ಬಿದಲೋಟಿ ರಂಗನಾಥ್ ಕವಿತೆ- ಅಮ್ಮನಿಗೊಂದು ಸೀರೆಯ ಕನಸು…

ಬಿದಲೋಟಿ ರಂಗನಾಥ್

ಉಗಾದಿ ಬಂತೆಂದರೆ
ಸರೀಕರು ಉಡುವ ಸೀರೆಯಲ್ಲಿ
ಅಮ್ಮನ ಮನಸು ಬೆಯ್ಯುತಿತ್ತು
ಹೊಟ್ಟೆ ಉರಿಯಿಂದಲ್ಲ
ಅಸಾಹಕತೆಯ ತೊಡರಿನಿಂದ

ಕೂಲಿ ಕರೆಯದ ದಿನಗಳಲ್ಲಿ ಬರುವ ಉಗಾದಿ
ಗೇಣು ಗೇಣಿಮಾಡದ ಅಪ್ಪನ ಬದುಕು
ತಿಂಗಳ ಮುಂಚಿನಿಂದಲೂ
ಹೊಂಗೆ ಕಾಯಿ ಬೇವಿನ ಬೀಜದ ಮೊರೆ ಹೋಗಿ
ಬಯಲು ಹಳ್ಳಕೊಳ್ಳವಲೆದು
ಸೇರು ಸೆಟಾಕು ಅಮ್ಮನ ಮಡಿಲು ತುಂಬಿ
ಕೂಡಿಟ್ಟ ಕೈಯಲ್ಲಿ ಮಕ್ಕಳ ಗುಳಿಬಿದ್ದ ಕಣ್ಣಿನ ಚಿತ್ರ

ಬೇಳೆ ಬೆಲ್ಲವ ಕೊಂಡು
ಜಾವಕ್ಕೆ ಬೇಯ್ಯುವ ಬೇಳೆಯಲಿ
ಬೆವರು ಬಿದ್ದು ಉರಿಯುವ ಸೌದೆ
ಸುಣ್ಣ ಕದರಿನಿಂದ ಅಲಂಕಾರ ಉಟ್ಟ ಜಂತೆ ಮನೆ
ಗವಾಕ್ಷಿಯಿಂದ ಹೊಗೆ ಮಾರಿಯರ
ಮುಖ ಬೆಂದು ಮೋಡವಾಗುವ ಪರಿಗೆ
ಹಬ್ಬವಾಗುವ ಕನಸಿನ ರೆಕ್ಕೆ ಬಲಿಯುತ್ತಿದ್ದವು

ಸಂತೆ ಅಂಗಿ
ನಿಕ್ಕರುಗಳ ತಂದು ಮಕ್ಕಳಿಗೆ ತೊಡಿಸುವಾಗ
ಉಗಾದಿಯ ಸಂಭ್ರಮಕ್ಕೊಂದು ಮೆರಗು!
ಅಪ್ಪನೂ ತೊಡುತ್ತಿದ್ದ ಬೆಲ್ಟ್ ನಿಕ್ಕರು
ಜೋಳಂಗಿ ಅಜ್ಜಿ ಬಾಳೇಕಾಯಿ ಜಿಲ್ಲರೆ
ಬಸಿದು ಬರಿದಾಗಿ…

ಅಮ್ಮನಿಗೂ ಒಂದು ಸೀರೆಯ ಕನಸು
ಆದರೆ
ಕಾಸಿಲ್ಲದ ದುಡ್ಡಿನ ಚೀಲ ಮುದುರಿ ಬಿದ್ದು
ಕಡೆಯುತಿತ್ತು
ತವರಿನಲಿ ಅಪ್ಪ ಕೊಡಿಸುತ್ತಿದ್ದ ಲಂಗ ದಾವಣಿ
ಕಣ್ಣ ಕನ್ನಡಿಯ ಚಿತ್ರದಲಿ ಸಮ್ಯಮದ ಚಿತ್ತ

ಒಂದೊಂದು ಮರಕ್ಕೂ
ಹೊಸ ಹುಟ್ಟು ಯೌವನ ಬರುವಂತೆ
ಈಗಲೂ ಅಮ್ಮನಿಗೆ ಕಣ್ಣ ಕನಸು
ಮಗ ತರುವ ಸೀರೆಯಲಿ
ಹೋದ ದಿನಗಳ ಹೆಬ್ಬೆಟ್ಟಿಲ್ಲ
ಸಿಹಿ ಕನಸುಗಳಲಿ ತೇಲುವ
ರುಜುಗಳ ಮೇರವಣಿಗೆ…

ಆದರೆ
ಸುಕ್ಕು ಗೆರೆಗಳ ನಡುವೆ
ಅಮ್ಮ ಉಡುವ ಕನಸಿನ ಸೀರೆ
ಚುಕ್ಕಿಗಳ ಬಾಸಿ ಬಾಸಿ ಮಡಿಲ ತುಂಬುತ್ತಿದೆ

‍ಲೇಖಕರು avadhi

March 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಇದಕ್ಕೆ ಪ್ರತಿಕ್ರಿಯೆ ನೀಡಿ prathibha nandakumarCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: