‘ಪದಗಳಂಜಿಕೆ’
ಸುನೀತಾ ರಾವ್
“ಬರೆ” ಎಂದೊಡನೆ
ಅವತರಿಸಲು
ಪದ್ಯವೇನು ನಲ್ಲಿಯ ನೀರೇ ?
ಪದ್ಯವಿರಬೇಕು
ರಕ್ತಸ್ರಾವದಂತೆ!
ನೋವು ಹಿಂಡಿದಂತೆ,
ಸಂಭ್ರಮ ಕೆಂಪಾದಂತೆ,
ತರ್ಕ ಸ್ರವಿಸಿದಂತೆ,
ಆಳದ ಸುಳಿವಿನಂತೆ..
ಹಸುಳೆಯ ಕಾಪಿಟ್ಟು
ಬಸಿರ ಬೆಸೆವ ಜೀವದ್ರವದಂತೆ!
ಇಷ್ಟಕ್ಕೂ,
ಯಾರಿಗೆ ಬೇಕಿದೆ, ಪದ್ಯ?
ಬಿಸಿಲ ನುಂಗಿ ಪಾದ ಸವೆಸಿ
ದುಡಿದ ಹಣಕೆ ಬೆಲೆ ಸತ್ತು
ಇದೀಗ ಹೊಸ ಹಣಕೆ
ನಿಂತು ಸೋತ ರೈತನಿಗೇ?
ಧರ್ಮ-ಕ್ರೌರ್ಯಗಳ ಸಿಡಿಮದ್ದು ಸಾವಿಗೆ
ಬೆನ್ನುತೋರಿಸಿ ಹುಟ್ಟೂರು ಬಿಟ್ಟ
ಮಧ್ಯ ಪ್ರಾಚ್ಯದ ವಲಸಿಗರಿಗೇ?
ಪದಗಳಿಗೆ, ಬೆಲೆ ಬಂದಾಗ
ಪದ್ಯವೇನು, ಮಹಾಕೃತಿಯೇ ಬರಲಿ!
ಅರ್ಥ ಭಾವವಾದಲ್ಲಿ
ನಿಘಂಟಿನ ಹಂಗೆಲ್ಲಿ!
Very nice one!!
That’s encouraging!
nicely penned down nitu..