ಶ್ಯಾಮಲಾ ಮಾಧವ
ಪ್ರಿಯ ಡಾ.ನಿಂಜೂರರಿಗೆ,
ಸರ್, ನಮಸ್ತೆ.
ಎರಡು ದಿನಗಳು ನನ್ನ ಲ್ಯಾಪ್ ಟಾಪ್ ಮುಚ್ಚಿಟ್ಟು, ನಿಮ್ಮ ಎಳೆದ ತೇರು ಒಯ್ದ ದಾರಿಯಲ್ಲಿ ಪ್ರತಿ ಹೆಜ್ಜೆಯೂ ಸಾಗಿ ಬಂದು ಇದೀಗ ಮುಗಿಸಿದೆ.
ಬಾಳೆ ನಾರಿನ ಹಗ್ಗವನ್ನೇ ಬೆಲ್ಟ್ ಆಗಿಸಿಕೊಂಡು ಬಿಗಿದು ಅಣ್ಣನ ಚಡ್ಡಿ ತೊಟ್ಟು ಶಾಲೆಗೆ ಹೋದ ಹುಡುಗ ಇಷ್ಟು ದೊಡ್ಡ ವಿಜ್ಞಾನಿಯಾಗಿ ದೇಶ, ವಿದೇಶಗಳ ಸಂಸ್ಥೆ, ವಿಶ್ವವಿದ್ಯಾಲಯಗಳಲ್ಲಿ ಕೀರ್ತಿಶಾಲಿಯಾಗಿ ಬೆಳೆದು ಬೆಳಗಿದ ಬಗೆ ಮನದಲ್ಲಿ ಅಚ್ಚೊತ್ತಿ ಉಳಿದಿದೆ.
ನಿಮ್ಮಕಿಚ್ಚಮ್ಮ, ಸಣ್ಣಮ್ಮ, ಪೆರ್ಡೂರಮ್ಮನವರ ಕಥನವು ಕಾರಂತರ ಸರಸೋತಿ, ಪಾರೋತಿಯರನ್ನೇ ಕಣ್ಮುಂದೆ ತಂದಿತು. ನಿಮ್ಮ ತೆಂಕನಿಡಿಯೂರಲ್ಲಿಯೇ ಆಪ್ತನಾಗಿದ್ದ ದಾಯ್ದ ನಾಯಕ ಪುನಃ ಇಲ್ಲಿ ಮುಖ ತೋರಿ ಸಂತೋಷವಿತ್ತ. ಅಮ್ಮನಂತಿದ್ದ ನಿಮ್ಮ ದೊಡ್ಡತ್ತಿಗೆ , ಶಾಲಾ, ಕಾಲೇಜುಗಳ ನಿಮ್ಮೆಲ್ಲ ಗೌರವಾನ್ವಿತ ಗುರುವೃಂದದ ಬಗ್ಗೆ ಓದಿ ಅರಿತೇ ಧನ್ಯಳಾದಂತಾಯ್ತು. ಶಾಲಾ, ಕಾಲೇಜ್ ದಿನಗಳಲ್ಲೇ ಸಾಹಿತ್ಯ ರಚನೆಗೆ ತೊಡಗಿ ನೀವು ಮುಂದುವರಿದ ಕಥನ, ನಿಮ್ಮ ಶಾಲೆ, ಕಾಲೇಜ್ ಗಳ ಬಗ್ಗೆ ನಿಮ್ಮ ಅಪಾರ ಅಭಿಮಾನ, ವೈ.ಎನ್.ಕೆ., ಜಿ.ಬಿ.ಜೋಶಿಯವರು ನಿಮ್ಮ ಬೆನ್ನು ಹತ್ತಿದ ಪರಿ ಎಲ್ಲವೂ ರಂಜನೀಯ!
ಭಾರತಿಯಂಥ ಸಹಧರ್ಮಿಣಿ ದೊರೆತು, ಗಣಪತಿರಾಯರಂಥ ಮಾವನನ್ನು ಪಡೆದು ಧನ್ಯರಾದುದು, ಬಿ.ಎ.ಆರ್.ಸಿ.ಯ ಡಾ. ಉಮೇಶ್ ಕುಮಟಾರಂಥ ಸಹೃದಯಿ ಅಧಿಕಾರಿಗಳಿಂದ ಹಿಡಿದು ನಿಮ್ಮ ಸಂಶೋಧನಾ ಕ್ಷೇತ್ರದ ಎಲ್ಲಾ ದೇಶೀ, ವಿದೇಶೀ ಮಾರ್ಗದರ್ಶಕರ ವರೆಗೆ ನೀವಿತ್ತ ಪರಿಚಯಾತ್ಮಕ ವಿವರ, ಜೊತೆಗೆ ಅರಿಯದೂರಲ್ಲಿ ನಿಮ್ಮ ಸಾಹಸ ಯಾತ್ರೆಗಳು, ಸಾಧನೆಗಳು ಅಭಿಮಾನಪೂರ್ವಕ ಹಿಡಿದಿಟ್ಟುವು.
ಜೀವವಿಜ್ಞಾನ ಇಷ್ಟವಿದ್ದರೂ, ರಸಾಯನಶಾಸ್ತ್ರ ನನಗೆಂದೂ ಕಬ್ಬಿಣದ ಕಡಲೆಯೇ. ಜನ್ಮಜಾತ ನಂಟೆಂಬಂತೆ ನೀವು ಕಿಣ್ವಲೋಕವನ್ನು ನಿಮ್ಮದಾಗಿಸಿಕೊಂಡ ಪರಿಗೆ ಮೂಕವಿಸ್ಮಿತಳಾದೆ.
ಬಿ.ಎ.ಆರ್.ಸಿ.ಯಿಂದ ನೀವು ಸ್ವಯಂ ನಿವೃತ್ತಿ ಪಡೆದುದು ಮಾತ್ರ ಮನವನ್ನು ಕುಗ್ಗಿಸಿ ಬಿಟ್ಟಿತು. ಮುಂದೆ ನಮ್ಮ ಮುಂಬೈ ಸಾಹಿತ್ಯ ಹಾಗೂ ಕಲಾಲೋಕದ ನಿಮ್ಮ ಸಂಪರ್ಕ, ಸಾಧನೆಯ ಚಿತ್ರವಂತೂ ಮನವನ್ನು ಅರಳಿಸಿ ಬಿಟ್ಟಿತು.ಬುರ್ಡೆಯವರ, ಮತ್ತೆಲ್ಲ ನಮ್ಮ ಮುಂಬೈ ಸಾಹಿತ್ಯ ಲೋಕದ ಸ್ಮರಣೀಯ ಚೇತನಗಳ ನೆನಪು ಹೃದಯಕ್ಕೆ ತಂಪೆರೆಯಿತು.
ಥ್ಯಾಂಕ್ಯೂ ಸರ್!
0 ಪ್ರತಿಕ್ರಿಯೆಗಳು