ಆನಂದ್ ಕುಂಚನೂರ್
ಜೀವನ್ ಪ್ರಕಾಶನದ ರಾಜ್ಯಮಟ್ಟದ
ಯುಗಾದಿ ಕಾವ್ಯ ಸ್ಪರ್ಧೆ-2016ರ ಬಹುಮಾನಿತ ಕವಿತೆ
ಜನ್ಮ ಕೊಟ್ಟವನಾಗಿ ಅಪ್ಪನಾಗದ ನಿನ್ನನ್ನು ದ್ವೇಷಿಸುತ್ತೇನೆ
ಸಾಲದ ಒಂದು ವೀರ್ಯದ ಋಣಕ್ಕೆ ಕ್ಷಮಿಸಿಬಿಡುತ್ತೇನೆ
ನಾನೂ ಮಗನಲ್ಲ ಬಿಡು
ಧೂಮ ಹೆಣ್ಣು ಹೆಂಡಗಳಿತ್ಯಾದಿ ಚಟಗಳಿಲ್ಲದ ಕುಲದೈವ ಬಡತೇಶ್ವರನ ಶಾಪವನು ಮೆಟ್ಟಿನಿಂತ, ಅದಕಾಗಿ
ಘಟೋದ್ಗಜನಂತೆ ಸಕಳವ ಆವರಿಸಿದ ನಿನ್ನ ನೀನೇ ಪುರುಷೋತ್ತಮನೋತ್ತಮೋತ್ತಮ
ಮಾದರಿಯೆಂದು ಸ್ವಚ್ಛಂದ ಅಚ್ಚಾಗಿದ್ದೆ ನವುರಾಗಿ
ಒಂದು ಲೆಕ್ಕದಲಿ ಭಾವಲೋಕದಧಿಪತಿ! ಕಾಣಲೇ ಇಲ್ಲ ನಿನ್ನಾಚೆಯ ಲೋಕ
ಚೆನ್ನಾದರ್ಶದ ಭೃಂಗಾರ!
ಯಾಕೋ ಅಪ್ಪ ಹೊತ್ತು ನಿಂತೆಪ್ಪ
ಮರ್ಯಾದೆಯಗುದಮುರಗಿ; ಸಂತೆಯೂ ನಿನ್ನಂತೆ ತಿರುಗಿ ನೋಡೊಮ್ಮೆ, ಒಮ್ಮೆ
ಏಕಾಏಕಿ ಸತ್ತಂತೆ ಮತ್ತೊಮ್ಮೆ ಗಳಬಳಗಳಬಳ ಅತ್ತಂತೆ
ಅಲ್ಲಿಗೇನು ತಂದೆ; ನಿಂದೆ ಹಿಂದೆ ನಾನಿಂದೆ
ಅಪ್ಪ ಸೇರಿಸ ಹೊರಟ ಚುಕ್ಕೆ ನಕ್ಷತ್ರಗಳ ಕನಸಿಂದ ಹಲುಬುತಿವೆ
ಅಪ್ಪನಪ್ಪನ ಗೀಟು ಎಲ್ಲ ಜ್ಯಾಮಿತಿಯಲಿ ಜಾರುತಿವೆ
ತಪ್ಪಬಹುದೆ? ಒಪ್ಪಬಹುದೆ?
ಮಾತು ತಪ್ಪಾದರೂ ತಪ್ಪು ಮಾತಾದರೂ
ಜೆನ್-ಎಕ್ಸ್ತಂದೆಯಂತೆ? ವಿಜ್ಞಾನ ಬಡಬಡಿಸುತ್ತಿದೆ
ಜೆನ್-ವೈನಾನಾಗದೆ ವಿಧಿಯಿಲ್ಲವೆಂಬುದಾಗಿ ದಿಕ್ಕೆಟ್ಟ ಕೂಸು
ಏನು ವೈರಾವೈರ ಏನು ಭಾವಸಮರ ಇಷ್ಟಾ-
ಗಿಯೂ ನಿನ್ನ ಕನಸಿನ ಗೂಬೆ ನನ್ನಮೇಲೆ
ನನ್ನ ಆಸೆಯ ಪುಟ್ಟ ಕೋಗಿಲೆ ನಿನ್ನ ಮೇಲೆ
ಮೇಲಿಂದ ಮೇಲೆ ಹಿಂಡಿದಷ್ಟೂ ಹೂ ಘಮಲು
ಆಮೇಲೂ ಸಂಬಂಧದತಃಖ್ತೆಯೇ ಬುಡಮೇಲು
ಅವನು ನಿನ್ನ ಮಗನಲ್ಲ ಬಿಡು, ಇವನು ನಿನ್ನಮಗ
ಭಂಡಬಡ್ಡೀಮಗ!
ಅಟ್ಟದಮ್ಯಾಲ ಅಟ್ಟ್ಯಾಪಾಟ್ಟ್ಯಾ
ಅಡ್ಯಾಮುಟ್ಟ್ಯಾಗುಡಗುಡಮುತ್ಯಾ
ಹೋಯ್
ಬಾಲ್ಯದಾಟವೂ ಅಪಥ್ಯ ಯೌವನದ ಪ್ರೀತಿಯೂ ನೇಪಥ್ಯ
ನೆರೆಹೊರೆಯವರಂತಾಗಲೆಂದು ಹಟ
ನನ್ನದೋ ಎಲ್ಲರಂತಾಗದ ಮಿತಿಗಳ ಮೀರುವ ಜಿಗಿದಾಟ
ಲೋಕದ ಕುಣಿಕೆಯಲಿ ಮಾನ ಮರಣದಂಜಿಕೆ
ಜೀವ ಇನ್ನೂಹೊರಬರದ ಖಾಲಿ ಸ್ಮರಣ ಸಂಚಿಕೆ
ಇನ್ನು ಮಗ ಹೆಂಗಾದೆನಪ್ಪ?
ಮೂವತ್ತೆರಡ-
ನಾಡಿ
ಅರುವತ್ತು ನಾಲ್ಕು ತೋರುಬೆರಳಿನಾಚೆ ಫಲಿಸಿದ್ದು ಒಂದು ಹೂ ಮೂದೇಟು
ಚಕ್ಕಾಮಕ್ಳಿ ಹಾಕಿದ್ದ ಬೇರು ಅಚಾನಕ್ಬಿಳಲಾಗಿದ್ದೇಕೋ
ಬಳ್ಳಿಬಾಹುಗಳು ಸಹಿಸಿದುವು ತುಟಿಪಿಟಕ್ಕೆನ್ನದೆ
ನೆರಳಾಗದಿದ್ದರೂ ಕತ್ತಲಾಗದಿದ್ದರೆ ಸಾಕಿತ್ತು ಬಾಳ್ಮನೆಗೆ
ಕೋಟಿ ಮಕ್ಕಳಾದರೂ ಒಬ್ಬ ಮಗನಾಗುವುದ ಸಾಧ್ಯ
ನಾ ನಿಂತರೂ ನೀಚಲಿಸುವೆ
ನೀನಿಲ್ಲಲು ನಾನಿಚ್ಚಲನಾರಾಯಣ
ಯದುಕುಲದಾಯಣಇಕ್ಷ್ವಾಕುವಂಶಾಯಣ
ಕಲಿಯುಗದ ತಾರಣದಲಿ ಬಳಲಿದ ಬಕುಳ
ಅದು ನಿನಗೆ ಬೇಕು
ಇದು ನನಗೆ ಬೇಡ
ಯಪ್ಪಾ! ನೀನಿತ್ತ ದೇಹದಲಿ ಎಷ್ಟೊಂದುಕಣ್ಣುಗಳು
ಕಣ್ಣು ಕಣ್ಣೆಲ್ಲ ನವಿಲು ಒಂದೇ
ಗುರಿ – ನವಿಲಾದವರ ಕಣ್ಣಮುಂದೆ
ನಲಿವಾಗುವ ತಣ್ಣೆದೆ
ಮಗ ಅಪ್ಪನಾಗದ ಮಗ ಅಪ್ಪ ಮಗುವಾಗದ ಮಗ
ಆ ಈ ಎಲ್ಲ ಸಮೀಕರಣ ಸಮೇತ
ಋಣವಾದರೇನು ಹೆಣವಾದರೇನು
ತಾನು ತಾನಾಗಿ ತೊನೆದು ನಿನ್ಹೆಸರ ಉಳಿಸಿದಲ್ಲದೆ
ನಾನು ನಿನ್ನ ಮಗನೇ ಅಲ್ಲ!
ತುಂಬ ಸೊಗಸು
ಮಾನ್ಯರೇ,
ಈ ಸಲದ ಯುಗಾದಿ ಕಾವ್ಯ ಸ್ಪರ್ಧೆ ೨೦೧೬ ಯಲ್ಲಿ ಶ್ರೀ ಆನಂದ್ ಕುಂಚನೂರ ರವರು ಬರೆದ “ಒಂದು ವೀರ್ಯದ ಋಣ…” ದೊರೆತಿರುವುದು ಸಂತಸದ ಸಂಗತಿ. ನಿಜವಾಗಿಯೂ ಅರ್ಥಪೂರ್ಣ ಕಾವ್ಯ. ಪ್ರಚಲಿತ ವಿದ್ಯಮಾನಕ್ಕನುಗುಣವಾಗಿ ರಚಿಸಿರುತ್ತಾರೆ. ಧನ್ಯವಾದಗಳು.
—ಜೆ.ಎಸ್.ಗಾಂಜೇಕರ ಕುಮಟಾ (ಉ.ಕನ್ನಡ.)