ಡಾ ಪದ್ಮಿನಿ ನಾಗರಾಜು
ಅವ
ನನ್ನ ಬದುಕಿನ ಅತಿಥಿಯೋ
ಅರಳಿಮರದ ನೆರಳೋ
ತಿಳಿವು ಮೂಡುವಾಗೆಲ್ಲಾ
ಅಹಂ ಬಡಿದು
ನಿಲ್ಲುತ್ತದೆ ಗೋಡೆಯಂತೆ
ಅವಳು
ಅಪ್ಪಿ ಮುತ್ತಿಟ್ಟದ್ದು
ಪ್ರೀತಿಗೋ ಮೋಹಕೋ
ನನ್ನವನೆಂಬ ಪೋಸೆಸಿವ್ವೋ
ಕೈಗೆ ಸಿಕ್ಕ ಹಕ್ಕಿಯಂತೆ
ಅಮುಕಿದಾಗೆಲ್ಲ ಸ್ವತಂತ್ರವಾಗುವ
ಕನಸು ಕಾಣುವೆ ಕಡಲಿನಂತೆ
ಮೋಹದ ಮುರುಳಿ
ನಾದ ನಿಲ್ಲಿಸಿದ್ದಾಗಿದೆ
ಕಾಲ ಕೆಳಗಿನ ಗರಿಕೆಯೂ
ಕೆದರಿ ನಿಂತಿದೆ ಮರದಂತೆ
ಕೊಟ್ಟ ಭಾಷೆ ಆಣೆಗಳು
ಮಣ್ಣು ಸೇರಿವೆ ಹೆಣದಂತೆ
ಒಂದೇ ಸಮ ಸುರಿವ
ಮಳೆಯಂತೆ ಸಂಬಂಧಗಳು
ಪಾಚಿಗಟ್ಟಿವೆ
ನೆಲದ ಆಳಕ್ಕೆ ಇಳಿಯದ
ಬೇರಿನಂತೆ ಪ್ರೀತಿ
ಸಡಿಲಾಗಿ ಕುಸಿಯುತ್ತಿದೆ
ಜಾರಿದ ತುಟಿಯ
ಮುತ್ತಿನಂತೆ ಮಾತು
ಮನವ ನೋಯಿಸುತ್ತಿದೆ
ಕೈಗೆ ಸಂಕೋಲೆ ಸಿಕ್ಕಿಸಿ
ಕೈದಿಯ ಬದುಕಂತೆ
ನಿನ್ನ ಹೃದಯದ ಜೈಲಿನಲ್ಲಿ
ಬಂಧಿಸಿಹ ಹಕ್ಕಿ ನಾನು
ಹೊರ ಬಂದು ಹಾರುವ
ಕನಸ ಹೊತ್ತು ಕುಳಿತಿರುವೆ
ನಂಬಿಕೆ ಮರದ ಕೊಂಬೆಗೋ
ನನ್ನ ಮನದ ರಕ್ಕೆಗೋ
ಅರಿಯಬೇಕಿದೆ
ಪದ್ಮನಿ ಮೇಡಂ ಕವಿತೆ ಪಾಚಿಗಟ್ಟಿವೆ ಚೆನ್ನಾಗಿ ಮೂಡಿ ಬಂದಿದೆ, ಅಭಿನಂದನೆಗಳು.