ಆರ್ ಜಿ ಹಳ್ಳಿ ನಾಗರಾಜ
ಮಾನ್ಯರೆ,
‘ಕಲಾಗ್ರಾಮ’ ಕಲೆಯ ತವರು ಆಗದೇ ಇರುವುದಕ್ಕೆ ‘ಸಾಹಿತಿಗಳ ಸ್ಮಶಾನ’ ಜಾಗ ಆಗಿ ಪರಿವರ್ತನೆ ಆಗಿದೆ ಎಂಬುದು ನನ್ನ ಅಭಿಪ್ರಾಯ. ಸರ್ಕಾರದ ಬೇಜವಾಬ್ದಾರಿಯಿಂದ ಇದ್ದೊಂದು ಮಿನಿ ರಂಗಮಂದಿವೂ ಮುಚ್ಚಿ ಹೋಯಿತು. ಯಾವುದೇ ಚಟುವಟಿಕೆ ಇಲ್ಲದೆ ಕನ್ನಡ ಸಂಸ್ಕೃತಿ ಇಲಾಖೆಯ ಒಂದೆರಡು ಕಚೇರಿ, NSD ರೆಪರ್ಟರಿ ಅಲ್ಲಿವೆ.
ಕವಿ ಜಿ.ಎಸ್. ಶಿವರುದ್ರಪ್ಪ ತೀರಿಕೊಂಡಾಗ, ಅವರ ಅಂತ್ಯಕ್ರಿಯೆ ಅಲ್ಲಿಯೇ ಆಗಬೇಕೆಂದು ಕುಟುಂಬದ ಒಬ್ಬ ಪ್ರಮುಖ ವ್ಯಕ್ತಿ ಮಾಡಿದ ಹಠ, ಅಂದಿನ ಆ ತಪ್ಪು ಮುಂದೊಂದು ಮಹಾ ತಪ್ಪು ಘಟಿಸಲು ಕಾರಣವಾಯಿತು.
ಹೋಮ – ಯಜ್ಞ ಯಾಗಾದಿಗಳ ನಡುವೆ ಭಸ್ಮರಾದ ಯು.ಆರ್. ಅನಂತಮೂರ್ತಿ ಅವರಿಗೆ ಬೆಂಗಳೂರು ವಿವಿಯ ಈ ಕಲಾಗ್ರಾಮದ ಜಾಗ ಮತ್ತೆ ನೀಡಿದಾಗಲೇ ನಮ್ಮ ಸಮಕಾಲೀನ ಹಾಗೂ ಯುವ ಜನಾಂಗ ಪ್ರತಿಭಟನೆ ಮಾಡಿತ್ತು.
ಈಗ ಕವಿ ಸಿದ್ದಲಿಂಗಯ್ಯ ಅವರ ಸರದಿ… (ಈಗ ವಿರೋಧಿಸಿದರೆ, ‘ದಲಿತ ವಿರೋಧಿ’ ಪಟ್ಟ ಬರಬಹುದು) ಮುಂದೆ ಮತ್ತೊಬ್ಬ ಗಣ್ಯ ಸಾಹಿತಿ ಹೋದರೆ ರತ್ನಗಂಬಳಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!!
ನಟ ರಾಜಕುಮಾರ, ಪಾರ್ವತಮ್ಮ ರಾಜಕುಮಾರ ಅವರಿಗೆ ಕಂಠೀರವ ಸ್ಟುಡಿಯೋ ಜಾಗ ನೀಡಿದ್ದು, ನಟ ಅಂಬರೀಷನನ್ನೂ ರಾಜಕುಮಾರ ಪಕ್ಕದಲ್ಲೇ ಹೂತಿದ್ದು, ನಟ ವಿಷ್ಣುವರ್ಧನ್ ಅವರಿಗೆ ‘ಅಭಿಮಾನ’ ಸ್ಟುಡಿಯೋ ಜಾಗ ನೀಡಿದ್ದು ಮಹಾಪರಾಧವಾಗಿ ವಿವಾದಕ್ಕೊಳಗಾಗಿದ್ದು ಗೊತ್ತೇ ಇದೆ.
ಜಿಎಸ್ಸೆಸ್ಸ್, ಅನಂತಮೂರ್ತಿ ಅವರ ಅಂತ್ಯ ಸಂಸ್ಕಾರದ ಜಾಗಗಳು ಈಗ ಅನಾಥವಾಗಿವೆ! ಆ ಎರಡು ಕುಟುಂಬಕ್ಕೆ ಅವು ಬೇಕಿಲ್ಲವಾಗಿವೆ!
ಈಗ ‘ಕಲಾಗ್ರಾಮ’ದಲ್ಲಿ ಕವಿ ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆಗೆ ನನ್ನ ಹಾಗೂ ನನ್ನ ಅನೇಕ ಮಿತ್ರರ ವಿರೋಧ ಇದೆ.
ಆಗಲೇ ಹೇಳಿದಂತೆ ನಾಳೆ ಪ್ರಮುಖ ಸಾಹಿತಿ ಹೋದರೆ, ಅವರಿಗೂ ಅಲ್ಲಿ ಜಾಗ ಕೊಡುತ್ತಾ ಹೋದರೆ ಕಲೆಯ ಪಾವಿತ್ರ್ಯತೆ ಉಳಿದೀತೆ?
ಸಾರ್ವಜನಿಕರ ಹಾಗೂ ಸರ್ಕಾರದ ವಿವೇಚನೆಗೆ ಈ ಪ್ರಶ್ನೆ ಬಿಡುತ್ತೇನೆ.
ಆರ್ ಜಿ. ಹಳ್ಳಿ ಅಭಿಪ್ರಾಯ ಸರಿ ಇದೆ, ಖ್ಯಾತನಾಮರ ಸಾವನ್ನು ವೈಭವೀಕರಿಸುವುದು,
ರಾಜಕಾರಣಿಗಳು ಸ್ವಲಾಭಕ್ಕೆ ಸ್ವಾರ್ಥಕ್ಕೆ ಬಳಸುವುದು ಸರಿ ಅಲ್ಲ,
ನಿಜ. ಅನುಮೋದಿಸುತ್ತೇನೆ