'ಮಾತೇ ಅರ್ಥವಾಗದವನಿಗೆ ಮೌನ ಅರ್ಥವಾಗುತ್ತದೆಯೇ….?’ – ಬಿ ವಿ ಭಾರತಿ

ಭಾರತಿ ಬಿ ವಿ

ಮೇಡಮ್ ನೀವು ಇವತ್ತು ಓದಿದ ಕವಿತೆ ತುಂಬ ಚೆನ್ನಾಗಿತ್ತು … ಈ ಥರ beauty and brain ಒಟ್ಟೊಟ್ಟಿಗೇ ಇರೋದು ತುಂಬ ಅಪರೂಪ!
ನಿಮ್ಮ ಮುಂದಿನ ಪ್ರಾಜೆಕ್ಟ್ ಯಾವ್ದು ಸರಳಾ?
ಅಕ್ಕಮಹಾದೇವಿ ವಚನಗಳನ್ನ ಇಂಗ್ಲೀಷಿಗೆ ಅನುವಾದ ಮಾಡೋದಿತ್ತಲ್ಲ ಅದೇನಾಯ್ತು? ಕನ್ನಡ-ಇಂಗ್ಲೀಷ್ ಎರಡೂ ಭಾಷೆ ಮೇಲೆ ಪ್ರಭುತ್ವ ಇರೋ ನಿಮ್ಮಂಥೋರು ಇಂಥ ಅನುವಾದ ಮಾಡಿದ್ರೆ ಅದಕ್ಕೆ ನ್ಯಾಯ ಒದಗುತ್ತೆ …
ಇವತ್ತಿನ ಸಭೆಯಲ್ಲಿ ನಿಮ್ಮ ಮಾತೇ ಹೈ ಲೈಟ್ … ಇಡೀ ಸಭೆ ಹೇಗೆ ಸದ್ದಿಲ್ಲದೇ ಕೂತಿತ್ತು ! ….
ನಿಮಗೆ ಒಬ್ಬ ಮಗ ಅಲ್ವಾ? ಏನು ಮಾಡ್ತಿದ್ದಾನೆ
ಈಗ ಜರ್ಮನಿಯಲ್ಲಿ ಪೋಸ್ಟ್ ಗ್ರ್ಯಾಜುಯೇಷನ್ ಮಾಡಕ್ಕೆ ಹೋಗಿದಾನೆ
ಓಹ್! ಅಷ್ಟು ದೊಡ್ಡಮಗ ಇದ್ದಾನ ನಿಮಗೆ? ಅನ್ಸೋದೇ ಇಲ್ಲ …
ಹೊಸತೇನೂ ಅಲ್ಲದ ಈ ಹೊಗಳಿಕೆಗಳೆಲ್ಲ ಸರಳಾಳಿಗೆ ಅಭ್ಯಾಸವಾಗಿದೆ.
ಯಾವುದೇ ಸಭೆ-ಸಮಾರಂಭಕ್ಕೆ ಹೋದರೂ ಅವಳನ್ನು ಮೆಚ್ಚುವವರ ಗುಂಪೇ ಇರುತ್ತದೆ.
ಜಗತ್ತಿಗೆ ಪ್ರತಿಭೆಯ ಜೊತೆಗೆ ರೂಪವೂ ಇರುವವರೆಂದರೆ ತುಂಬ ಮಾನ್ಯತೆ.
‘ಈಗಿನ್ನು ಮನೆಗೆ ಹೋಗಲೇಬೇಕು’ ಅಂದುಕೊಳ್ಳುತ್ತಾಳೆ ಸರಳಾ.
‘ಸ್ವಾಗತಿಸಲು ಎಷ್ಟೊಂದು ಗೋಡೆಗಳು … ಬಾಗಿಲುಗಳು … ಚಿಲಕಗಳು …’ ಸಣ್ಣದೊಂದು ನಿಟ್ಟುಸಿರು.
ಎದುರಾದವರಲ್ಲಿ ಕೆಲವರಿಗೆ ಕೈ ಮುಗಿದು, ಮತ್ತೆ ಕೆಲವರಿಗೆ ಶೇಕ್ ಹ್ಯಾಂಡ್ ಕೊಟ್ಟು ಕಾರಿನ ಕಡೆಗೆ ನಡೆಯುತ್ತಾಳೆ
ಅವಳನ್ನು ನೋಡುತ್ತಾ ನಿಂತ ಗಂಡಸರ ಕಣ್ಣಲ್ಲಿ ಮೆಚ್ಚಿಗೆ …
ಹಾಗೂ ಹೆಂಗಸರಲ್ಲಿ ಕೆಲವರಿಗೆ ಮೆಚ್ಚಿಗೆ , ಮತ್ತೆ ಕೆಲವರಿಗೆ ಸಣ್ಣ ಅಸೂಯೆ ಕೂಡಾ …
ಸುತ್ತಲಿದ್ದ ಸದ್ದೆಲ್ಲ ಕರಗುತ್ತದೆ … ನಿಧಾನವಾಗಿ …

ಇಡೀ ಮನೆ ಕತ್ತಲು. ದೀಪ ಕೂಡ ಹಚ್ಚದ ಇವನು!
ಅವನಿಗೆ ಯಾವುದನ್ನೂ ಬೆಳಗಿಸಿಯೇ ಗೊತ್ತಿಲ್ಲವೆನ್ನಿಸುತ್ತದೆ. ಮನೆಯನ್ನೂ … ಬದುಕನ್ನೂ …
ಉಫ಼್ಫ಼್ಫ಼್ಫ಼್ … ಈ ನಿಟ್ಟುಸಿರು ಕೂಡಾ ಈ ನಡುವೆ ಯಾಕೋ ಬೋರ್ ಹೊಡೆಸುತ್ತದೆ …
ಬಾಗಿಲು ತೆಗೆದು ಮನೆಯ ದೀಪ ಹಚ್ಚುತ್ತಾಳೆ … ಎಲ್ಲೆಲ್ಲಿ ನೋಡಿದರೂ ಎಲ್ಲ ವಸ್ತುವೂ ಅದರದರ ಸ್ಥಳದಲ್ಲಿ …
ಥೂ! ಈ ಶಿಸ್ತು – ಈ ಶುಭ್ರತೆ ಎಷ್ಟು ವಿಕಾರ …
ತುಂಬ ಚೊಕ್ಕಟವಾಗಿ ಮನೆಯನ್ನು ಇಡಬೇಕೆನ್ನುವುದು ಮಾಧವನ ಆಸೆ … ಅಥವಾ ಆಜ್ಞೆಯೋ ..!
ತುಂಬ ನೀಟಾಗಿ ವಸ್ತುಗಳನ್ನು ಜೋಡಿಸಿಟ್ಟೂ ಇಟ್ಟೂ ಅವನಿಗೆ ವಸ್ತು ಯಾವುದು, ಮನುಷ್ಯರಾರು ಅನ್ನುವ ವ್ಯತ್ಯಾಸವೇ ಮರೆತು ಹೋಗಿರಬಹುದಾ …
ಒಂದು ದಿನ ಇಡೀ ಮನೆ ತುಂಬ ಜೋಡಿಸಿಟ್ಟಿರುವ ಎಲ್ಲ ಸಾಮಾನುಗಳನ್ನೂ ಮನೆ ತುಂಬ ಹರಡಿಬಿಡಬೇಕು …
ಪುಟ್ಟು ಮುದ್ದಣ್ಣ ಪುಟ್ಟದಾಗಿರುವಾಗ ಆಟದ ಸಾಮಾನುಗಳನ್ನು ಗುಡ್ಡೆ ಹಾಕಿ ಹರಡುತ್ತಿತ್ತಲ್ಲ … ಆ ಥರ …
ಮುರಿದ ಆಟಿಕೆಗಳ ಮಧ್ಯೆ ಅವರೆ ಬೇಳೆ ಹಲ್ಲಿನಂಥ ಮಗು ಎಷ್ಟು ಚೆಂದಕ್ಕೆ ನಗುತ್ತಿರುತ್ತಿತ್ತು …
ಯಾವುದೋ ಕಾರಿನ ಚಕ್ರ ಇನ್ಯಾವುದೋ ಬಸ್ಸಿಗೆ … ಯಾವುದರದ್ದೋ ಹಾರ್ನ್ ಇನ್ಯಾವುದಕ್ಕೋ ಜೋಡಿಸುತ್ತಾ ಕೂತಿರುತ್ತಿದ್ದ … ಥೇಟ್ ನಮ್ಮ ಸಂಸಾರದ ಹಾಗೆ … ಒಂದಿಷ್ಟೂ ಹೊಂದಿಕೆಯಾಗದ ಅವನ ಮತ್ತು ನನ್ನ ಬದುಕಿನ ಹಾಗೆ …
ರೂಮಿನಲ್ಲಿ ಅವನು ಕೂತಿರುತ್ತಾನೆ…ಪಕ್ಕದಲ್ಲೊಂದು ಗ್ಲಾಸ್ …
ಅವಳ ಹೆಜ್ಜೆ ಸದ್ದು ಬಿಟ್ಟು ಮತ್ತೇನೂ ಸದ್ದಿಲ್ಲ …
ಅವಳು ಬಂದದ್ದು ಗೊತ್ತಾಗಿಯೂ ಕತ್ತು ಕೂಡಾ ತಿರುಗಿಸದೇ ಕೂತ ಗಂಡ …
ಅವಳು ನಿಧಾನಕ್ಕೆ ಸೀರೆ ತೆಗೆಯುತ್ತಾಳೆ ಕನ್ನಡಿಯ ಎದುರು ನಿಂತು …
ಕನ್ನಡಿಯಲ್ಲಿನ ಪ್ರತಿಬಿಂಬ ನೋಡಿಕೊಳ್ಳುತ್ತಾಳೆ …
‘ನಾನು ನಿಜಕ್ಕೂ ಚೆನ್ನಾಗಿದ್ದೀನಿ… ತುಂಬ .. ತುಂಬ … ಆದರೆ, ಯಾಕಿಷ್ಟು ಚೆಂದವಿರಬೇಕಿತ್ತು ನಾನು?’
ಎದುರಿಗಿರುವ ಪ್ರತಿಬಿಂಬ ಉತ್ತರಿಸುವುದಿಲ್ಲ … ಥೇಟ್ ರೂಮಿನಲ್ಲಿ ಕೂತ ಅವನ ಬಿಂಬದ ಥರವೇ ಮೂಕ …

‘ಇವತ್ತು ತುಂಬ ಜನ …’ ರೂಮಿನ ಮೌನ ಭಯ ಹುಟ್ಟಿಸಿದಾಗ ಅವಳೇ ಮಾತು ತೆಗೆಯುತ್ತಾಳೆ …
‘ಹ್ಮ್ ….’
‘ಕವಿತೆ ತುಂಬ ಮೆಚ್ಚಿದ್ರು ಎಲ್ಲರೂ… ನೆನ್ನೆ ರಾತ್ರಿ ಕೂತು ಬರೆದಿದ್ದು ….’
‘ ………..’ (ಈ ಬಾರಿ ಹ್ಮ್ ಕೂಡಾ ಇಲ್ಲ …)
‘ಚೆಂದ ಇದೆಯಾ ಈ ಸೀರೆ? …’
‘ಇದೇನು ೨೦ ವರ್ಷದ ಹುಡುಗಿ ಥರ ಮಾತು …’ ಸಣ್ಣ ಗದರಿಕೆ ಅವನ ದನಿಯಲ್ಲಿ …
‘೨೦ ವರ್ಷ ಇರುವಾಗಲೂ ನೀನು ಯಾವುದನ್ನೂ ಚೆಂದ ಇದೆ ಅನ್ನಲಿಲ್ಲ ಮಾಧವಾ …’
‘,,,,,,,,,,’
ಮೌನ ಗೋಡೆಗೆ ಬಡಿದು ರೀಬೌಂಡ್ ಆಗಿ ಅವಳ ಮುಖಕ್ಕೆ ಬಂದು ಹೊಡೆಯಿತು …
ಪುಟ್ಟು ಮುದ್ದು ಸಣ್ಣವನಿರುವಾಗ ಮನೆಯಲ್ಲಿ ಒಂದಿಷ್ಟು ಮಾತಿತ್ತು, ನಗುವಿತ್ತು.
ಅವನು ಓದು ಮುಗಿಸಿ ಜರ್ಮನಿಗೆ ಹೋದ ಮೇಲಂತೂ ಇಡೀ ಮನೆಯಲ್ಲಿ ಮಾತೇ ಇಲ್ಲ …
ಯಾವಾಗ ಬಂದೆ, ಎಲ್ಲಿ ಹೋದೆ, ಇದ್ದೀಯಾ ಅಂತಲೂ ಮಾತಿಲ್ಲ …
ಕತ್ತಲಾದ ಮೇಲೆ ಒಬ್ಬಳೇ ಬರಬೇಡ ಮಗಳೇ. ಎಷ್ಟು ಹೊತ್ತಾಗುತ್ತದೆ ಅಂತ ಹೇಳು, ನಾನು ಕರೆಯಲು ಬರ್ತೀನಿ ….ಅಪ್ಪಯ್ಯ ಹೇಳುತ್ತಿದ್ದ
ಸುಮ್ನಿರಿ ಅಪ್ಪಯ್ಯಾ, ಅದೆಷ್ಟು ಹೆದರ್ತೀರಾ. ನಾವು ಒಬ್ಬೊಬ್ಬರೇ ಓಡಾಡುವಷ್ಟು ಧೈರ್ಯ ಯಾವತ್ತು ಕಲಿಯೋದು…. ಸರಳಾ ಗದರುತ್ತಿದ್ದಳು
ಸರಳಾ ಧೈರ್ಯ ಕಲಿತಳು…
ಸರಳಾ ಎಲ್ಲಿದ್ದರೂ ಹುಷಾರಾಗಿ ಮನೆ ತಲುಪುತ್ತಾಳೆ … ಹಾಗಾಗಿ ಮಾಧವನಿಗೆ ಚಿಂತಿಸುವ ಪ್ರಮೇಯವೇ ಬರಲಿಲ್ಲ ಎಂದಿಗೂ ….
ನಾನು ಅಸಹಾಯಕಳಂತೆ, ಅಬಲೆಯಂತೆ ಸೋಗು ಹಾಕಬೇಕಿತ್ತು.
ನಾನೇ ಎಲ್ಲ ಮಾಡಿಕೊಳ್ಳಬಲ್ಲೆ ಅಂತ ಹೊರಟೆ …
ಹಾಗಾಗಿ ಮಾಧವನಿಗೆ ಆಸರೆ ಕೊಡುವ ಅಗತ್ಯವೂ ಬರಲಿಲ್ಲ …
ಸಾಂಗತ್ಯ …?
ಅದೂ ಬೇಡ ಅಂತ ತೀರ್ಮಾನಿಸಿದ್ದೂ ಅವನೇ …
ಮಗ ಇಲ್ಲಿದ್ದಾಗ ಅವಳು ಬರುವುದು ತಡವಾದರೆ ಫೋನ್ ಮಾಡುತ್ತಿದ್ದ …
ಅವನು ಜರ್ಮನಿಗೆ ಹೋದ ಮೇಲೆ ….
ಯಾಕೋ ಮುರಿದು ಬಿದ್ದ ಆಟಿಕೆಗಳ ರಾಶಿ ನೆನಪಾಯಿತು …
ಇನ್ನೊಂದು ರೂಮಿಗೆ ಹೋಗಿ ಬಾಗಿಲು ಮುಂದೂಡಿದಳು…
ಕಾಯುತ್ತಿದ್ದ ರೂಮಿನ ಎಲ್ಲ ವಸ್ತುಗಳ ಜೊತೆಗೂ ಸರಳಾ ಮಾತಾಡಲು ಶುರು ಮಾಡುತ್ತಾಳೆ … ಈಗ ಸರಳೆಯ ರೂಮಿನ ತುಂಬ ಗದ್ದಲ …!
ವಾರ್ಡ್ ರೋಬ್: ಇವತ್ತಿನ ಕವಿತೆ ಚೆಂದಕ್ಕಿತ್ತಂತೆ … ಹೌದಾ ಸರಳಾ …
ಸರಳಾ: ಎಲ್ಲರೂ ಹಾಗೆ ಹೇಳ್ತಿದ್ದರು. ಅಂದಮೇಲೆ ಚೆಂದವಿತ್ತು ಅನ್ನಿಸುತ್ತದೆ. ನನಗೂ ಬರೆಯುವಾಗಲೇ ಹಾಗೆ ಅನ್ನಿಸಿತ್ತು …
ಗೋಡೆ ೧: ನೀನುಟ್ಟ ಸೀರೆಯೂ ಚೆನ್ನಾಗಿತ್ತು
ಸರಳಾ: ಹೇಯ್ ಸುಮ್ನಿರು, ಇದೇನು ಈ ವಯಸ್ಸಿನಲ್ಲಿ ಚೆಂದ-ಸುಂದರ ಅಂದುಕೊಂಡು …
ಗೋಡೆ ೨: ಇರೋದನ್ನ ಹೇಳಿದ ಅವನು … ಸುಮ್ಮನೆ ಥ್ಯಾಂಕ್ಸ್ ಅನ್ನಬಾರ್ದಾ …
ದೀಪ: ಮುದ್ದಣ್ಣ ಫೋನ್ ಮಾಡಿದ್ನಾ ಸರಳಾ …
ಸರಳಾ: ಹೂಂ, ಮೊನ್ನೆ ಮಾಡಿದ್ದ … ತುಂಬ ಹೊತ್ತು ಮಾತಾಡಿದ. ಮನುಷ್ಯರೊಡನೆ ಮಾತಾಡಿ ಜನ್ಮ ಕಳೆದಿತ್ತೇನೋ ಅನ್ನುವ ಹಾಗೆ ಮಾತಾಡಿದೆ …
ಮಂಚ: ನಾಳೆ ಮಹಿಳಾ ದಿನ ಅಲ್ಲವಾ ಸರಳಾ … ಮತ್ತೆ ಇಡೀ ದಿನ ನೀನು ಬ್ಯುಸಿ ಇರ್ತೀಯ ಅಲ್ಲವಾ?
ಸರಳಾ: ಹೂಂ, ನಾಳೆ ಸಿಕ್ಕಾಪಟ್ಟೆ ಸಮಾರಂಭಗಳಿವೆ. ಇಡೀ ದಿನ ಕೆಲಸ
ದಿಂಬು: ಮತ್ತೆ ಬೇಗ ಮಲಗಿಬಿಡು ಹೇಳ್ತೀನಿ. ಬೇಗ ಏಳಬೇಕಲ್ಲಾ …
ಸರಳಾ: ಮತ್ತೆ ನೀವೆಲ್ಲ ಸುತ್ತ ಕೂತು ಮಾತಾಡ್ತಿರಿ .. ಆಗ ಮಾತ್ರ ನನಗೆ ಸುಖದ ನಿದ್ರೆ ಬರತ್ತೆ.
ಅಮ್ಮನ ಮನೆಯಿಂದ ತಂದ ಪುಸ್ತಕ: ಹಿಂದೆ ಅಮ್ಮನ ಮನೇಲಿದ್ದಾಗ ಸದ್ದು ಇದ್ರೆ ನಿದ್ದೆ ಬರಲ್ಲ ಅಂತ ತಮ್ಮನನ್ನ ಬಯ್ತಿದ್ದೆ …
ಸರಳಾ: ಹ್ಮ್ … ನನಗೆ ಈಗ ಮೌನವೆಂದರೆ ಭಯ. ನೀವೆಲ್ಲ ದಿನಾ ನನ್ನ ಜೊತೆ ಮಾತಾಡ್ತಿರೋದ್ರಿಂದ ಇನ್ನೂ ಮನೇಲಿ ಜೀವ ಅಂತ ಇದೆ …
ಬಾಗಿಲು ಬಡಿದ ಸದ್ದು.
ಸರಳಾ … ಸರಳಾ …. ಮಾಧವನ ದನಿ ..
ಬಾಗಿಲು ತಳ್ಳಿದ ಮಾಧವ ಗಡಸು ದನಿಯಲ್ಲಿ ‘ಏನದು ಒಬ್ಬಳೇ ಮಾತಾಡಿಕೊಳ್ತಿದ್ದಿ?’ ಎಂದ …
ಸರಳಾ ಉತ್ತರಿಸಲಿಲ್ಲ … ಅವಳ ನಿಗೂಢ ಪ್ರಪಂಚದೊಳಗೆ ಮಾಧವನಿಗೆ ಜಾಗವಿರಲಿಲ್ಲ …
ಅವಳ ಮಾತನ್ನೇ ಅರ್ಥ ಮಾಡಿಕೊಳ್ಳದ ಮಾಧವನಿಗೆ ಅವಳ ಮೌನವೂ ಅರ್ಥವಾಗಲಿಲ್ಲ …
 

‍ಲೇಖಕರು G

March 30, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

39 ಪ್ರತಿಕ್ರಿಯೆಗಳು

  1. ಮಮತ

    ಶಿಸ್ತು , ಶುಭ್ರತೆ ಎಷ್ಟೊಂದು ವಿಕಾರ!! ಸಂಬಂಧಗಳ ಇನ್ನೊಂದು ಮುಖ. ಅದ್ಭುತ ಕತೆ. ಸೂಪರ್.

    ಪ್ರತಿಕ್ರಿಯೆ
  2. Dr.D.T.Krishnamurthy.

    ಮಾನವ ಸಂಬಂಧಗಳ ಗೋಜಲನ್ನು ತೆರೆದಿಡುವ ಉತ್ತಮ ಕಥೆ.ಸರಳಳ ಕಥೆ ಸರಳವಾಗೇನಿಲ್ಲ!!!!ನನಗೆ ಪ್ರಪಂಚದಲ್ಲಿ ಅತ್ಯಂತ ನಿಗೂಢ ಎನಿಸುವುದು ಮನುಷ್ಯನ ಮನಸ್ಸು ಮತ್ತು ಮಾನವ ಸಬಂಧಗಳು.ಎಷ್ಟೊಂದು ಕ್ಲಿಷ್ಟ !!!! ಎಷ್ಟೊಂದು ಸಂಕೀರ್ಣ!!!!ಒಬ್ಬೊಬ್ಬರದೂ ಒಂದೊಂದು ರೀತಿಯ ಸಮಸ್ಯೆ!!! ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹೇಗೆ? “ಮನಸ್ಸಿಲ್ಲದ ಮಾರ್ಗ”ವೊಂದನ್ನು ಅವರವರೇ ಕಂಡು ಕೊಳ್ಳ ಬೇಕು !!!!!

    ಪ್ರತಿಕ್ರಿಯೆ
  3. Sarala

    tumba arthapoornavagide Bharathi. kate tumba ishtavayitu. Not just for using my namesake 🙂

    ಪ್ರತಿಕ್ರಿಯೆ
  4. umavallish

    ಭಾರತೀ…..ತುಂಬಾ ಮನಕಲಕುವಂತಿದೆ. ಭಾವನೆಗಳಿಲ್ಲದ, ಜೀವಿಗಳೊಡನೆ ಬಾಳ್ವೆ ಅಬ್ಬಾ ದುರಂತ. ನಮ್ಮ ಸುತ್ತಾ ಮೌನವಾಗಿ ಆಳುವ,ಅದೆಷ್ಟು ಸರಳೆ ಯರಿದ್ದಾರೂ ಗೊತ್ತಿಲ್ಲ. ಭಾರತಿ ನಿಜವಾಗಲೂ ತುಂಬಾ ಚೆನ್ನಾಗಿ ಬರೆದಿದ್ದೀಯ(ರಾ)

    ಪ್ರತಿಕ್ರಿಯೆ
  5. ಮಾಲಿನಿ

    ಅರ್ಥ ಮಾಡಿಕೊಳ್ಳದವರ ನಡುವೆ ಬದುಕುವ ಅನಿವಾರ್ಯತೆಯಿಂದ ಹೊರಬರುವುದಾದರೂ ಹೇಗೆ?. Nice bha..

    ಪ್ರತಿಕ್ರಿಯೆ
  6. ಪ್ರಮೋದ್

    ನಮ್ಮಲ್ಲಿ ಹೆಚ್ಚಿನವರು ಇಲ್ಲದಿದ್ದ ವಿಷಯಗಳ ಮೇಲು ಹಲುಬುವುದೇ ಜಾಸ್ತಿ, ಇದ್ದುದರ ಮೇಲೆ ಮೆಚ್ಚುಗೆ ಅಪರೂಪವೇ.
    ಇಲ್ಲದಿದ್ದುರಲ್ಲೇ ಕಾಣುವ, ಇದ್ದರೆ ಇಲ್ಲದ೦ತೆ ಮರೆತು ಬಿಡುವ ಮಾನವ.

    ಪ್ರತಿಕ್ರಿಯೆ
  7. mallikarjun talawar

    nija madam kelavarige mouna arta agalla. innu kelavarige matu arta agalla. matte kelavarige 2rdu arta agalla.DURADRUSTA ANDRE, evella agodu namge tumba hattiradavarinda matra. ratseyalli hogo manusyharinda navu yenannu nirikshe madodilla. adre nammavre nammanna purvgrapiditavagi nodidaga mansu syatte. nimma baraha odhi barti one hour yochne madide, aga nange annisiddu istu,”DEPENDENCY KOODA MADHURVADADDU ADRE ADANNA GANDA-HENDATI IBRU TALEGE YERISIKOLLDIDDAGA MATRA. NINILDE NANILLA, “TOREDU JEEVISALARE HARI NINNA CHARANAGAL” ANOODANNU, EVANA ATHVA EVALA KAIYALLI YENU AGALLA ADKE HIGE GOGERITIDE JEEVA PAAPAAAA! ANUDUKONDRE ADU SAMBANDVONDARA DURANTA ANTYAKKE GOTTIDDU BAREDA MUNNUDI. GUD luck MADAM. TUMULGALA TALAMALA HIGU VYAKTAGOLLABAHUDA? NICE MADAM.

    ಪ್ರತಿಕ್ರಿಯೆ
  8. sindhu

    ಓಹ್ ಭಾ..
    ತುಂಬ ಚೆನಾಗಿ ಬರ್ದಿದೀರಿ ಕತೆ. Islands in the Stream ಥರ.
    ಅದೆಲ್ಲ ಹೋಗಲಿ.
    “ಎರಡು ಸ್ಥಿರ, ಸ್ಥಿತಪ್ರಜ್ಞ ದಂಡೆಗಳ ನಡುವೆ ಗಲಗಲನೆ ಹೊಸ ಹೊಸದಾಗಿ ಹರಿವ ಹೊಳೆ” ಅಲ್ಲವ ಅವಳು?

    ಪ್ರತಿಕ್ರಿಯೆ
  9. Bhagyarekha Deshpande

    ಒಳ್ಳೆಯ ಕಥೆ… ಅತಿಯಾದ ಮೌನ ಹಿಂಸೆಯೇ ಸರಿ. ಗಂಡನ ಆಸರೆ ಬೇಡ ಆದರೆ ಸಾಂಗತ್ಯವೂ ಇರದೆ ಹೋದರೆ ಎನ್ನುವ ಪ್ರಶ್ನೆ ಅರ್ಥಪೂರ್ಣವಾಗಿದೆ.

    ಪ್ರತಿಕ್ರಿಯೆ
  10. ಬಿ.ಎಸ್. ಸುದೀಪ್

    ನಿಜವಾಗಿಯೂ ನಮ್ಮ ಮಹಿಳೆಯರು ಈ ತರದ ‘ಕೊಠಡಿ’ಯನ್ನು ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ವಿದ್ಯಾವಂತ ವಿಚಾರವಂತ ಮಹಿಳೆಯರು ಕೂಡ ಇದರ ವ್ಯಾಪ್ತಿಯಲ್ಲಿ ಇದ್ದಾರೆ. ತುಂಬಾ ಧ್ವನಿಪೂರ್ಣವಾಗಿದೆ. ಇದನ್ನು ಇನ್ನೂ ವಿಸ್ತರಿಸಿ ಅಥವಾ ಇನ್ನೂ ಕಲಾತ್ಮಕವಾಗಿ ಬೆಳಸಬಹುದೇನೊ? ಗೊತ್ತಿಲ್ಲ. ಆದರೆ, ತುಂಬಾ ಚೆನ್ನಾಗಿದೆ ಅಭಿನಂದನೆಗಳು ಮೇಡಂ.

    ಪ್ರತಿಕ್ರಿಯೆ
  11. Mamatha N.M.

    ಇದು ಕಥೆಯಲ್ಲ, ವ್ಯಥೆ. ಸಂಬಂಧಗಳ ವ್ಯಥೆ.

    ಪ್ರತಿಕ್ರಿಯೆ
  12. Rukmini Nagannavar

    Kathe niroopaNe tumba apthavayithu.. ella iddu enoo illada manasina anavaraNa. Samasyegalu ondondu reeti. Avugala roopagalu bere bere annodu chennagi moodide..

    ಪ್ರತಿಕ್ರಿಯೆ
  13. sushma

    thumba chennagide. sooo true………
    ನಾನು ಅಸಹಾಯಕಳಂತೆ, ಅಬಲೆಯಂತೆ ಸೋಗು ಹಾಕಬೇಕಿತ್ತು.
    ನಾನೇ ಎಲ್ಲ ಮಾಡಿಕೊಳ್ಳಬಲ್ಲೆ ಅಂತ ಹೊರಟೆ …ಹಾಗಾಗಿ ಮಾಧವನಿಗೆ ಆಸರೆ ಕೊಡುವ ಅಗತ್ಯವೂ ಬರಲಿಲ್ಲ …
    Liked these lines

    ಪ್ರತಿಕ್ರಿಯೆ
  14. Gn Nagaraj

    ಸಾವಿರಾರು ವರ್ಷಗಳ ಹಿಂದೆ ನಾಲ್ಕೈದು ಜೀವನ ವಿಧಾನಗಳ ಕಾಲದಲ್ಲಿ ರೂಪುಗೊಂಡು ಮತ್ತು ಇಂದಿನ ವೈವಿಧ್ಯಮಯ ಜೀವನ ಮತ್ತು ವಿಭಿನ್ನ ವ್ಯಕ್ತಿತ್ವಗಳ ಬೆಳವಣಿಗೆಯ ಕಾಲದಲ್ಲಿಯೂ ಸಮಾಜವನ್ನು ಕಾಡುತ್ತಿರುವ ವಿವಾಹ ಪದ್ಧತಿಯ ವೈರುಧ್ಯದ ಚಿತ್ರಣ ೊಂದು ಕಾದಂಬರಿಯೆ ಆಗಬಹುದಾದ್ದನ್ನು ಕಿರಿದರೊಳ ಪಿರಿದನ್ನು ತುಂಬಿದ ಕಿರಿಕಥೆ

    ಪ್ರತಿಕ್ರಿಯೆ
  15. ಲಕ್ಷ್ಮೀಕಾಂತ ಇಟ್ನಾಳ

    ಕಂದಕಗಳ ನಡುವೆ, ಬದುಕು ಅದೆಷ್ಟು ಕಷ್ಟ, ಭಾವನೆಗಳೇ ಸತ್ತ ಸಂಬಂಧಗಳು ಆತ್ಮವಿಲ್ಲದ ದೇಹಗಳು. ಇವು ಬಂಧಗಳಲ್ಲ, ಬಂಧನಗಳು ….ಸುಂದರ ಕಥೆ, ಭಾರತೀ ಜಿ.

    ಪ್ರತಿಕ್ರಿಯೆ
  16. Anuradha.B.Rao

    ತುಂಬಾ ಭಾವಪೂರ್ಣವಾಗಿದೆ ಭಾರತಿ . ನೀನು ಇನ್ನೂ ಹೆಚ್ಚಾಗಿ ಸಣ್ಣ ಕಥೆಗಳನ್ನು ಬರಿ . ನಿನಗೆ ಹೃತ್ಪೂರ್ವಕ ಅಭಿನಂದನೆಗಳು .

    ಪ್ರತಿಕ್ರಿಯೆ
  17. ಅಮರದೀಪ್.ಪಿ.ಎಸ್.

    ನಿಮ್ ಲೇಖನ ಓದಿದ್ ಮೇಲೆ ಭಟ್ರು…. ವಾಸ್ತು ಪ್ರಕಾರಕ್ಕೆ ಬೇಸರ…. ಕಾತರ…ಗಡ್ಡ… ಹಾಡು ಬರೆದಿರಬೇಕು ಅನ್ನಿಸಿಬಿಟ್ಟಿತು…..ಮೇಡಂ.. ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ
  18. ತಿರು ಶ್ರೀಧರ

    ನನ್ನ ಒಳದನಿಯನ್ನು ಮತ್ತೊಂದು ಜೀವ ಕೇಳಿಸಿಕೊಳ್ಳಬೇಕು, ಅದನ್ನು ಕೇಳಿಸಿಕೊಳ್ಳೋ ಜೀವ ಇಲ್ಲ ಎಂಬ ಅನಾಥಭಾವ. ಅರಸುವಿಕೆ ಹೆಣ್ಣಿನಲ್ಲಿ ಮಾತ್ರವಲ್ಲದೆ ಗಂಡಿನಲ್ಲೂ ಇದೆ ಎಂದು ನನ್ನ ಅನಿಸಿಕೆ. ಈ ಅಂತರ್ದನಿಗೆ ಸಮರ್ಥವಾಗಿ ಭಾಷೆ ಕೊಟ್ಟಿದ್ದೀರಿ. ಆತ್ಮೀಯ ಮೆಚ್ಚುಗೆಗಳು.

    ಪ್ರತಿಕ್ರಿಯೆ
  19. ಶಮ, ನಂದಿಬೆಟ್ಟ

    ಮನದ ಭಾವಗಳನ್ನ ಬರಹವಾಗಿಸುವುದರಲ್ಲಿ ನಿನ್ನ ಬಿಟ್ಟರಿಲ್ಲ… ಓದುಗರ ಕಣ್ಣು ಮಂಜಾಗದಂತೆ ಬರಿಯೋಕೇ ಬಾರದ ನಿನ್ನ ಕೈಗೆ ಸಾವಿರ ಮುತ್ತು…. Love You Kane…

    ಪ್ರತಿಕ್ರಿಯೆ
  20. Bharathi b v

    ಥ್ಯಾಂಕ್ಸ್ ಇಷ್ಟ ಪಟ್ಟವರೆಲ್ಲರಿಗೂ

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ bharathi b vCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: