ಎಂ ಜವರಾಜ್
ಇದ್ದಕ್ಕಿದ್ದ ಹಾಗೆ
ಕೆಂಡದಂತಾದ ಕವಿತೆ,
ಇದುವರೆಗೂ ಬರೆದ ಹಾಗೆ
ಬರೆಯಬೇಡ
ಎನ್ನಲು ಕಾರಣವಿದೆ.
ಹೊಸ ಕಾಗದದ ಮೇಲೆ
ಬಹು ಬೇಗ
ಅಕ್ಷರ ಮೂಡಿಸುವುದು
ತುಸು ಕಷ್ಟ
ಅಂತ ಗೊತ್ತು ಮಾರಾಯ.
ಶಾಯಿ ಕಕ್ಕುತಿದೆ
ಮುಳ್ಳಿನ ಮೊನೆಯಿಂದ
ಗೀಚುವ ಪೆನ್ನು
ಹೊಸದಲ್ಲವೇ ಮಾರಾಯ
ಎಷ್ಟಿದ್ದರೇನು ಶಾಯಿ
ನೀಟಾಗಿ ಬರೆಯದ ಮೇಲೆ.
ಒಮ್ಮೆಲೆ
ಕೆಂಡದಂತೆ ಸುಡುತ್ತಿದ್ದ ಕವಿತೆ
ತುಸು ತಂಪಾದ ಹಾಗೆ,
ಹೊಸ ಕಾಗದಕೆ
ಗೀಚಿಸಿಕೊಳುವ ತವಕ.
ಮೂಡುವ ಅಕ್ಷರಗಳಿಗೂ ಅಷ್ಟೇ
ಬರೆವ ಪೆನ್ನಿಗೂ ಅಷ್ಟೇ
ಓದುವ ಮನಸಿಗೂ ಅಷ್ಟೇ..
ತವಕ!
ಸರಳವೂ ಸಾವಧಾನವೂ ಮೈವೆತ್ತ ಕವಿತೆ ಮಾತಿನಲ್ಲೂ ನಿಧಾನಿಸಿದೆ. ಈ ಹೊತ್ತಿನ ಕಾವ್ಯದ ಹಾದಿಯಲ್ಲಿ ಹೀಗೆ ಬರೆಯುವ ಕಾವ್ಯದ ಜೊತೆಗೆ ನಡೆವವರ ಹೆಜ್ಜೆಗಳು ದಣಿವಿಲ್ಲದವು. ಮಹತ್ವಾಕಾಂಕ್ಷೆಯಲ್ಲದ ಕವಿತೆಗಾಗಿ ಅಭಿನಂದನೆಗಳು ಜಯರಾಜು ಅವರಿಗೆ