ಕಡಲು ಸೂರ್ಯನಿಗೆ ಮುತ್ತಿಟ್ಟಿತು..
ಜಿ ಎನ್ ಮೋಹನ್
ಕೃತಿಯ ಬೆನ್ನುಡಿಯಿಂದ…
‘ಮೀನು ಕುಡಿದ ಕಡಲು’ ಓದಿದಾಗಲಿಂದ ನನ್ನೊಳಗೊಂದು ಅಲೆ ಎದ್ದಿದೆ. ಅವು ಥೇಟ್ ಕಡಲ ಅಲೆಗಳಂತೆಯೇ ನನ್ನೊಳಗನ್ನು ಆವರಿಸಿ ಭೋರ್ಗರೆಯುತ್ತಿದೆ. ಸೂರ್ಯಕೀರ್ತಿ ಕವಿತೆಯೊಳಗಿನ ಅಲೆಗಳು ಇವು. ಚಂದ್ರನನ್ನು ಕಂಡಾಗ ಮಾತ್ರ ಅಲೆಗಳು ಉಬ್ಬರವೇಳುತ್ತವೆ ಎಂದು ಗೊತ್ತಿತ್ತು. ಆದರೆ ಈ ಸೂರ್ಯನಿಗೂ ಕವಿತೆಯ ಅಲೆಗಳು ಮುತ್ತಿಕ್ಕಿವೆ.
ಸೂರ್ಯಕೀರ್ತಿಯ ಇಡೀ ಕವಿತೆಗಳನ್ನು ಅಂಗೈನಲ್ಲಿಟ್ಟುಕೊಂಡು ಒಟ್ಟಿಗೆ ಓದುವ ಸುಖವೇ ಬೇರೆ. ಕವಿತೆಯ ಉಸಿರು ಬತ್ತಿ ಹೋಗುತ್ತಿದೆ ಎನ್ನುವ ತಳಮಳವನ್ನು ಕನ್ನಡ ಸಾಹಿತ್ಯ ಲೋಕ ಅನುಭವಿಸುತ್ತಿರುವಾಗ ಸೂರ್ಯಕೀರ್ತಿ ಕವಿತೆಗಳು ಹೊಸತನವನ್ನು ಹೊತ್ತು ಬಂದಿವೆ.
‘ಗೌರಿ ಉತ್ತ ನೆಲ’ ಹೇಗೆ ನಮ್ಮೊಳಗೇ ಒಂದು ಹೊಸಗಣ್ಣನ್ನು ಕೂಡಿಸುತ್ತದೆಯೋ ಹಾಗೆಯೇ ‘ವೈನ್ ಕವಿತೆಗಳು’ ಕೂಡಾ.. ‘ತೊಗರಿ ಹೊಲದಲ್ಲಿ ಮೂಳೆಗಳು’ ಹೇಗೋ ಹಾಗೆಯೇ ‘ಸಾಕಿಗೆ ಬರೆದ ಪ್ರೇಮ ಗೀತೆಗಳು’ ನಮ್ಮೊಳಗಾಡುತ್ತವೆ. ಪ್ರತೀ ಕವಿತೆಯಲ್ಲೂ ತನ್ನತನವೊಂದನ್ನು ಉಳಿಸುವ ಸೂರ್ಯನ ಕವಿತೆಗಳಿಗೆ ಕಡಲಿನಷ್ಟೇ ಅಗಾಧ ಪ್ರೀತಿ ಸಿಗಲಿ.
ಅವರ ಈ ಕೃತಿಗೆ ಅಲ್ಲಮ ಪ್ರಕಾಶನದ ಕಾವ್ಯ ಪ್ರಶಸ್ತಿ ದೊರಕಿದೆ ಇಂದಿನ ಸಮಾರಂಭದಲ್ಲಿ.