ಸಮೀರ್ ಮಾಲಿಪಾಟೀಲ್
ಹೇಳು ತಾಯಿ
ನಿನ್ನವರ್ಯಾರು?
ನನ್ನವರೇ!?
ಇಲ್ಲ ಯಾರು ಇಲ್ಲ…
ಅಪ್ಪ ಯಾರು ಅಂತ
ಗೊತ್ತಿಲ್ಲ,
ಅಮ್ಮ ದೇವಲೋಕಕ್ಕೆ
ಹೋದಳಂತೆ
ಆಗ ನನಗೆ ವಯಸ್ಸು
8 ವರ್ಷ…
ಓದಲಿಲ್ಲ, ಬರೆಯಲಿಲ್ಲ
ಆದರೆ ಮನುಷ್ಯತ್ವ
ಕಳೆದುಕೊಳ್ಳಲಿಲ್ಲ
ಹಾ! ನಿಮಗೆ ಗೊತ್ತಾ?
ನಾನು ಎಮ್ಮೆ ಕಾಯುತ್ತಿದ್ದೆ.
ಒಂದು ಹೊತ್ತಿನ
ಊಟಕ್ಕಾಗಿ, ಈ ಬರಗೆಟ್ಟ
ಬದುಕಿಗಾಗಿ…
ಕಲೆಯನ್ನು ನಂಬಿದೆ
ಮುಖಕ್ಕೆ ಬಣ್ಣ ಹಚ್ಚುವುದನ್ನು
ಬಂಡವಾಳ ಮಾಡಿಕೊಂಡೆ,
ಉಟ್ಟ ಸೀರೆಯ
ಕಚ್ಚೆ ಕಟ್ಟಿ ಕಿತ್ತೂರು
ರಾಣಿ ಚೆನ್ನಮ್ಮ ಆದೆ
ನಂತರ ನಟಿಸುವುದು
ನನ್ನ ಕಾಯಕವಾಯಿತು,
ರಂಗ ನಟಿಯಾದೆ
ಅವನೊಬ್ಬನಿದ್ದನಲ್ಲ…
ನನಗಂತಲೇ ಹುಟ್ಟಿದವ
ಪ್ರೀತಿಸಿದೆವು,
ತಾರಾ ಜೋಡಿಯಾದೇವು.
ಮಕ್ಕಳು? ಆಗದೆ ಇರುತ್ತಾ?
ಒಂದಲ್ಲಾ… ಹತ್ತು…
ಜೀವನ ನಡೆಸಲು
ನಾಟಕ ಕಂಪನಿ ಕಟ್ಟಿದೆ.
ಆದರೆ,
ದರಿದ್ರ ಬಡತನ ಸದಾ
ನನ್ನ ಅಪ್ಪಿಕೊಂಡೆ ಇರುತ್ತಿತ್ತು.
ಅದು ನನ್ನ ಮಗು
ಮುಖಕ್ಕೆ ಹಚ್ಚಿದ
ಬಣ್ಣದ ಲೇಪನ ಇನ್ನೂ
ಮಾಸಿಲ್ಲ, ಅಂದಹಾಗೆ
ನಾನೀಗ ಅಮ್ಮನೊಡನೆ
ದೇವಲೋಕಕ್ಕೆ ಬಂದಿದ್ದೇನೆ.
ನನ್ನ ಮಕ್ಕಳಿಗೂ ನನ್ನ ಜೊತೆ
ನಟಿಸುವ ಕೌತುಕ ಎಲ್ಲರೂ
ನನ್ನ ಹಿಂದೆ ಬಂದು ಬಿಟ್ಟರು,
ಅವನೊಬ್ಬನನ್ನು ಬಿಟ್ಟು…
ಅವನಲ್ಲೇ ಇರುವ
ನಿಮ್ಮ ನಡುವೆ
ಸದಾ ದ್ವೇಷ ಕಾರುವ
ಅದೇ ಕುಕನೂರಿನಲ್ಲಿ.
ಜೋಪಾನ…
ನಾನು ಯಾರೆಂದು ಕೇಳಿದಿರಾ ?
ನಾನೇ ರೆಹಮಾನವ್ವ ಅಲ್ಲಲ್ಲ
ರೆಹಮಾನ್ ಜಾನ್…
0 ಪ್ರತಿಕ್ರಿಯೆಗಳು