ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅಂಬೇಡ್ಕರ್ ಗೆ ಅಪಮಾನ ಮಾಡಿದ, ಕಲ್ಬುರ್ಗಿಯವರನ್ನು ಛೋಟಾ ರಾಜನ್ ಗಿಂತ ಕಡೆ' ಎಂದ ಬಾಲಗಂಗಾಧರ ವಿರುದ್ಧ ದೂರು

ಪ್ರೊ. ಬಾಲಗಂಗಾಧರ ಹೈದರಾಬಾದಿನ ಇ.ಎಫ್.ಎಲ್.ಯು.(ಇಂಗ್ಲಿಷ್ ಮತ್ತು ವಿದೇಶೀ ಭಾಷೆಗಳ ವಿ.ವಿ.)ದಲ್ಲಿ ನವೆಂಬರ್ 2-4, 2015 ರಲ್ಲಿ ನಡೆದ ಅಂತರ್ರಾಷ್ಟ್ರೀಯ ಸಮ್ಮೇಳನದಲ್ಲಿ ಮತ್ತು ಆ ನಂತರ ವೆಬ್ ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ಡಾ. ಕಲಬುರ್ಗಿ, ಡಾ. ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ, ಕೀಳು ಅಭಿರುಚಿಯ ಟೀಕೆಗಳನ್ನ ಮಾಡಿದ್ದಾರೆ.  ದಲಿತರ, ಮುಸ್ಲಿಮರ, ಕ್ರಿಶ್ಚಿಯನ್ನರ ವಿರುದ್ಧ ದ್ವೇಷಕಾರಿ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂದು ವರದಿಯಾಗಿದೆ. 

balagangadharaಬೆಲ್ಜಿಯಂನ ಘೇಂಟ್ ವಿ.ವಿ.ಯ ಪ್ರೊ. ಬಾಲಗಂಗಾಧರ ಈ ಸಮ್ಮೇಳನದಲ್ಲಿ ಡಾ.ಅಂಬೇಡ್ಕರ್ ಅವರನ್ನು ‘ಈಡಿಯಟ್’ ಎಂದು ಕರೆದು, ಅವರಿಗೆ ಕೊಲಂಬಿಯಾ ವಿ.ವಿ. ಹೇಗೆ ಡಾಕ್ಟರೇಟ್ ಕೊಟ್ಟಿತು ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ದಿಲ್ಲಿಯಲ್ಲಿ ‘ಯಾರೋ, ಅವರ ಹೆಸರು ನನಗೆ ನೆನಪಿಗೆ ಬರುತ್ತಿಲ್ಲ’ (ಪ್ರೊ. ನರೇಂದ್ರ ಜಾಧವ್, ಯೋಜನಾ ಆಯೋಗದ ಮಾಜಿ ಸದಸ್ಯ ಬಗ್ಗೆ ಅವರ ವ್ಯಂಗ್ಯ) ‘ಅವರ ಸಮಗ್ರ ಕೃತಿಗಳನ್ನು ಸಂಪಾದಿಸಿದರಂತೆ’ ಎಂದು ಹೇಳಿದರು.

ಅದೇ ಸಮ್ಮೇಳನದಲ್ಲಿ ಅವರು ಇ.ಎಫ್.ಎಲ್.ಯು. ವಿ.ವಿ.ಯನ್ನು ‘ಹುಚ್ಚರ ಮನೆ’ ಎಂದೂ, ಸಂವಾದದಲ್ಲಿ ಪ್ರೊಫೆಸರ್ ಒಬ್ಬರ ಹೇಳಿಕೆಗೆ ಸಭಿಕರು ಕರತಾಡನದೊಂದಿಗೆ ಮೆಚ್ಚಿಗೆ ಸೂಚಿಸಿದಾಗ, ಅವರ ಧರ್ಮ(ಮುಸ್ಲಿಂ)ವನ್ನು ಎತ್ತಿ ಆಡಿ , ಇದು ‘ಭಯೋತ್ಪಾದನೆಯನ್ನು ಹರಡುವುದು’ ಎಂದು ಕಮೆಂಟಿಸಿದರು. ಸಮ್ಮೇಳನದ ಸಮಾರೋಪ ಭಾಷಣ ಮಾಡುತ್ತಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ “ನೀವು ಇಂತಹ ಜಾತಿ ಸರ್ಟಿಫಿಕೇಟು ಹೊತ್ತ ನಾಲಾಯಕ್ಕು, ಈಡಿಯಟ್ ಕತ್ತೆಗಳ “(ಇಬ್ಬರು ವಿ.ವಿ.ಯ ಪ್ರೊಫೆಸರುಗಳ ಬಗ್ಗೆ ಹೇಳಿದ ಮಾತು) ಪಾಠ ಕೇಳಬೇಕಾದ ನಿಮ್ಮ ಭವಿಷ್ಯದ ಬಗ್ಗೆ ಕಳವಳ ಪಡಬೇಕು ಎಂದರು.

ಈ ಎಲ್ಲವನ್ನು ಪ್ರೊ. ಬಾಲಗಂಗಾಧರ ಅವರ ವಿರುದ್ಧ ತಕ್ಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ 42 ಇ.ಎಫ್.ಎಲ್.ಯು.ನ ಅಧ್ಯಾಪಕರು ಕುಲಪತಿಗೆ ಕೊಟ್ಟ ದೂರಿನಲ್ಲಿ ಹೇಳಲಾಗಿದೆ. ದೂರುದಾರರು ಇಂತಹ ಹೇಳಿಕೆಗಳು ಹಲವು ಕ್ರಿಮಿನಲ್ ಸಿವಿಲ್ ಮೊಕದ್ದಮೆಗಳಿಗೆ ಯೋಗ್ಯವಾಗಿದ್ದು, ಅದನ್ನು ಕೂಡಲೇ ಹೂಡಬೇಕು ಎಂದು ಆಗ್ರಹಿಸಿದೆ. ಅವರು ಈ ಹೇಳೀಕೆಗಳಿಗೆ ಪ್ರತ್ಯಕ್ಷದರ್ಶಿಗಳಾಗಿದ್ದು, ಇಡೀ ಸಮ್ಮೇಳನದ ವಿಡಿಯೋ ದಾಖಲೆ ಸಹ ಇದೆ ಎಂದಿದ್ದಾರೆ. ಪೂರ್ಣ ದೂರಿನ ಪ್ರತಿ ಇಲ್ಲಿದೆ.

https://tamilsolidariteit.files.wordpress.com/…/indianprote…

ಇದು ಸಾಲದೆಂಬಂತೆ ನವೆಂಬರ್ 27ರಂದು ‘ಡೈಲಿ ಒ’ ಎಂಬ ವೆಬ್ ಮ್ಯಾಗಜೀನಿನಲ್ಲಿ ಬರೆದ ಲೇಖನದಲ್ಲಿ ಡಾ. ಅಂಬೇಡ್ಕರ್ ಅವರನ್ನು ‘ಈಡಿಯಟ್’ ಎಂದು ಕರೆದಿದ್ದನ್ನು ಸಮರ್ಥಿಸಿದ್ದಾರೆ.. ಇನ್ನೂ ಮುಂದೆ ಹೋಗಿ , ಡಾ. ಕಲಬುರ್ಗಿ ಅವರನ್ನು ‘ಅಸಹಿಷ್ಣು’ ಎನ್ನುತ್ತಾ, ಅವರ ‘ನೈತಿಕತೆ ಮತ್ತು ಬೌದ್ಧಿಕ ಪ್ರಾಮಾಣಿಕತೆಗಳ ಬಗ್ಗೆ ಛೋಟಾ ರಾಜನ್ ನ್ನು ನಾಚಿಸುವ ಕತೆಗಳು ಚಾಲ್ತಿಯಲ್ಲಿವೆ’ ಎಂದು ಬರೆದಿದ್ದಾರೆ.

http://www.dailyo.in/…/intolerance-aamir-…/story/1/7637.html

ಅವರ ಕೊಲೆ ಸಹ ‘ಅವರ ಸಡಿಲ ನೈತಿಕತೆಯೇ ಕಾರಣ ಎಂಬ ಕತೆಗಳು ಕರ್ನಾಟಕದಲ್ಲಿ ಹರಡಿವೆ’ ಎನ್ನುತ್ತಾ ಅಸಹಿಷ್ಣು ಅಲ್ಲದೆ ‘ಇನ್ನೇನು ಸಹಿಷ್ಣು ಜನರನ್ನು ಕೊಲೆ ಮಾಡಬೇಕೆ? ಎನ್ನುವಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ.

ಪ್ರೊ. ಬಾಲಗಂಗಾಧರ ಆಧುನಿಕೋತ್ತರವಾದದ ಒಂದು ಪ್ರಬೇಧದ ಪ್ರತಿಪಾದಕರಾಗಿದ್ದು, ಅವರ ಪ್ರಭಾವದಿಂದ (ಅವರು ಕೆಲಸ ಮಾಡುವ) ಬೆಲ್ಜಿಯಂನ ಘೇಂಟ್ ವಿ.ವಿ. ಸಹಕಾರದಲ್ಲಿ ಕುವೆಂಪು ವಿ.ವಿ.ದಲ್ಲಿ ‘ಸಿ.ಎಸ್.ಎಲ್.ಸಿ.’ (ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ)ವನ್ನು ಸ್ಥಾಪಿಸಲಾಗಿತ್ತು. ಪ್ರೊ. ಬಾಲಗಂಗಾಧರ ಮತ್ತು ಈ ಕೇಂದ್ರದ ಅಧ್ಯಾಪಕ-ಸಂಶೋಧಕರು ತಮ್ಮ ಹಲವು ಸಂಶೋಧನೆ, ಲೇಖನ, ಪುಸ್ತಕಗಳ ಮೂಲಕ ಕರ್ನಾಟಕದ ಇತಿಹಾಸ, ಸಮಾಜ, ಸಂಸ್ಕೃತಿಗಳ ಬಗ್ಗೆ ತೀರಾ ವಿವಾದಾಸ್ಪದ ಮತ್ತು ಗಟ್ಟಿ ನೆಲೆ ಇಲ್ಲದ ಹೊಸ ಸಿದ್ದಾಂತಗಳನ್ನು ಹುಟ್ಟಿ ಹಾಕಿ ಪ್ರಚಾರ ಮಾಡುತ್ತಿದ್ದರು ಎಂದು ಇಲ್ಲಿ ನೆನಪಿಸಿಕೊಳ್ಳಬಹುದು.

ಮಡೆಸ್ನಾನವನ್ನು ಮೌಢ್ಯಾಚರಣೆ, ಅಪಮಾನಕಾರಿ ಎಂದು ಬೇರೆಯವರು ವಿರೋಧಿಸುವುದು ತಪ್ಪು. ಆಚರಣೆ ಮಾಡುವವರು ಅದನ್ನು ಅಪಮಾನಕಾರಿ ಎಂದು ತಿಳಿಯದಿದ್ದರೆ ಉಳಿದವರು ಅದನ್ನು ವಿರೋಧಿಸುವುದು ಹಿಂಸೆ ಸಹ. ಕರ್ನಾಟಕದಲ್ಲಿ ಜಾತಿ ಪದ್ಧತಿ ಎಂಬುದು ಬ್ರಿಟಿಷರು ಹುಟ್ಟು ಹಾಕಿದ ಪರಿಕಲ್ಪನೆ. ವಾಸ್ತವವಾಗಿ ಜಾತಿ ಎಂಬುದೇ ಇಲ್ಲ. ವಚನಕಾರರು ಜಾತಿವ್ಯವಸ್ಥೆ ವಿರುದ್ಧ ಚಳುವಳಿ ಹೂಡಿದ್ದರು ಎನ್ನುವುದು ಆಧಾರರಹಿತ. ಇವೆಲ್ಲಾ ‘ಸಿ.ಎಸ್.ಎಲ್.ಸಿ.’ ‘ಸಂಶೋಧನೆ’ಗಳು. ಅವರ ಈ ಸಿದ್ಧಾಂತಗಳು ವಿದ್ವಾಂಸರ ತೀವ್ರ ಟೀಕೆಗೆ ಒಳಗಾಗಿದ್ದು ಡಾ, ಕಲಬುರ್ಗಿ ಅವರು ಈ ವಾಗ್ವಾದದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಮೇಲೆ ‘ಸಿ.ಎಸ್.ಎಲ್.ಸಿ.’ ಕೇಂದ್ರವನ್ನು ಮುಚ್ಚಲಾಗಿತ್ತು ಎಂದೂ ಇಲ್ಲಿ ನೆನಪಿಸಿಕೊಳ್ಳಬಹುದು. ಡಾ, ಕಲಬುರ್ಗಿ ಅವರನ್ನು ‘ಅಸಹಿಷ್ಣು’ ಎಂದು ಕರೆಯಲು ಇದೇ ಕಾರಣವಾಗಿರಬಹುದು.

– ಜನಶಕ್ತಿ ನಡೆಸಿದ ಉತ್ಸವ ಮತ್ತು ಸಮಾವೇಶದಲ್ಲಿನ ಆಗ್ರಹದ ಪ್ರತಿಯಿಂದ

bala1

bala2

bala3bala4bala5

bala6

‍ಲೇಖಕರು admin

16 December, 2015

2 Comments

  1. KVTirumalesh

    ಒಬ್ಬ ಪ್ರೊಫೆಸರ್ ಆಗುವ ಯೋಗ್ಯತೆ ಈ ಬಾಲಗಂಗಾಧರ್-ಗೆ ಇಲ್ಫ. ಇವರಿಗೆ ಪ್ರೊಫೆಸರ್ ಹುದ್ದೆ ನೀಡಿದ ವಿಶ್ವವಿದ್ಯಾಲಯಕ್ಕೇ ಇವರು ದೊಡ್ಡ ಅವಮಾನ. ಘಂಟ್ ವಿಶ್ವವಿದ್ಯಾಲಯಕ್ಕೆ ಬಹುಶಃ ಈ ವ್ಯಕ್ತಿ ಏನು ಮಾಡುತ್ತಿದ್ದಾರೆ ಎನ್ನುವುದು ಅರಿವಿಲ್ಲ! ಅದು ಹೇಗೋ ಭಾರತದ ಹೆಸರು ಹೇಳಿ ಅಲ್ಲಿ ನುಸುಳಿಕೊಂಡಿದ್ದಾರೆ. ಇವರಿಂದ ಭಾರತಕ್ಕೂ ಕಳಂಕವೆಂದು ಬೇರೆ ಹೇಳಬೇಕಿಲ್ಲ.

    ಬಾಲಗಂಗಾಧರ್ ಅವರೇ, ಒಬ್ಬ ಪ್ರೊಫೆಸರ್ ಹೀಗೆ ಕೆಟ್ಟ ಭಾಷೆಯಲ್ಲಿ ಮಾತಾಡುತ್ತಾರೇನ್ರಿ? ಇತರರನ್ನು ಹಳಿಯುವವರು ತಮ್ಮನ್ನು ತಾವೇ ಬಿಟ್ಟುಕೊಟ್ಟಂತೆ. ಮೊದಲು ತಿದ್ದಿಕೊಳ್ಳಿ. ವಿರೋಧ ಸ್ವಾಗತಾರ್ಹ, ಆದರೆ ನಿಂದನೆಯಲ್ಲ. ಘೆಂಟ್-ನಲ್ಲಿ ನೀವು ಇಷ್ಟನ್ನಾದರೂ
    ಕಲಿತುಕೊಳ್ಳಬೇಕಿತ್ತು. ಕಲಿತುಕೊಳ್ಳದೆ ಇರುವುದು ನಿಮ್ಮ ದುರ್ದೈವ.

    ಕೆ.ವಿ. ತಿರುಮಲೇಶ್

  2. M A Sriranga

    ನಮ್ಮ ಧಾರ್ಮಿಕ, ರಾಜಕೀಯ, ಸಾಮಾಜಿಕ, ಸಾಹಿತ್ಯ ಮತ್ತು ಸಂಸ್ಕೃತಿಯರಂಗದಲ್ಲಿ ಕೆಲವು iconಗಳು ಇರುತ್ತವೆ. ಅವುಗಳ ಬಗ್ಗೆ ಮಾತಾಡುವ ಮತ್ತು ಬರೆಯುವ ದುಸ್ಸಾಸಕ್ಕೆ ಕೈ ಹಾಕುವುದು ಜೇನುಗೂಡಿಗೆ ಕಲ್ಲು ಒಗೆದಂತೆ. ಇದನ್ನು ಬಾಲಗಂಗಾಧರ ಅವರು ಅರ್ಥಮಾಡಿಕೊಳ್ಳಬೇಕಿತ್ತು. ವಚನಗಳು ಮತ್ತು ಜಾತಿವ್ಯವಸ್ಥೆಯ ಬಗ್ಗೆ ಮಾತಾಡಿ, ಬರೆದು ಈಗಾಗಲೇ ಸಾಕಷ್ಟು ವಿರೋಧಕಟ್ಟಿಕೊಂಡಿರುವಾಗ ಅದು ಮಾಯುವ ಮೊದಲೇ ಈ ಉಪದ್ವಾಪ್ಯ ಏಕೆ ಬೇಕಿತ್ತು?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading