ತೇಜೋ – ತುಂಗಭದ್ರಾ: ಕನ್ನಡ ಸಾಹಿತ್ಯದ ಮೈಲುಗಲ್ಲಿನ ಕೃತಿಯೇನಲ್ಲ..

ಖ್ಯಾತ ಲೇಖಕ ವಸುಧೇಂದ್ರ ಅವರ ಇತ್ತೀಚಿನ ಕೃತಿ ‘ತೇಜೋ ತುಂಗಭದ್ರಾ’ 

ಈ ಕೃತಿಯನ್ನು ವಸುಧೇಂದ್ರ ವಿಭಿನ್ನವಾಗಿ ಓದುಗರ ಬಳಿ ಕೊಂಡೊಯ್ದಿದ್ದರು. ಅದು ಇಲ್ಲಿದೆ.

ಈ ಕೃತಿಯ ಓದಿನ ಸಂಭ್ರಮವನ್ನು ಅವಧಿ ಈಗಾಗಲೇ ಹಂಚಿಕೊಂಡಿತ್ತು. ಅದು ಇಲ್ಲಿದೆ.

ಪ್ರಸ್ತುತ ವಿಮರ್ಶಕ ಎಚ್ ಎಸ್ ರೇಣುಕಾರಾಧ್ಯ ಅವರು ತೇಜೋ ತುಂಗಭದ್ರಾದ ಬಗ್ಗೆ ತಮ್ಮ ವಿವರ ಗ್ರಹಿಕೆಯನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆಗೂ ಸ್ವಾಗತ.

ನಿಮ್ಮ ನೋಟ, ವಿಮರ್ಶೆಯನ್ನು [email protected] ಗೆ ಕಳಿಸಿಕೊಡಿ. 

ತೇಜೋ – ತುಂಗಭದ್ರಾ : ಮಾನವತೆಯ ಹೆಸರಲ್ಲಿ ಓದಿ ಓದಿ ಮರುಳಾಗಿ ಎಂದು ಹೇಳುವ ತೋರುಗಾಣಿಕೆಯ ಕತೆ :
ಎಚ್ ಎಸ್ ರೇಣುಕಾರಾಧ್ಯ 

ವಸುಧೇಂದ್ರರ ‘ತೇಜೋ- ತುಂಗಭದ್ರಾ’ ಕಾದಂಬರಿ ಮೇಲೆ ಮೆಚ್ಚುಗೆಯ ಮಾತುಗಳನ್ನಾಡಿರುವವರೆಲ್ಲರೂ ಹೇಳುವಂತೆ ಕನ್ನಡ ಸಾಹಿತ್ಯದ ಮೈಲುಗಲ್ಲಿನ ಕೃತಿಯೇನಲ್ಲ.

ಪೋರ್ಚುಗೀಸರು, ವಿಜಯನಗರ ಅರಸರು ಮತ್ತು ಆದಿಲ್ ಶಾಹಿ ಅರಸರ ಸುಮಾರು 26 ವರ್ಷಗಳ ಇತಿಹಾಸವನ್ನು ನಮ್ಮ ಮುಂದೆ ತೆರೆದಿಡುವ ಕಾದಂಬರಿ.

ಪೋರ್ಚುಗಲ್ ನ ಲಿಸ್ಬನ್ ನಲ್ಲಿ ಆರಂಭವಾಗುವ ಕತೆ, ತೆಂಬಕಪುರ,ವಿಜಯನಗರ ಮತ್ತು ಗೋವಾದಲ್ಲಿ ನಡೆದು, ಕಡೆಗೆ ಗೋವಾದಲ್ಲಿ ಕೊನೆಗೊಳ್ಳುತ್ತದೆ.

ಪೋರ್ಚುಗಲ್ ನ ಲಿಸ್ಬನ್ ನಲ್ಲಿ ವಾಸವಾಗಿದ್ದ ಕ್ಯಾಥಲಿಕ್ ಗೇಬ್ರಿಯಲ್ ಮತ್ತು ಯಹೂದಿ ಬೆಲ್ಲಾ ಹಾಗೂ ತೆಂಬಕಪುರದಲ್ಲಿ ಬಂದು ವಾಸ ಮಾಡುತ್ತಿದ್ದ ವೈಷ್ಣವ ಕೇಶವ ಮತ್ತು ತೆಂಬಕಪುರದ ನಿವಾಸಿ ಶೈವ ಹಂಪವ್ವ ಈ ಎರಡೂ ಜೋಡಿಗಳ ಪ್ರೇಮವನ್ನು ಪೊರ್ಚುಗೀಸ್, ಆದಿಲ್ ಶಾಹಿ ಅರಸರು ಮತ್ತು ವಿಜಯನಗರ ಅರಸರುಗಳ ಆಳ್ವಿಕೆಯ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಆಡಳಿತ ಅಂದರೆ ಇಡೀ ಪ್ರಭುತ್ವ ಹೇಗೆ ಸಾಮಾನ್ಯರ ಬದುಕನ್ನು ಸರ್ವನಾಶ ಮಾಡುತ್ತವೆ ಎಂಬುದನ್ನು ವಸುದೇಂದ್ರರ ಬರಹದ ಕೌಶಲ ಓದುಗನ ಮನವನ್ನು ಕಲಕಿ, ಮುಟ್ಟಿಸುತ್ತದೆ.

ಕತೆಕಟ್ಟುವ ಕಲೆಗಾರಿಕೆ ಮತ್ತು ಕೌಶಲ, ಮತ್ತು ಓದುಗರನ್ನು ಮರುಳು ಮಾಡುವ ವಿಚಾರದಲ್ಲಿ ಎಸ್ ಎಲ್ ಭೈರಪ್ಪನವರನ್ನು ಹೊರತುಪಡಿಸಿದರೆ ವಸುಧೇಂದ್ರರೇ ಆನಂತರದವರು ಅನ್ನಿಸುತ್ತೆ.

ಈ ಕಾದಂಬರಿಯ ವಸ್ತು ಮಧ್ಯಕಾಲಿನ ಸಮಾಜದ್ದು. ಅಂದರೆ 15 ಮತ್ತು 16 ನೆಯ ಶತಮಾನದ್ದು ಐತಿಹಾಸಿಕವಾದ್ದು. ಐತಿಹಾಸಿಕ ವಸ್ತುವನ್ನು ತೆಗೆದುಕೊಂಡು ಕಾದಂಬರಿ ಬರೆಯುವುದು ಕನ್ನಡದಲ್ಲಿ ಹೊಸತೇನಲ್ಲ.
ಆದರೆ ಚರಿತ್ರೆಯನ್ನು ನೀವು ಒಬ್ಬ ಲೇಖಕನಾಗಿ ಹೇಗೆ ನಿಭಾಯಿಸಿದ್ದೀರಿ ಎಂಬುದು ಬಹಳ ಮುಖ್ಯವಾದದ್ದು.

ಏಕೆಂದರೆ
“ಒಟ್ಟು ಚರಿತ್ರೆಯೇ ಅನೇಕ ಬಗೆಯ ಅಪಗ್ರಹಿಕೆಗಳ ಕತೆ. ಚರಿತ್ರೆಯ ನಿರ್ಮಾಣದಲ್ಲಿ ಯಾವುದೊ ಕೆಲವೊಂದು ಆಯ್ಕೆ ಮಾಡಲಾಗುತ್ತದೆ. ಕೆಲವೊಂದು ಬಿಡಲಾಗುತ್ತದೆ. ಈ ಸೇರ್ಪಡೆ- ಬೇರ್ಪಡೆಗಳ ಸೂಕ್ಷ್ಮ ಅಧ್ಯಯನದಿಂದ ಮಾತ್ರ ಚರಿತ್ರೆಯ ರಹಸ್ಯ ತಿಳಿಯುತ್ತದೆ” ಎಂದು ವಿಮರ್ಶಕ ಡಿ. ಆರ್. ನಾಗರಾಜ್ ಅವರು ಹೇಳುತ್ತಾರೆ.

ಡಿ ಆರ್ ಎನ್ ಅವರ ಮಾತಿನಂತೆ ಚರಿತ್ರೆಯ ಅಪಗ್ರಹಿಕೆಗಳ ಕತೆಯನ್ನು ಒಬ್ಬ ಲೇಖಕ ಚರಿತ್ರೆಯ ಮುನ್ನೆಡೆಗೆ ಅಥವಾ ವಿಕೃತಿಗೂ ಬಳಸಿಕೊಳ್ಳಬಹುದು.

ವಸುಧೇಂದ್ರರ ‘ ತೇಜೋ- ತುಂಗಭದ್ರಾ’ ಕಾದಂಬರಿ ಮೇಲ್ನೋಟಕ್ಕೆ ಧರ್ಮ ಸಹಿಷ್ಣುತೆ – ಧರ್ಮಾಂಧತೆ, ಮಾನವತಾವಾದ, ಜನಸಾಮಾನ್ಯರ ಬದುಕಿನ ಕಾಳಜಿಯನ್ನು,ಅವತ್ತಿನ ಬರ್ಬರ ರಾಜಕೀಯ ವಾಸ್ತವತೆಗಳ ನಡುವೆ ಎತ್ತಿ ಹಿಡಿಯುವ ಕತೆಯಾಗಿ ಕಂಡರೂ, ಆಳದಲ್ಲಿ ಇಂದು ಅಖಿಲ ಭಾರತ ಮಟ್ಟದಲ್ಲಿ ಬೃಹತ್ ರೂಪು ಪಡೆದು ನಿಂತಿರುವ ಹಿಂದುತ್ವ ಅಥವಾ ಹಿಂದೂ ಮತೀಯವಾದಿ ಭಾವನೆಗಳನ್ನು ಉಗ್ರವಾಗಿ ಪ್ರತಿಪಾದಿಸದೆ, ಉದಾರವಾದಿ ಹಿಂದುತ್ವದ ಭಾವನೆಗಳನ್ನು ಸೂತ್ರೀಕರಿಸುವ ಕ್ರಿಯೆಯೊಡನೆಯೇ ಕಾದಂಬರಿ ರೂಪು ಪಡೆದಿದೆ.

ಇದಕ್ಕೆ ಬಹುಮುಖ್ಯ ಕಾರಣವೆಂದರೆ ಲೇಖಕರು ಕಾದಂಬರಿಯ ಬರವಣಿಗೆಗೆ ಆಯ್ಕೆ ಮಾಡಿಕೊಂಡಿರುವ ವಿಜಯನಗರ ಸಾಮ್ರಾಜ್ಯದ ಕಾಲ (ಈ ಕಾಲವನ್ನು Rise of Hinduism ಎಂದು ಕರೆಯಲಾಗುತ್ತದೆ) ಮತ್ತು ಚರಿತ್ರೆಯ ವಸ್ತುವನ್ನು ಆಯ್ದುಕೊಂಡು ಅದನ್ನು ಬಹಳ ಜಾಣತನದಿಂದ ನಿಭಾಯಿಸುವ ಮತ್ತು ಮೇಲೆ ಹೇಳಿದ ಅಜೆಂಡಾವನ್ನು ಪ್ರತಿಷ್ಟಾಪಿಸುವ ಕೆಲಸವನ್ನು ಮಾಡುತ್ತಲೇ ಆಳದಲ್ಲಿ ಮುಸ್ಲಿಂ ವಿರೋಧಿ ಮತ್ತು ಕ್ರೈಸ್ತ ವಿರೋಧಿ ತಾತ್ವಿಕತೆಯನ್ನು ಒಳಗೊಂಡಿದೆ.

ವಸುಧೇಂದ್ರರು ಈ ಕಾದಂಬರಿ ಬರೆಯುವುದಕ್ಕೆ, ಮಾಡಿದ ಸಂಶೋಧನೆ, ಮತ್ತು ಅಧ್ಯಯನದ ಬಗೆಗೆ ಅವರ ಇಂಟರ್ ವ್ಯೂಗಳಲ್ಲಿ ಹೇಳಿಕೊಂಡಿದ್ದಾರೆ. ನಾನು ವಿಜಯನಗರ ಸಾಮ್ರಾಜ್ಯದ, ಪೋರ್ಚುಗೀಸ್ ಸಾಮ್ರಾಜ್ಯದ ,ಆದಿಲ್ ಶಾಹಿಗಳ ಆಡಳಿತದ ಸಾಮಾನ್ಯರ ಬದುಕನ್ನು ತಿಳಿಸಲೆಂದೇ ಕಾದಂಬರಿ ಬರೆದದ್ದು ಎಂದೂ ಹೇಳಿದ್ದಾರೆ.

ಲೇಖಕನೊಬ್ಬ ಹೀಗೆ ಪೂರ್ವಯೋಜಿತ, ಸಿದ್ಧವಸ್ತುವನ್ನು ಬಳಸುವುದು, ಸಮಕಾಲೀನ ರಾಜಕೀಯ ಆಶಯವನ್ನು ಈಡೇರಿಸುವ ತಂತ್ರವಾಗಿ ನನಗೆ ಈ ತೇಜೋ- ತುಂಗಭದ್ರಾ ಕಾದಂಬರಿ ಕಾಣುತ್ತದೆಯೇ ಹೊರತು ಸೃಜನಶೀಲ ಕಲಾಕೃತಿಯಾಗಿ ಕಾಣುವುದಿಲ್ಲ.
ಇದೇ ಕೆಲಸವನ್ನು ಈ ಹಿಂದೆ ಗಳಗನಾಥರು “ಮಾಧವ ಕರುಣಾ ವಿಲಾಸ” ಎಂಬ ವಿಜಯನಗರ ಅರಸರ ಕತೆಯನ್ನು ಹೇಳುವ ಕಾದಂಬರಿ ಮೂಲಕ ಮಾಡಿದ್ದರು. ಆನಂತರ ಎಸ್ ಎಲ್ ಭೈರಪ್ಪನವರು ‘ಆವರಣ’ ಮೂಲಕ ಮಾಡಿರುವುದು ಚಾರಿತ್ರಿಕವಾಗಿ ಆಕಸ್ಮಿಕವೇನಲ್ಲ ಅನ್ನಿಸುತ್ತೆ. ಏಕೆಂದರೆ “ತೇಜೋ- ತುಂಗಭಧ್ರಾ” ಕಾದಂಬರಿಕಾರರ ಘೋಷಿತ ತಾತ್ವಿಕತೆಗೂ,ಅವರ ಕಾದಂಬರಿಯ ಕಥನ ನಿರ್ವಹಿಸುವ, ಕಟ್ಟಿಕೊಡುವ ಸತ್ಯಗಳಿಗೂ ಅಂತರ ಇರುವುದು.

ಮೇಲಿನ ಮಾತುಗಳಿಗೆ ಕಾದಂಬರಿಯಿಂದಲೇ ನಿದರ್ಶನ ಕೊಡುವುದಾದರೆ…

1) ಪೋರ್ಚುಗೀಸರ ಮತಾಂತರ ಪ್ರಕ್ರಿಯೆ, ಹಾಗೂ ಆದಿಲ್ ಶಾಹಿಗಳ ಮತಾಂತರ ಪ್ರಕ್ರಿಯೆಯನ್ನು ಓದುಗನ ಕಣ್ಣಿಗೆ ಕಟ್ಟಿ, ಮನಸ್ಸಿನ ಆಳದಲ್ಲಿ ಉಳಿಯುವ ಹಾಗೆ ವರ್ಣಿಸುವ ಲೇಖಕರು ಕೃಷ್ಣದೇವರಾಯನು ಮಾಡುತ್ತಿದ್ದ “ವೈಷ್ಣವೀಕರಣದ’ ದ ಬಗೆಗೆ ಅದ್ಯಾಕೋ ಬಹಳ ನಿರಾಸಕ್ತಿ ವಹಿಸುತ್ತಾರೆ ಮತ್ತು ಕೃಷ್ಣದೇವರಾಯನನ್ನು ಧರ್ಮ ಸಹಿಷ್ಣುವಾಗಿ ಚಿತ್ರಿಸುತ್ತಾರೆ.

ಮಧ್ಯಕಾಲೀನ ಕರ್ನಾಟಕ ಅಥವಾ ದಖನ್ ಪ್ರದೇಶ ಬಹಳ ಹಿಂದಿನಿಂದಲೂ ಧಾರ್ಮಿಕ ಸಹಿಷ್ಣುತೆಗೆ ಹೆಸರಾಗಿದ್ದುದ್ದು. ಆದರೆ ಇಲ್ಲಿ ಲೇಖಕರು ಆದಿಲ್ ಶಾಹಿಗಳ ಮತಾಂತರ ಪ್ರಕ್ರಿಯೆ ಕ್ರೌರ್ಯವನ್ನು ವಿವರಿಸುತ್ತಾ ವಿಜಯನಗರ ಬಿಟ್ಟರೆ ಉಳಿದ ಪ್ರದೇಶ ಅಷ್ಟು ಸುರಕ್ಷಿತವಲ್ಲ ಎಂಬಂತೆ ಹೇಳುತ್ತಾರೆ.

ಮುಸ್ಲಿಮರಿಗೂ, ಕ್ರಿಶ್ಚಿಯನ್ನರಿಗೂ ವಿಜಯನಗರ ಸಾಮಾಜ್ಯ ಮಾತ್ರ ಸುರಕ್ಷಿತ ಉಳಿದವು ಅಲ್ಲ ಎನ್ನುತ್ತಾರೆ. ಇದು ಕೊಂಚ ಚರಿತ್ರೆಯ ಅಪಗ್ರಹಿಕೆ ಅನ್ನಿಸುತ್ತೆ.

2) ವಿಜಯನಗರ ಸಾಮ್ರಾಜ್ಯದ ಬಗ್ಗೆ ವಿದೇಶಿ ಬರಹಗಾರರು ಹೇಳಿದ್ದ ಬೀದಿ ಬೀದಿಗಳಲ್ಲಿ ಮುತ್ತು ರತ್ನವನ್ನು ಮಾರುತ್ತಿದ್ದರು. ಈ ಸಾಮ್ರಾಜ್ಯ ಅತ್ಯಂತ ಸಂಪತ್ಭರಿತ ರಾಜ್ಯವಾಗಿತ್ತು, ಯಾವುದೇ ಸಮಸ್ಯೆಗಳು ಇಲ್ಲಿ ಇರಲಿಲ್ಲ ಎಂಬ ಉತ್ಪ್ರೇಕ್ಷೆಯ ಮಾತುಗಳನ್ನು ಲೇಖಕರು ನಿಜವೆಂದು ಪೂರ್ಣವಾಗಿ ನಂಬಿ ಅದನ್ನು ಕಾದಂಬರಿಯಲ್ಲಿ ಅವಕಾಶ ಸಿಕ್ಕ ಕಡೆಯಲ್ಲೆಲ್ಲಾ ಪಾತ್ರಗಳ ಮೂಲಕ ಹೇಳಿಸುತ್ತಾ ಓದುಗರನ್ನು ನಂಬಿಸುವ ಕೆಲಸ ಮಾಡಿರುವುದು.

ಬಹುಶಃ ಲೇಖಕರು ಕಾದಂಬರಿಯನ್ನು ಬರೆಯುವ ಪೂರ್ವದಲ್ಲಿ ಮೈಸೂರು ಗೆಜೆಟಿಯರ್ ಸಿ. ಹಯವದನರಾವ್ ಅವರ ಸಂಪಾದನೆಯ ಕೃತಿಯನ್ನು ನೋಡಿಲ್ಲವೆನಿಸುತ್ತದೆ. ಅದರಲ್ಲಿ ವಿಜಯನಗರ ಅರಸ ಕೃಷ್ಣದೇವರಾಯನ ಅಡಳಿತದಲ್ಲಿ ಯುದ್ಧದಿಂದ ಬೇಸರಗೊಂಡಿದ್ದ ಆಯಗಾರರು ತೆರಿಗೆ ಹಣವನ್ನು ಕಟ್ಟಲಾಗದೆ ವಿಜಯನಗರ ತೊರೆದು ಗುಳೆ ಹೋಗುವ ವಿವರಗಳಿವೆ.

3) ಕಾದಂಬರಿಯ ಬಹುಮುಖ್ಯ ಪಾತ್ರವಾದ ಗೇಬ್ರಿಯಲ್ ( ಬೆಲ್ಲಾಳ ಪ್ರಿಯಕರ) ಮುಂದೆ ಆದಿಲ್ ಶಾಹಿಗಳ ಕೈಗೆ ಸಿಕ್ಕು ಮತಾಂತರಗೊಂಡು ಅಹಮ್ಮದ್ ಖಾನ್ ಆಗಿ ಮೂಗು – ಕಿವಿ ಕಳೆದುಕೊಂಡು, ತೆಂಬಕಪುರದ ಜನಗಳ ಬಾಯಲ್ಲಿ ಅಮ್ಮದಕಣ್ಣನಾಗಿ ಇದ್ದವನು, ಅಕಸ್ಮಾತ್ ಕಾದಂಬರಿಯ ಮತ್ತೊಂದು ಮುಖ್ಯ ಪಾತ್ರ ಹಂಪವ್ವಳ ಪರಿಚಯವಾಗಿ, ಮುಂದೆ ಆ ಪರಿಚಯ ಆತ್ಮೀಯವಾಗಿ ಕಡೆಗೆ ಇತ್ತ ಅಮ್ಮದಕಣ್ಣ ತನ್ನ ಪ್ರೇಯಸಿ ಬೆಲ್ಲಾಳಿಂದ ದೂರವಾಗಿ, ಅತ್ತ ಹಂಪವ್ವಳೂ ತನ್ನ ಗಂಡ ಕೇಶವನನ್ನು ಕಳೆದುಕೊಂಡು, ತನ್ನ ಜೀವ ಉಳಿಸಿಕೊಳ್ಳಲು ಸತಿ ಚಿತೆಯಿಂದ ತಪ್ಪಿಸಿಕೊಂಡು ಬಂದಾಗ ತನ್ನ ಜೀವ ಕಾಪಾಡಿದ ಅಮ್ಮದಕಣ್ಣನ ಬಗ್ಗೆ ಪ್ರೇಮ ಮೂಡಿ ಕಡೆಗೆ ತನ್ನನ್ನು ತಾನು ಆತನಿಗೆ ಅರ್ಪಿಸಿಕೊಳ್ಳಲೂ ಒಂದು ಹೆಣ್ಣಾಗಿ ಮುಂದೆ ಬಂದರೂ, ಗಂಡಾಗಿ ಏಕಾಂತ ಸಿಕ್ಕರೂ ಅಮ್ಮದಕಣ್ಣ ಅವಳಿಂದ ದೂರವಾಗಿಯೇ ಉಳಿಯುತ್ತಾನೆ. ಕಡೆಗೆ ತನ್ನನ್ನು ಬಿಟ್ಟು ಹೋಗಬೇಡ ಎಂದು ಹಂಪವ್ವ ಬೇಡಿಕೊಂಡರೂ “ಆ ಸಂಬಂಧಕ್ಕೆ ಅಮ್ಮದಕಣ್ಣ ಸಿದ್ಧನಿರಲಿಲ್ಲ” ಎಂದೇ ಲೇಖಕರು ಹೇಳುತ್ತಾರೆ. ಕಡೆಗೂ ಈ ಎರಡೂ ಜೀವಗಳು ಒಂದಾದವೊ ಇಲ್ಲವೊ ಎಂಬುದನ್ನು ಹೇಳುವುದೇ ಇಲ್ಲ.

ಅಂದರೆ ಲೇಖಕರಿಗೆ ಈ ಎರಡು ಭಿನ್ನ ಧರ್ಮಿಯರನ್ನು ಒಂದು ಮಾಡಬೇಕೆನ್ನುವ ಧೋರಣೆ ಯಾಕೊ ಮನಸ್ಸಿಗೆ ಒಪ್ಪಿತವಾಗಿಲ್ಲ. ಆಳದಲ್ಲಿ ಈ ಧರ್ಮಕೆಡಿಸಲು, (ಹಂಪಮ್ಮ ಒಪ್ಪಿದರೂ ) ಲೇಖಕರ ಮನಸ್ಸು ಒಪ್ಪುವುದೇ ಇಲ್ಲ.

4) ‘ಪ್ರಜಾವಾಣಿ’ಯ ಸಾಪ್ತಾಹಿಕದಲ್ಲಿ ವಿಮರ್ಶಕ ನಟರಾಜ್ ಹುಳಿಯಾರರು ‘ಸಾಹಿತ್ಯ ಸಾಮಾನ್ಯರ ಸಖ ಆಗಿದೆಯೆ?’ ಎಂಬ ಲೇಖನದಲ್ಲಿ-

“ಸಾಹಿತ್ಯ ಜನರ ಸಂಗಾತಿಯಾಗುವುದೆಂದರೆ ಜನರಿಗೆ ರೈಲು ಹತ್ತಿಸುವುದಲ್ಲ. ಕತೆಯಲ್ಲೊ, ಕಾದಂಬರಿಯಲ್ಲೊ ಕೃತಕವಾದ ಕೊನೆಯನ್ನು ಸೃಷ್ಟಿಸಿ ಸಾಮಾನ್ಯ ಗೆಲ್ಲುವಂತೆ ಮಾಡಿ ಹುಸಿ ಸಮಾಧಾನ ಪಡೆಯುವುದಾಗಲಿ, ನೀಡುವುದಾಗಲಿ ಅಲ್ಲ. ಇಂಥ ದುರ್ಬಲ ಬರವಣಿಗೆ ಕಾಲದ ಓಟದಲ್ಲಿ ನಿಲ್ಲುವುದಿಲ್ಲ ಎಂಬುದಕ್ಕೆ ನಮ್ಮ ಕಣ್ಣೆದುರೇ ಬಿಟ್ಟು ಹೋದ ನೂರಾರು ಪುಸ್ತಕಗಳಿವೆ”

ಎಂಬ ಮಾತುಗಳು ಈ ಕಾದಂಬರಿಯ ಅಂತ್ಯದ ಬಗ್ಗೆಯೇ ಹೇಳಿರುವ ಮಾತುಗಳೆಂದು ನನಗೆ ಅನ್ನಿಸಿವೆ.

5) ಈ ಕಾದಂಬರಿಯಲ್ಲಿ ಬರುವ ಮಾಪಳ ಮತ್ತು ತೆಂಬಕ್ಕಳ ಮಗಳಾದ ಈಶ್ವರಿ ಎನ್ನುವ ಎಂಟು/ ಹತ್ತು ವರ್ಷದ ಮಗುವಿಗೆ ಹಿಂಸೆಯನ್ನು ತೋರಿಸುವ (ಎರಡು- ಮೂರು ದೃಶ್ಯಗಲಿವೆ) ಮತ್ತು ಕಡೆಗೆ ಹಿಂಸೆ ಮತ್ತು ಕ್ರೌರ್ಯವನ್ನು ಆ ಮಗು ಒಂದು ರೀತಿಯಲ್ಲಿ ಎಂಜಾಯ್ ಮಾಡುವ ದೃಶ್ಯಗಳನ್ನು ಲೇಖಕರು ಕಟ್ಟಿಕೊಡುತ್ತಾರೆ.

(ತನ್ನ ತಂದೆಯನ್ನು ಕೊಂದಿದ್ದ, ಈಗ ತಂದೆಯ ಸ್ಥಾನದಲ್ಲಿದ್ದ ಕೇಶವ ಲೆಂಕನಾಗಿ ಆತ್ಮಾರ್ಪಣೆಗೊಂಡ ಸಂದರ್ಭದಲ್ಲಿ ಎಂಟು ವರ್ಷದ ಮಗು ಈಶ್ವರಿ “ಅತ್ಯಂತ ಉತ್ಸಾಹದಿಂದ ಚಪ್ಪಾಳೆ ತಟ್ಟಿ ನಮ್ಮಪ್ಪನ್ನು ಕೊಂದಿದ್ದು ಈತನೇ” ಎಂದು ಕೂಗಿದಳು)
ಇದು ನಿಜಕ್ಕೂ ಆಘಾತಕರವಾದದ್ದು. ಒಬ್ಬ ಸೃಜನಶೀಲ ಲೇಖಕ ಹಿಂಸೆ ಮತ್ತು ಕ್ರೌರ್ಯವನ್ನು ಆ ಎಳೆ ಮನಸ್ಸುಗಳಿಂದ ದೂರವಿರಿಸಬೇಕಲ್ಲವೆ? ಆದರೆ ಅದು ಇಲ್ಲಿ ಆಗಿಲ್ಲ.

ಇದೇ ಲೇಖಕರು ಹಿಂದೊಮ್ಮೆ ‘ಪ್ರಜಾವಾಣಿ’ಯ ಸಾಪ್ತಾಹಿಕದಲ್ಲಿ ಹಿಂಸೆಯನ್ನು ಮಕ್ಕಳ ಕಣ್ಣಿಂದ ದೂರವಿಡಬೇಕೆಂದು ಬರಹ ಬರೆದಿದ್ದರು.

6) ಈ ಕಾದಂಬರಿಯಲ್ಲಿ ಶೈವ ಮತ್ತು ವೈಷ್ಣವರ ಧಾರ್ಮಿಕ ಸಂಘರ್ಷದಲ್ಲಿ ಪ್ರಭುತ್ವ ಪರವಾಗಿದ್ದ ವೈಷ್ಣವದ ಗೆಲುವನ್ನೆ ಎತ್ತಿ ಹಿಡಿಯಲು ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ.
ಶೈವನಾದ ಮಾಪಳನಾಯಕ ವೈಷ್ಣವನಾದ ಕೇಶವನ ಮುಂದೆ ಸೋಲುವುದು, ಸಾಯುವುದು.

ಇಂತಹ ಕೆಲ ಅಂಶಗಳನ್ನು ಈ ಕಾದಂಬರಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಈ ಕಾದಂಬರಿಯಲ್ಲಿ ಲೇಖಕರು ಗೇಬ್ರಿಯಲ್ ಮತ್ತು ಬೆಲ್ಲಾಳ ಪ್ರೇಮದ ಏಕಾಂತದ ವಿವರಗಳನ್ನು ಕಟ್ಟಿಕೊಡುವ ದೃಶ್ಯಗಳು,
ಕೇಶವ ಮತ್ತು ಹಂಪಮ್ಮಗಳ ನಡುವಿನ ಪ್ರೇಮ ಮತ್ತು ಅವರ ನಡುವಿನ ಸಂಭಾಷಣೆ.
ಗೇಬ್ರಿಯಲ್ ಮತ್ತು ಅಗ್ವೇದಾಳ ನಡುವಿನ ಮಾತುಕತೆ, ಅವರ ನಡುವಿನ ಹಾಗೂ ಜಾಕೋಮ್ ನ ನಡುವಿನ ಮಾನವೀಯ ಸಂಬಂಧ,
ಹಣುಮ ಮತ್ತು ಅವನ ಮಡದಿಯ ಸಂಬಂಧದ ದುರಂತದ ಕತೆ.
ಗುಣಸುಂದರಿ ಮತ್ತು ಚಂಪಕ್ಕಗಳ ಪಾತ್ರದ ಕಟ್ಟುವಿಕೆ, ಕ್ರೂರ ಸತಿ ಪದ್ದತಿಯ ವಿವರಗಳು ಕಾದಂಬರಿ ಓದಿ ಮುಗಿಸಿದರೂ ನಮ್ಮನ್ನು ಬಿಡದೆ ಕಾಡುತ್ತವೆ. ಆ ಮಟ್ಟಿಗೆ ಕಾದಂಬರಿಯ ಪಾತ್ರ ಚಿತ್ರಣ ಮತ್ತು ಕಥನ ಕೌಶಲ ವಸುಧೇಂದ್ರರ ತೇಜೋ- ತುಂಗಭದ್ರಾ ಕಾದಂಬರಿಯ ಯಶಸ್ಸು ಎನ್ನಬಹುದು.

ಕಡೆಯದಾಗಿ ಗೆಳೆಯ ಜಯಶಂಕರ ಹಲಗೂರು ತನ್ನ ಪಿ ಎಚ್ ಡಿ ಪ್ರಬಂಧ
“ಕನ್ನಡ ಕಥನ ಸಾಹಿತ್ಯದಲ್ಲಿ ಕೋಮುವಾದದ ಪ್ರತಿನಿಧೀಕರಣ” ದಲ್ಲಿ
ಲೇಖಕನಾದವವನ ಬಗ್ಗೆ ಉಲ್ಲೇಖಿಸಿರುವ ಈ ಮಾತುಗಳು

“ಸಮಕಾಲೀನ ವರ್ತಮಾನವು ಭವಿಷ್ಯತ್ ಕಾಲದಲ್ಲಿ ಬಾಳುವವರಿಗೆ ಚರಿತ್ರೆಯೇ ಆಗಿ ಹಿಂದೆ ನಿಲ್ಲುವುದರಿಂದ ತಮ್ಮ ಕಾಲವನ್ನು ತಾವು ಪೂರ್ಣದೃಷ್ಟಿಯಲ್ಲಿ ಗ್ರಹಿಸುವ ಚಾರಿತ್ರಿಕ ಜವಾಬ್ದಾರಿ ಇರುತ್ತದೆ ಎಂಬುದನ್ನು ಬರಹಗಾರರು ಮರೆಯಬಾರದು. ಸಮಕಾಲೀನ ರಾಜಕೀಯ ಧೋರಣೆಗಳು ಸಂವೇದನಾಶೀಲ ಬರಹಗಾರರನ್ನು ಮರುಳುಗೊಳಿಸಿ ಸೆಳೆದುಕೊಳ್ಳುತ್ತವೆ. ಇದರಿಂದ ಪಾರಾಗಿ ಪೂರ್ಣದೃಷ್ಟಿಯಲ್ಲಿ ಲೋಕಾನುಭವವನ್ನು ಗ್ರಹಿಸುವ ಕಾಣ್ಕೆಯನ್ನು ಲೇಖಕ ದಕ್ಕಿಸಿಕೊಂಡು ಆ ಮೂಲಕ ಓದುಗರನ್ನು ಎತ್ತರಕ್ಕೆ ಕೊಂಡೊಯ್ಯಬೇಕು”

ತೇಜೋ- ತುಂಗಭದ್ರಾ ಕಾದಂಬರಿಯ ಬಗೆಗೆ ಬರೆದ ಹಾಗೆ ನನಗೆ ಕಾಣಿಸಿದವು. ಏಕೆಂದರೆ ಆ ಪೂರ್ಣದೃಷ್ಟಿ ಈ ಕಾದಂಬರಿಯಲ್ಲಿ ಇಲ್ಲ.
ಇಡೀ ಕಾದಂಬರಿಯು ಒಬ್ಬ ಗಂಭೀರ ಅಧ್ಯಯನಶೀಲ ಸಂಶೋಧಕ ಚರಿತ್ರೆಯನ್ನು ಅದರ ಎಲ್ಲ ವಿವರಗಳನ್ನು ಹೊಂದಿಸಿಕೊಂಡು, ತನ್ನ ಕಥನ ಕಟ್ಟುವ ಜಾಣ್ಮೆಯ ಕಲೆಗಾರಿಕೆಯಿಂದ ಕಥೆ ಕಟ್ಟಿ ಓದುಗನ ಮುಂದೆ ಇಟ್ಟಂತೆ ಇದೆಯೇ ಹೊರತು, ಅದು ಸೃಜನಶೀಲ ಲೇಖಕನೊಬ್ಬನ ಆಳಕ್ಕೆ ಇಳಿದು, ಅದು ಅವನ ಅನುಭವವಾಗಿ ಬಿಚ್ಚಿಕೊಂಡಿಲ್ಲ ಅನ್ನಿಸಿತು.
———————————

* ಈ ಮಾತುಗಳನ್ನು ಮರೆಯದೆ ಹೇಳಲೇಬೇಕು ಅನ್ನಿಸಿದವು…

ಈ ಕಾದಂಬರಿಯ ಬಗ್ಗೆ ಕನ್ನಡದ ಪ್ರಸಿದ್ಧ ಲೇಖಕರು ಮತ್ತು ವಿಮರ್ಶಕರು ಕೆಲವು ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಆದರೆ ಆ ಮಾತುಗಳು ಕನ್ನಡ ಪುಸ್ತಕ ವಿಮರ್ಶೆ ತಲುಪಿರುವ ಅಧೋಗತಿಯ ಮಾತುಗಳು ಅನ್ನಿಸುತ್ತೆ.
ಕನ್ನಡದಲ್ಲಿ ಬರೆಯುವ ಒಬ್ಬ ಲೇಖಕ ಉಳಿಯಬೇಕು, ಬೆಳೆಯಬೇಕು ನಿಜ. ಹಾಗೆಯೇ ಕನ್ನಡದ ಬರವಣಿಗೆಯ ಗುಣಮಟ್ಟವೂ ಉಳಿಯಬೇಕು, ಬೆಳೆಯಬೇಕು ಅಲ್ಲವೆ?

ಆದರೆ ಓದುಗರಾಗಿ, ವಿಮರ್ಶಕರಾಗಿ, ಪ್ರಾಮಾಣಿಕತೆ ಮತ್ತು ನೈತಿಕತೆಯು ಬೇಕಲ್ಲವೆ. ಅವನ್ನು ಬದಿಗಿಟ್ಟಾಗ ಮಾತ್ರ ಮೇಲಿನಂತಹ ಮೆಚ್ಚುಗೆಯ ಮಾತುಗಳು ಸರಾಗವಾಗಿ ಬರುತ್ತವೆ. ಇದು ವಿಮರ್ಶಕರ ಮಾತುಗಳಾದರೆ ಇನ್ನು ಲೇಖಕನಾದವನು
ಕೇವಲ ತನ್ನ ಬರವಣಿಗೆಯನ್ನು ಮಾರಾಟದ ಸರಕನ್ನಾಗಿಸಲು ಹೊರಡುವವರಷ್ಟೆ ಹೀಗೆ ಕೇವಲ ಮೆಚ್ಚುಗೆಯನ್ನೆ ಪುಸ್ತಕದ ತುಂಬಾ ಹಾಕಬಲ್ಲರು. ಲೇಖಕನಾದವನಿಗೆ ತನ್ನನ್ನು ಎಲ್ಲರೂ ಹೊಗಳಬೇಕೆಂದು ಬಯಸೋದು ಸಹಜ. ಆದರೆ ಈ ಪರಿ ಬಯಸೋದು ಆತ್ಮರತಿಯಲ್ಲವೆ?

‍ಲೇಖಕರು avadhi

February 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. Anuradha Arun

    ಶ್ರೀ. ಹಯವದನ ರಾವ್ ಅವರ ಸಂಪಾದಕತ್ವದ ಕೃತಿ ಯಾವುದು ?

    ಪ್ರತಿಕ್ರಿಯೆ
    • RENUKARADHYA H S

      ಹಯವದನರಾವ್ ಅವರದ್ದು “ಮೈಸೂರು ಗೆಜೆಟಿಯರ್ ” ಮೂರನೇ ಸಂಪುಟ.

      ಪ್ರತಿಕ್ರಿಯೆ
  2. lalitha siddabasavayya

    ರೇಣುಕಾರಾಧ್ಯರಿಗೆ ” ತೇಜೋ ತುಂಗಭದ್ರಾ ” ದ ಓದು ಹೀಗನ್ನಿಸಿತು, ಸರಿ. ಅದನ್ನು ಪ್ರಶ್ನಿಸಲಾಗದು.

    ಆದರೆ ಇತರರ ಓದನ್ನು ಅವರು ಹೇಗೆ ಅಳೆಯುತ್ತಾರೆ? ತನ್ನ ಒಂದು ಓದು ಇತರರಲ್ಲೂ ತನಗಾದ ಅನುಭವವನ್ನೆ ಆಗುಗೊಳಿಸುತ್ತದೆ ಎಂದು ನಿರೀಕ್ಷಿಸುವುದು ಸಾಧುವೇ? ಎಷ್ಟು ಜನ ಓದುಗರೋ ಅಷ್ಟೂ ಅಭಿಪ್ರಾಯಗಳು ಉಂಟಾಗುತ್ತವೆ. ಹಲವು ಸಾಮ್ಯತೆ ಹಲವು ಭಿನ್ನತೆ – ಇವು ಮನುಷ್ಯ ಲಕ್ಷಣ. ನಾವೆಲ್ಲರೂ ಮನುಷ್ಯರೇ.‌ ಒಂದೊಂದು ಪ್ರಾಣಿ ಜಾತಿಯ ದೈಹಿಕ ಲಕ್ಷಣಗಳನ್ನು ಪ್ರಕೃತಿ ಏಕತ್ರ ತಿದ್ದಿರುತ್ತದೆ. ಆದರೆ ಮಾನವ ಜಾತಿಯಲ್ಲಿ ಮಾತ್ರ ದೈಹಿಕದ ಹೊರತಾಗಿ ಮಾನಸಿಕ ಲಕ್ಷಣಗಳು ಪ್ರತಿ ನರಜೀವಿಗೂ ಭಿನ್ನತೆ ಹೊಂದಿರುತ್ತವೆ. ಈ ಮಾನಸಿಕ ಸಂರಚನೆಯು ಅತಿ ಸಂಕೀರ್ಣ ಮತ್ತು ಅದೇ ನಾವು ಸಾಹಿತಿಗಳೆನಿಸಿಕೊಂಡವರ ಬರಹದ ನಿಜ ಬಂಡವಾಳ. ನಂನಮ್ಮ ಬರಹಗಳಲ್ಲಿ ಈ ಮನುಷ್ಯ ಪ್ರಾಣಿಯ ಮನಸ್ಸನ್ನು ಬಗೆಯುವುದೆ ನಮ್ಮ ಒರೆಗಲ್ಲು. ಇದರ ನಿಷ್ಪತ್ತಿಯ ಹಿಂದೆ ಅಲೆಯುವವರು ನಾವು.

    ಹೀಗಿರುವಾಗ ಸರ್, ನೀವು ಅದು ಹೇಗೆ ಬೇರೊಬ್ಬರ ಓದಿನ ಮೆಚ್ಚುಗೆಯನ್ನು ಅಲ್ಲಗಳೆಯುವಿರಿ? ಅದು ಕನ್ನಡ ವಿಮರ್ಶೆಯ ಅಧೋಗತಿ ಎಂದು ಬಿಟ್ಟಿದ್ದೀರಿ, ಇದು ನಿಮಗೆ ಉಚಿತವೆನಿಸುತ್ತದೆಯೇ ಸರ್? ಇದೂ ಒಂದು ತರಹದ ಅಸಹನೆಯಲ್ಲವೇ?

    ನನ್ನೊಳಗೆ “ತೇತುಂ” ಓದು ಹುಟ್ಟಿಸಿದ ಅನುಭವ ನಿಮ್ಮ ಹಾಗಿಲ್ಲ, ಇತರರು ಕೊಟ್ಟಿರುವ ಅಭಿಪ್ರಾಯಗಳ ತರಹವೂ ಇಲ್ಲ. ಇದಕ್ಕೆ ನನ್ನ ಗ್ರಹಿಕೆಯ ರೀತಿಯೆ ಕಾರಣ ಎಂದು ನಾನು ಅಂದುಕೊಂಡಿರುವೆ. ನನ್ನ ಗ್ರಹಿಕೆ ನನ್ನ ಮನೋರಚನೆಯ ಮೇಲಿದೆ. ಸೋ ಆ ಅನುಭವ ಅದು ನನ್ನದು ಕೇವಲ ನನ್ನದು. ಅದರ ಹಾಗೆ ರೇಣುಕಾರಾಧ್ಯರ ಅನುಭವವಾಗಲಿ ಇತರರದಾಗಲಿ ಇರುವುದಿಲ್ಲ.

    ಪ್ರತಿಕ್ರಿಯೆ
  3. RENUKARADHYA H S

    ಪ್ರೀತಿಯ
    ಲಲಿತಾ ಸಿದ್ಧಬಸವಯ್ಯ ಮೇಡಂ.
    ನಿಮ್ಮ ಮಾತು ನಿಜ.ಒಬ್ಬೊಬ್ಬ ಓದುಗನ ಓದು ಭಿನ್ನ. ಆ ಕಾರಣದಿಂದಲೇ ಕನ್ನಡ ಸಾಹಿತ್ಯ ಇಲ್ಲಿಯವರೆಗೂ ಬೆಳೆದು ಬಂದಿರೋದು,ಉಳಿದಿರುವುದು.ನಾನು ಅಲ್ಲಗಳೆದಿರೋದು ಎಲ್ಲರ ಓದಿನ ಅಭಿಪ್ರಾಯವನ್ನು ಅಲ್ಲ.ಇಡೀ ಕಾದಂಬರಿಯ ಮಿತಿಯ ಬಗ್ಗೆ ಅಷ್ಟೂ ಜನ ಓದುಗರಲ್ಲಿ( ಆ ಕಾದಂಬರಿಯ ಆರಂಭದ ನಾಲ್ಕೂ ಪುಟದ ಹದಿನೇಳು ಜನರ ಪ್ರತಿಕ್ರಿಯೆಯಲ್ಲಿ) ಒಬ್ಬರೂ ಕೂಡ ಹೇಳಿಲ್ಲದಿರುವುದನ್ನು.ಹೀಗೆ ಕೇವಲ ಮೆಚ್ಚುಗೆಯನ್ನೆ ಒಂದು ಕೃತಿಯ ಬಗ್ಗೆ ನೀಡುವುದೆಂದರೆ
    ಏನರ್ಥ? ನೀವೇ ಹೇಳುವ ಒಬ್ಬೊಬ್ಬರ ಓದು ಭಿನ್ನ ಎಂಬ ಮಾತಿನ ಅರ್ಥವೇನು.
    ಅಲ್ಲಿ ಇರುವವರೆಲ್ಲರೂ ಕನ್ನಡ ಸಾಹಿತ್ಯವಲಯದಲ್ಲಿ ಈಗಾಗಲೆ ಪ್ರಸಿದ್ಧರು. ಅವರೆಲ್ಲರೂ ಏಕಮುಖವಾಗಿ ಕಾದಂಬರಿಯನ್ನು ಹೊಗಳಿದ್ದಾರೆಯೇ ವಿನಃ ಕಾದಂಬರಿಯ, ಲೇಖಕನ ಮಿತಿಗಳನ್ನು ಎಲ್ಲಿಯೂ ಹೇಳಿಲ್ಲ. ಒಂದು ಕೃತಿಯ ಓದು ಎಂಬುದು ಕೇವಲ ಹೊಗಳಿಕೆ, ಮೆಚ್ಚುಗೆ ಅಷ್ಟೆಯೆ. ನೀವು ಒಬ್ಬ ಕವಿಯಾಗಿ ಈ ತರದ ಓದನ್ನು ಮೆಚ್ಚುತ್ತಿರಾ.
    ಇವತ್ತು ಕನ್ನಡದ ವಿಮರ್ಶೆ ಎಂಬುದು ಲೇಖಕನ್ನು ಮುಲಾಜಿಗೆ ಬಿದ್ದು ಹೊಗಳುವ, ಒಂದು ಸೌಜನ್ಯದ ಕ್ರಿಯೆ ಆಗುತ್ತಿದೆ.ಒಬ್ಬ ಓದುಗನಾದವನಿಗೆ ಕೃತಿ ಮುಖ್ಯವಾಗಬೇಕೆ ಹೊರತು.ಕೃತಿಕಾರನಲ್ಲ.
    ಆದರೆ ತೇಜೋ× ತುಂಗಭದ್ರಾ ಕೃತಿಯ ಬಗೆಗೆ ಕೇವಲ ಮೆಚ್ಚುಗೆ, ಹೊಗಳಿಕೆಯನ್ನಷ್ಟೆ ಕಾಣಿಸಿರುವುದನ್ನು ಕಂಡು ನಾನು ಕನ್ನಡ ವಿಮರ್ಶೆಯ ಅಧೋಗತಿ ಎಂದಿದ್ದೇನೆ. ಅದು ಖಂಡಿತಾ ಅಸಹನೆಯಲ್ಲ ಮೇಡಂ.ನನಗೂ ಆ ಕೃತಿಯ ಬಗೆಗೆ ಕೆಲ ಅಂಶಗಳು ಮೆಚ್ಚುಗೆಯಾದವು ಅದನ್ನೂ ನಾನು ಹೇಳಿದ್ದೇನೆ.

    ಕಡೆಯದಾಗಿ ನಾನು “ತೇತುಂ” ಬಗ್ಗೆ ಬರೆದ ಮಾತುಗಳು ನನ್ನ ಒಂದು ಓದಿನ ಮಾತುಗಳಷ್ಟೆ ಅಲ್ಲದೆ ಅದು ನನ್ನ ಅಭಿಪ್ರಾಯಗಳಷ್ಟೆ. ಆ ಕೃತಿಯ ಬಗೆಗಿನ ಕಡೆಯ ಅಭಿಪ್ರಾಯ ಅಲ್ಲ. ನಿಮಗೆ ಆ ಕೃತಿಯ ಓದು ಕೊಟ್ಟ ಓದು ಖಂಡಿತಾ ಭಿನ್ನವಾಗಿರಬಹುದು,ಅದನ್ನು ನೀವು ಬರೆಯಿರಿ.ಅದರ ಬಗ್ಗೆ ನನಗೆ ಗೌರವಿದೆ.ಆದರೆ ಆ ಕೃತಿಯನ್ನು ಕುರಿತು ಸುಮ್ಮನೆ ಹೊಗಳಿಕೆಯ ಮೆಚ್ಚುಗೆಯ ಮಾತಗಳನ್ನಷ್ಟೆ ಬರೆದರೆ ಆ ಓದಿನ, ಬರವಣಿಗೆಯ honesty ಪ್ರಶ್ನಿಸಲು ಅರ್ಹವಾದದ್ದು ಅಲ್ಲವೆ.

    ಪ್ರತಿಕ್ರಿಯೆ
  4. Umesh desai

    ತುಂಬಾನೇ ವಿಷ ಇದೆ ಸ್ವಾಮಿ ನಿಮ್ಮಲ್ಲಿ ಕನ್ನಡ ವಿಮರಶೆ ಅಧೋಗತಿ ತಲುಪಿದೆ ಇದು ಸತ್ಯ ಅನಿಸಿತು ನಿಮ್ಮ ಈ ಲೇಖನ ಓದಿ…ನಿಮಗೋ ಅದೇ ಚರವಿತ ಚರವಣ ಕತೆ ದಲಿತ ಗೌಡರು ಶಾನುಭೋಗರು ಬ್ರಾಹ್ಮಣರ ತೆಗಳುವಿಕೆಯ ಕಯೆ ಓದಿ ಓದಿ ಬರಗೆಟ್ಟಿರುವಿರಿ….ಹೋಗಲಿ ನೀವು ರಚಿಸಿರೋ ಕನ್ನಡ ಕೃತಿ ಇದೆಯೇ….

    ಪ್ರತಿಕ್ರಿಯೆ
  5. Shivayogi Kallimath

    ಈ ವಿಮರ್ಶೆ ಸರ್ಕಾರದ ಸುತ್ತೋಲೆ,ಸರ್ವಾಧಿಕಾರಿಯ ಫರ್ಮಾನು ಇದ್ದಂಗ ಇದೆ. ಈ ಕೃತಿ ಮತ್ತು ಲೇಖಕನನ್ನು ಸೆರೆಗೆ ತಳ್ಳಿದೆ .ಕಟಕಟೆಗಲ್ಲ. ಈ ಎಲ್ಲ ಮಾತುಗಳಿಗೆ ಪೂರ್ವ ಸಿದ್ಧತೆ ಇದೆ ನಿಜ. ತಯಾರಿ ಇದೆ.ವಿಮರ್ಶೆ ನೋಡಿದರೆ ಅವರೆ ಹೇಳಿದ ಮಾತು ನಿಜ. ಕನ್ನಡ‌ದ ವಿಮರ್ಶೆ ಅಧೋಗತಿಗೆ ಇಳಿದಿದೆ.

    ಪ್ರತಿಕ್ರಿಯೆ
  6. ಎಂ.ಎ.. ಶ್ರೀರಂಗ ಬೆಂಗಳೂರು

    ರೇಣುಕಾರಾಧಯ್ಯ ಅವರಿಗೆ–
    ನೀವು ಪರಿಭಾವಿಸಿದ ರೀತಿಯಲ್ಲಿ ಅಥವಾ ಬೇರೆ ವಿಮರ್ಶಕರು ಹೇಳಿದ ರೀತಿಯಲ್ಲಿಯೇ ಒಬ್ಬ ಕಾದಂಬರಿಕಾರ ಇತಿಹಾಸವನ್ನು ಏಕೆ ಕಾಣಬೇಕು?ವಿಜಯನಗರದ ಇತಿಹಾಸವಷ್ಟೇ ಅಲ್ಲ ನಮ್ಮ ಸಮಕಾಲೀನ ಇತಿಹಾಸವನ್ನೂ ಬೇರೆ ಬೇರೆ ರೀತಿಯಲ್ಲಿ ಹೇಳಿದ್ದಾರೆ. 1970-80ರ ನಡುವೆ ನಡೆದ ಭಾರತದ ಘಟನೆಗಳ ಬಗ್ಗೆ ಪರ-ವಿರೋಧ ಎರಡೂ ಅಭಿಪ್ರಾಯಗಳನ್ನು ದಾಖಲಿಸಿರುವ ನೂರಾರು ಪುಸ್ತಕಗಳು ಇವೆ. ಆ ಕಾಲದ ಬಗ್ಗೆ ಪತ್ರಿಕೆಗಳಲ್ಲಿ, ಬಂದ ಸಾಕಷ್ಟು ಮಾಹಿತಿಯಿದ್ದೂ ‘ಎರಡು ವಿಭಿನ್ನ ನೆಲೆಗಳಲ್ಲಿ’ ಇತಿಹಾಸವನ್ನು ಬರೆಯಬಹುದಾದರೆ ಅಲ್ಪ ಮಾಹಿತಿಯ ನಮ್ಮ ಹಿಂದಿನ ಇತಿಹಾಸದ ಬಗ್ಗೆ ಒಂದು ಕಾದಂಬರಿ ಬಂದರೆ ಅದು ಇತಿಹಾಸದ ತಿರುಚುವಿಕೆ, ಬಲಪಂಥೀಯ ದೃಷ್ಟಿಕೋನದ ಕಥೆ ಎಂದು ಹುಯಿಲೆಬ್ಬಿಸುವದು ಮಾಮೂಲಿಯಾಗಿದೆ.ಭೈರಪ್ಪನವರ ‘ಆವರಣ’ ಬಂದಾಗಲೂ ಹೀಗೇ ಆಗಿತ್ತು. ನಿಮ್ಮ ಕಾಣ್ಕೆಯಲ್ಲಿ ಹೋಸತೇನೂ ಇಲ್ಲ. ಭೈರಪ್ಪನವರಾಗಲೀ, ವಸುಧೇಂದ್ರ ಅವರಾಗಲೀ ಅಥವಾ ಹಿಂದೆ ಇತರರು ಬರೆದಿದ್ದಾಗಲೀ ಮುಂದೆ ಬರೆಯುವ ಯಾರೇ ಆಗಲೀ ಇತಿಹಾಸ ಆಧಾರಿತ ಕಾದಂಬರಿ ಬರೆದರೆ ಅದು ಇತಿಹಾಸದ ಕಾದಂಬರಿಯೇ ಹೊರತು ಇತಿಹಾಸದ ಪಠ್ಯಪುಸ್ತಕಗಳಲ್ಲ ಎಂಬುದನ್ನು ಮರೆಯದಿರೋಣ.

    ಎಂ.ಎ.ಶ್ರೀರಂಗ ಬೆಂಗಳೂರು.

    ಪ್ರತಿಕ್ರಿಯೆ
  7. Sriranga M A

    ನೀವು ಪರಿಭಾವಿಸಿದ ರೀತಿಯಲ್ಲಿ ಅಥವಾ ಬೇರೆ ವಿಮರ್ಶಕರು ಹೇಳಿದ ರೀತಿಯಲ್ಲಿಯೇ ಒಬ್ಬ ಕಾದಂಬರಿಕಾರ ಇತಿಹಾಸವನ್ನು ಏಕೆ ಕಾಣಬೇಕು?ವಿಜಯನಗರದ ಇತಿಹಾಸವಷ್ಟೇ ಅಲ್ಲ ನಮ್ಮ ಸಮಕಾಲೀನ ಇತಿಹಾಸವನ್ನೂ ಬೇರೆ ಬೇರೆ ರೀತಿಯಲ್ಲಿ ಹೇಳಿದ್ದಾರೆ. 1970-80ರ ನಡುವೆ ನಡೆದ ಭಾರತದ ಘಟನೆಗಳ ಬಗ್ಗೆ ಪರ-ವಿರೋಧ ಎರಡೂ ಅಭಿಪ್ರಾಯಗಳನ್ನು ದಾಖಲಿಸಿರುವ ನೂರಾರು ಪುಸ್ತಕಗಳು ಇವೆ. ಆ ಕಾಲದ ಬಗ್ಗೆ ಪತ್ರಿಕೆಗಳಲ್ಲಿ, ಬಂದ ಸಾಕಷ್ಟು ಮಾಹಿತಿಯಿದ್ದೂ ‘ಎರಡು ವಿಭಿನ್ನ ನೆಲೆಗಳಲ್ಲಿ’ ಇತಿಹಾಸವನ್ನು ಬರೆಯಬಹುದಾದರೆ ಅಲ್ಪ ಮಾಹಿತಿಯ ನಮ್ಮ ಹಿಂದಿನ ಇತಿಹಾಸದ ಬಗ್ಗೆ ಒಂದು ಕಾದಂಬರಿ ಬಂದರೆ ಅದು ಇತಿಹಾಸದ ತಿರುಚುವಿಕೆ, ಬಲಪಂಥೀಯ ದೃಷ್ಟಿಕೋನದ ಕಥೆ ಎಂದು ಹುಯಿಲೆಬ್ಬಿಸುವದು ಮಾಮೂಲಿಯಾಗಿದೆ.ಭೈರಪ್ಪನವರ ‘ಆವರಣ’ ಬಂದಾಗಲೂ ಹೀಗೇ ಆಗಿತ್ತು. ನಿಮ್ಮ ಕಾಣ್ಕೆಯಲ್ಲಿ ಹೋಸತೇನೂ ಇಲ್ಲ. ಭೈರಪ್ಪನವರಾಗಲೀ, ವಸುಧೇಂದ್ರ ಅವರಾಗಲೀ ಅಥವಾ ಹಿಂದೆ ಇತರರು ಬರೆದಿದ್ದಾಗಲೀ ಮುಂದೆ ಬರೆಯುವ ಯಾರೇ ಆಗಲೀ ಇತಿಹಾಸ ಆಧಾರಿತ ಕಾದಂಬರಿ ಬರೆದರೆ ಅದು ಇತಿಹಾಸದ ಕಾದಂಬರಿಯೇ ಹೊರತು ಇತಿಹಾಸದ ಪಠ್ಯಪುಸ್ತಕಗಳಲ್ಲ ಎಂಬುದನ್ನು ಮರೆಯದಿರೋಣ.

    ಎಂ.ಎ.ಶ್ರೀರಂಗ ಬೆಂಗಳೂರು.

    ಪ್ರತಿಕ್ರಿಯೆ
  8. Vijayavaman

    ಮೊದಲೇ ಹೇಳಿಬಿಡುತ್ತೇನೆ – ಈ ಕಾದಂಬರಿ ನನಗೆ ಇಷ್ಟವಾಗಿಲ್ಲ. ಹಾಗೆಯೇ ಈ ವಿಮರ್ಶೆಯೂ ಇಷ್ಟವಾಗಿಲ್ಲ.

    ಮೊದಲು ವಿಮರ್ಶೆ – ಇದು ಅನೇಕ ಪೂರ್ವಾಗ್ರಹ ಗಳಿಂದ ಕೂಡಿದೆ. ಭೈರಪ್ಪನವರ ಭೂತ ಇವರಿಗೆ ಹಿಡಿದಿದೆ. ಅಲ್ಲದೆ ಹಿಂದೂ- ಮುಸ್ಲಿಂ ಸಂಬಂಧಗಳ ಕುರಿತು ಇರುವ ಅವರದೇ ಗ್ರಹಿಕೆಗಳು. ಚರಿತ್ರೆ- ಕಾದಂಬರಿ , ಬ್ರಾಹ್ಮಣ್ಯ, ಇಸಂ ಗಳು ಇತ್ಯಾದಿಗಳ ಬಗ್ಗೆ ಇರುವ Bias. ಓದುವ ಮೊದಲೇ ಕಾದಂಬರಿಯ ಬಗ್ಗೆ ಮೂಡಿರುವ ಅಭಿಪ್ರಾಯಗಳಿಂದ ವಿಮರ್ಶೆ ಕಲುಷಿತ ಗೊಂಡಿದೆ.

    ಕಾದಂಬರಿ – ಈ ಕೃತಿ ಕೇವಲ ಸಂಶೋಧನಾ ಗ್ರಂಥವಾಗಿದೆಯೇ ಹೊರತು ಕಲಾಕೃತಿ ಆಗುವಲ್ಲಿ ಸೋತಿದೆ. It is an artistic failure. ಕಾದಂಬರಿ ಯ ಯಾವುದೇ ಛಾಯೆಯೂ ಇಲ್ಲದೇ, ಲೇಖಕನ ಅನುಭವ ಆಗದೇ, ಅಧ್ಯಯನ ವಾಗಿಯೇ ಉಳಿದು, ವಿಮರ್ಶರು ಉದಾಹರಿಸಿರುವ ಹಯವದನರಾಯರ ಗೆಝೆಟಿಯರ್ ಮಾದರಿಯಾಗಿ ಸ್ಥಗಿತವಾಗುತ್ತದೆ.

    ವಿಜಯವಾಮನ
    ಸಾಗರ

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಎಂ.ಎ.. ಶ್ರೀರಂಗ ಬೆಂಗಳೂರುCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: