ಎನುವುದನ್ನು ಎಲ್ಲರು ಅರಿತರೆ ಒಳಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading