ಖ್ಯಾತ ಕಲಾವಿದೆ ವನಿತಾ ಯಾಜಿ ಮಕ್ಕಳಿಗೆ ಚಿತ್ರಕಲೆ ಕಲಿಸುವ ಬಗ್ಗೆ ತಮ್ಮ ನಿಲುವನ್ನು ನಿನ್ನೆ ಹಂಚಿಕೊಂಡಿದ್ದರು.
ಅದು ಇಲ್ಲಿದೆ
ಇದಕ್ಕೆ ಖ್ಯಾತ ರಂಗ ನಿರ್ದೇಶಕ ಮೂರ್ತಿ ದೇರಾಜೆ ಅವರು ಪ್ರತಿಕ್ರಿಯಿಸಿದ್ದು ಹೀಗೆ..
ಮೂರ್ತಿ ದೇರಾಜೆ
ಕಲಾವಿದ ಮೋಹನ ಸೋನ ಮತ್ತು ಸುರೇಶ ಹಂದಾಡಿಯವರು ಮಕ್ಕಳು ಹೈಸ್ಕೂಲಿಗೆ ಬರುವ ತನಕ ಏನೂ ಹೇಳಿಕೊಡುತ್ತಿರಲಿಲ್ಲ. ಇಷ್ಟವಾದಾಗಲೆಲ್ಲಾ ಸುಮ್ಮನೆ ದೊಡ್ಡದು ಚಿಕ್ಕದು ಸೊನ್ನೆ ಸುತ್ತಲು ಹೇಳುತ್ತಿದ್ದರು. ಖುಶಿ ಬಂದಂತೆ ಗೆರೆಗಳನ್ನು ಎಳೆಯಲು ಹೇಳುತ್ತಿದ್ದರು ಅಷ್ಟೆ. ಮನೆಯಲ್ಲಿರುವ ವಸ್ತುಗಳನ್ನು ಬಿಡಿಸಿ ತೋರಿಸಿ ಎನ್ನುತ್ತಿದ್ದರು, ನೀವು ನೋಡಿದ್ದನ್ನು, ಕೇಳಿದ್ದನ್ನು – ಏನು ಬರೆಯಬೇಕು ಅಂತ ಕಾಣ್ತದೋ ಅದನ್ನು ಚಿತ್ರ ಬರೆಯಿರಿ ಎನ್ನುತ್ತಿದ್ದರು.
ಸುತ್ತ ಮುತ್ತ ಸಿಗುವ ಮಣ್ಣಿನಿಂದ, ಹೂವಿನಿಂದ, ಎಲೆಗಳಿಂದ ಬಣ್ಣ ತಯಾರಿಸಿ, ಚಿತ್ರಕ್ಕೆ ಬಣ್ಣ ಹಚ್ಚಿ, ಪೇಟೆಯಿಂದ ಬಣ್ಣ ತೆಕ್ಕೊಳ್ಳಬೇಡಿ ಎನ್ನುತ್ತಿದ್ದರು. ನಾಟಕದ ಮೂಲಕ, ಪರಿಸರದಲ್ಲೆಲ್ಲಾ ಓಡಾಡಿಸುವ ಮೂಲಕ ಮಕ್ಕಳ ಕಲ್ಪನೆ ಬೇರೆ ಬೇರೆ ರೀತಿಯಲ್ಲಿ ಹುಟ್ಟಿಕೊಳ್ಳುತ್ತಿತ್ತು.
ನಾಟಕ ನಿರ್ದೇಶಕ ಇಕ್ಬಾಲ್ ಅಹ್ಮದ್ ಅವರ ಒಂದು ಅನುಭವ ಹೀಗಿದೆ. – ಒಮ್ಮೆ ಒಂದು ರಂಗ ಶಿಬಿರದಲ್ಲಿ ಮಕ್ಕಳಿಗೆ ತಮಗಿಷ್ಟವಾದ ಚಿತ್ರ ಬರೆಯಲು ಹೇಳಿದರಂತೆ. ಒಂದು ಪುಟ್ಟ ಮಗುವಿನ ಬಳಿ ಹೋಗಿ ‘ಏನು ಚಿತ್ರ ಬರೀತಾ ಇದ್ದಿ ಪುಟ್ಟಾ…?’ ಅಂತ ಕೇಳಿದರಂತೆ ‘ಆನೆ ಚಿತ್ರ ಅಂಕಲ್’ ಅಂತ ಮಗು ಹೇಳಿತು.
ಆ ಚಿತ್ರ ಯಾವ ರೀತಿಯಲ್ಲೂ ಆನೆಯಂತಿರಲಿಲ್ಲ. ಇವರ ‘ಕಲಿಸುವ ಬುದ್ಧಿ’ ಜಾಗೃತವಾಗಿ… ‘ಆನೆ ಅಂದ್ರೆ ಹೀಗೊಂದು ಸೊಂಡಿಲು, ದಪ್ಪ ದಪ್ಪ ಕಾಲು, ದೊಡ್ಡ ಹೊಟ್ಟೆ, ಅಗಲ ಕಿವಿ, ಚಿಕ್ಕ ಬಾಲ… ಎಲಾ ಇರ್ಬೇಕಲ್ವಾ…’ ಅಂತ ಹೇಳಿ ಸರಳ ಗೆರೆ ಎಳೆದು ತೋರಿಸಿದರಂತೆ. ಆ ಮಗು… ಸ್ವಲ್ಪ ಹೊತ್ತು ಆ ಚಿತ್ರವನ್ನೇ ನೋಡಿ…’ ಅಂಕಲ್ ಅದು ನಿಮ್ಮ ಆನೆ… ಇದು ನನ್ನ ಆನೆ…’ ಎಂದು ಹೇಳಿ ತನ್ನ ಕೆಲಸ ಮುಂದುವರಿಸಿತಂತೆ…
ಮಕ್ಕಳ ಕಲ್ಪನೆ ‘ಫ್ರೆಶ್’ ಆದದ್ದು…. ಯಾವತ್ತೂ ‘ಡ್ರೈ’ ಅಲ್ಲ. ನಮಗೆ ಹಿರಿಯರಿಗೊಂದು ಭ್ರಮೆ ಅಷ್ಟೆ… ಆ ‘ಭ್ರಮ ನಿರಸನ’ ಆಗದೇ ಉಳಿಗಾಲವಿಲ್ಲ.
ಹೌದು. ವನಿತಾ ಯಾಜಿ ಅವರ ನಿಲುವು ಹಾಗೂ ಅದಕ್ಕೆ ಸುದೀರ್ಘವಾಗಿ ಪ್ರತಿಕ್ರಿಯಿಸಿದ್ದ ದೇರಾಜೆ ಮಾತುಗಳು ಮೌಲಿಕವಾದವು..