ಸಾಹೇಬಗೌಡ ಬಿರಾದಾರ್
ಚಂದೈತಿ
ಜಡೆ
ನೋಡಾಕ…
ನಿನ್ನ
ಕಟೆದವನು
ಹೆಂಗ
ಇರಬೇಕ…
ನಿನ್ನ
ಜಡೆಯ
ಒಜ್ಜಿಗಿ…
ಕುತ್ತಿಗಿ
ನಡ
ಚುಳುಕ
ಅಂದಿತಂತ
ಭಯ
ನಮ್ಮ ಅಜ್ಜಿಗಿ…
ನಿನ್ನ
ಮೈ
ಮಾಟ..
ಕುಡಗೋಲ
ತಗೊಂಡು
ಕೆತ್ತಿದಂಗೈತಿ
ಕಡಗೋಲ…
ಅವ
ಓದಿರಬೇಕು
ಭೂಗೋಲ
ಖಗೋಲ…
ಅದ್ಕ ಕೆತ್ಯಾನ
ಗೋಲ…ಗೋಲ..
ಕಂಡು
ಬರ್ದ,ಬರ್ದ
ಹಾಕ್ತಾರೆ
ತಮ್ಮತಮ್ಮ
ಗೋಳ…
ಟಿ ರಾಧ
ಮುಡಿಗೇರಿದ ಪುಷ್ಪದಿಂದೆದ್ದ ಕಿರಣಗಳ ತೇಜಸ್ಸು,
ಅಂಗಳದಲ್ಲೆಲ್ಲಾ ಚೆಲ್ಲಾಡಿ,
ಮೈಯ ಸ್ಪರ್ಶಮಾಡಿ ಹೆಚ್ಚಿಸಿತು ನನ್ನ ವರ್ಚಸ್ಸು.
ನೀಳವಾದ ಜೋಗದಿಂದ ತಳ್ಳಿ,
ನೀರ ರಭಸಕ್ಕೆ ಕೊಚ್ಚಿಹೋಗುತ್ತಿದ್ದ ಎನ್ನ ಕೈಹಿಡಿದು ಎಳೆದದ್ದು,
ನಾಜೂಕಿನಿಂದ ಹೆಣೆದು ದಡದಲ್ಲಿ ಕೈಚಾಚಿ ನಿಂತಿದ್ದ ಬಳ್ಳಿ.
ತನ್ನ ತೆಕ್ಕೆಗೆ ಸೆಳೆಯುವ ಹುಚ್ಚಾಟದಲ್ಲಿತ್ತು ನದಿ,
ಮೇಲೇರಿ ಆಶ್ರಯ ಪಡೆಯುವಂತೆ ಪ್ರಸ್ತಾಪವಿಟ್ಟಿತ್ತು,
ಜಡೆಯಲ್ಲಿನ ಬಿಲ್ಲೆಯಂತ್ತಿದ್ದ ದ್ವೀಪಗಳ ಸನ್ನಿಧಿ.
ದಡವನ್ನೇರಿ ನುಣುಪಾದ ಬೆನ್ನ ಮೈದಾನದಲಿ ಜಾರಿ,
ನನ್ನೊಂದು ಸ್ಪರ್ಶಕ್ಕೇ ನಿಮಿರಿ ನಿಂತ ಹುಲ್ಲಿನ ಮಧ್ಯೆ ನುಸುಳಿ,
ಕಟಿಯ ಹಳ್ಳದಲಿ ದಪ್ಪೆಂದು ಬಿದ್ದೆ ಹೌಹಾರಿ.
ಅಮಲೇರಿದ ಮಬ್ಬಿನಲ್ಲೇ ಕಣ್ಣಿಗೆ ರಾಚಿತು ನಿತಂಬಿನಿಯ ಸೊಬಗು,
ಶಾಂತವಾಗಿದ್ದ ಪುಷ್ಕರಿಣಿಯ ಕೆದಡಿ ರಾಡಿ ಮಾಡಿತು,
ಎತ್ತಲೋ ತಿರುಗಿ ನಿಂತಿದ್ದ ಅವಳ ಚಹರೆ ಕಾಣಲಿಲ್ಲ ಎಂಬ ಕೊರಗು.
ಕಾದು ಕುಳಿತು ಅವಳನ್ನೇ ದುರುಗುಟ್ಟಿ ನೋಡಿದರೆ,
ಏನು ಬಂತು ಪ್ರಯೋಜನ?
ಊರಿಗೆ ತಿರುಗಿ ಮತ್ತೆ ಬರೋಣವೆಂದರೆ,
ಮದವೇರಿಸುವ ಈ ಸೌಂದರ್ಯವನ್ನು ಉಳಿಸುವರೇ ನಮ್ಮ ಜನ?
ಸಾಹೇಬಗೌಡ ಬಿರಾದಾರ್ ಅವರ ಒಂದು ಪದದಿಂದ ಕೂಡಿದ ಸಾಲು ಮತ್ತು ಬಳಸಿದ ಲಘುಭಾಷೆ ಚನ್ನಗಿದೆ. ಕವಿತೆ ಅರ್ಥವಾಗುವಂತಿರಬೇಕು. ಆದರೆ ಕಲ್ಪನೆಯ ಭರದಲ್ಲಿ ಓದುಗನ ತಲೆ ತಿನ್ನ ಬಾರದು.
ಇಲ್ಲಿ ಬಿರಾದಾರ್ ಅವರು ಸರಳವಾಗಿ ವಿವರಿಸುತ್ತಾರೆ. ತುಟಿ ತನ್ನಷ್ಟಕ್ಕೆ ತಾನೇ ಅರಲಿಕೊಳ್ಳುತ್ತೆ.