ರಾಜಕುಮಾರ್ ಮಡಿವಾಳರ ಕಂಡಂತೆ –
ನೂರು ಮರ ನೂರು ಸ್ವರ
ಒಂದೊಂದೂ ಅತಿ ಮಧುರ…..
ಹಿಂಗ ಹಾಡಿದವರು ನಮ್ಬೇಂದ್ರೆ,
“ರಂಗ ಉಗಾದಿ” ರಂಗಶಂಕರದಲ್ಲಿ ಈ ಸಲ ಬೇಂದ್ರೆ ಹಬ್ಬ. ಅನಂತ ದೇಶಪಾಂಡೆ ಅವರ ಬೇಂದ್ರೆ ದರ್ಶನದಿಂದ ಶುರುವಾತು.
ಅದು ಮೈಲಾರ ಜಾತ್ರಿಗೆ ಹೋಗುಮುಂದ ಎತ್ತು ಕೊಳ್ಳ ಕಟ್ಟು ತಡಾಕಿಲ್ದ ಯಾರಾರ ಒಬ್ಬಾಂವ/ಕಿ ಏಳುಕೋಟಿ ಏಳುಕೋಟಿ ಏಳುಕೋಟಿಗೊ ಚಾಂಗಮಲೊ ಅಂದ್ರ ಸಾಕು ಹಿಂದಿಂದ ಊರಿಗೆ ಊರ ಒಂದಾಗಿ ಏಳುಕೋಟಿ ಅಂತ ಉಮ್ಮೆದಿ ತುಂಬಿ ಬಾಯ್ಗೂಡಿಸೊರು, ನನ್ನ ಮೆಚ್ಚಿನ ಕವಿ ಶ್ರೀ
ಚಿದಂಬರ ನರೇಂದ್ರ ಅವರು ಅಜ್ಜನ “ಮೂವತ್ಮೂರು ಕೋಟಿ” ಕವನ ವಾಚನ ಮಾಡುವ ಮೂಲಕ ಸಭೀಕರಲ್ಲಿ ಅಂತದ್ದೊಂದು ಉಮೇದಿ ತುಂಬಿದರು ನಂತರದ್ದು ಅಕ್ಷರಶಃ ಕಾವ್ಯ ಜಾತ್ರಿ!
ಟಿಎನ್ನೆಸ್ ಅವರು ಓದಿದ ” ಹಸಿಯಿದ್ದಳು ಹುಡುಗಿ” ನಿಜಕ್ಕೂ ಅಮೃತ ಓದು,
ಜೋಗಿಯವರ ಹಿಡಿತಕ್ಕೂ ಸಿಗದ “ಜೋಗಿ”
ಬಿ. ಸುರೇಶಣ್ಣನ ವಾಚನ ಕೇಳುಗರ “ತಿಂತ್ಯು”
ದಿವಾಕರ ಸರ್ ” ಪಾತರಗಿತ್ತಿ ಪಕ್ಕಾ ತೋರಿಸಿದ್ದು”
ವನಮಾಲರವರು ತೋರಿಸಿದ “ದಶಾವತಾರ” , ಭಾನುಮತಿ ಅವರು “ಮಲ್ಲಾಡದ ಗಿಣಿಯ” ಅಲ್ಲಾಡಿಸಿ ಮಾತಾಡಿಸಿದ್ದು,
ಸಧ್ಯದ ಗಯ್ಯಾಳಿಯೋತ್ತಮಿ! ಮಾನಸ ಅವರ ಓದು,
ಕೂಸು ಕಳೆದುಕೊಂಡ ತಂದೆಯೊಬ್ಬನ ಆತ್ಮ ಹೊಕ್ಕಂತೆ ಕಾವ್ಯ ಪಠಿಸಿದ ಅಮ್ಮ ಪ್ರತಿಭಾ ನಂದಕುಮಾರ,
ವಟಗುಡವ ಭಟ್ಟರ ಬಾಯಿ! ಸರಳ ಮನುಷ್ಯತ್ವ ಬೋಧಿಸಿದ “ಕರಿಮರಿ ನಾಯಿ”,
ಪ್ರೀತಿಯ ಗುಡ್ಡದ ಭೂತ ಪ್ರಕಾಶ್ ರೈ
“ಕನಸು- ಕಣಸು”
ಯಥಾಪ್ರಕಾರ ಸಖ್ಯದ ವ್ಯಾಖ್ಯಾನ,
ಯಾವುದಂತ? ಎಷ್ಟಂತ? ಹೇಳಲಿ ಕಿವಿಗೆ ಹೃದಯ ಬರೆದ ಪವಾಡ ಈ ರಂಗ ಉಗಾದಿ!
ಇನ್ನೊಂದು ಭಾಗವಾಗಿ- ಬೇಂದ್ರೆ ಒಡನಾಟ ಹಂಚಿಕೊಂಡ ಕಾಕಾ Gopal Wajapeyi ಧನ್ಯೋಸ್ಮಿ ಧನ್ಯೋಸ್ಮಿ ಭಾವ ಆವರಿಸುವಂತೆ ಮಾಡಿದ್ದು ಸುಳ್ಳಲ್ಲ.
ಮತ್ತೊಂದು ಭಾಗ ನಾಟಕಗಳು- ಮೂರಕ್ಕೆ ಮೂರು ನಾಟಕಗಳು ಬೇಂದ್ರೆ ಅವರ ಮತ್ತೊಂದು ಚಿಂತನಾಕ್ರಮವನ್ನ ಎಳೆ ಎಳೆಯಾಗಿ ತೆರೆದಿಟ್ಟವು.
ಮುಖ್ಯವಾಗಿ ಆ ತಾಯಿ ಬಿಂದುಮಾಲಿನಿ ಅದೇ ಇನ್ನು ಸರಸ್ವತಿಯ ಮನೆಯಿಂದ ಪಾಣಕ ಕುಡಿದು ಬಂದಿದ್ದಳೋ ಏನೋ? ನಾನು ಈ ಇಡಿ ಜನ್ಮ ಮತ್ತ್ಯಾವ ಹಾಡು ಕೇಳದಂತೆ, ಈ ಜನ್ಮಕ್ಕ ಈ ಹಾಡು ಸಾಕಲ್ಲಾ? ಅನ್ನುವ ಇಡಿ ಜನ್ಮ ತಣಿಸುವ
“ಬೈರಾಗಿ-ಆ ಮಠ-ಅಲ್ಲೆ ಇರಾಕಿ-ಹಳೆ ಗಿರಾಕಿ” ಅದು ಸ್ವರ್ಗದ ತುದಿ ಅಲ್ಲಿಗೆ ಒಯ್ದದ್ದು ಹಾಡು!
ಯಮ ಬಂದು ಆಯಸ್ಸು ಮುಗಿತು ಬಾ ಕುಮಾರಾ ಅಂತ ನಿನ್ನೆ ಕರೆದಿದ್ದೇ ಆದರೆ ಈ ಹಾಡು ಕೇಳಿದ ನಂತರದ ಸೆಕಿಂಡಿನಲ್ಲಿ ಬದುಕು ಸಂತೃಪ್ತವಾಗಿದೆ ನಡಿ ಯಮರಾಜ ಹೋಗೊಣ ಅಂತ ಯಾವ ಸಂಶಯವಿಲ್ಲದೆ ತಯಾರಾಗತ್ತಿದ್ದೆ..!
ಇದನ್ನೆಲ್ಲ ಈ ತುಂಬು ತೃಪ್ತಿಯನ್ನ ಈ ಎದೆಗೆ ಸುರಿದ ರಂಗಶಂಕರದವರೆಲ್ಲರಿಗೆ ಮತ್ತು ಕಾರ್ಯಕ್ರಮ ನಿರ್ವಹಿಸಿವ ಮೂಲಕ “ಹೋತು ಹಿಂದ ಬಾರದ್ಹಾಂಗ, ಹಿಂದ ನೋಡದ” ಅನ್ನುವ ಹಾಗೆ ಮಾಡಿದ ಅಕ್ಕSandhya Rani ಅವರಿಗೆ ಈ ಜೀವ ಋಣಿ… ಋಣಿ.. ಋಣಿ..
ಕೊನೆಯಲ್ಲಿ ಅಜ್ಜಾ “ಬಾರೋ ಸಾಧನಕೇರಿಗೆ” ಅಂತ ಬೇಂದ್ರೆ ಅಜ್ಜನ್ನ ಕರೀಬೇಕಾತು, ಯಾಕಂದ್ರ ಇದು ಎಲ್ಲಾ ಮರಸಿ ಅಲ್ಲೇ ಹಿಡಿದು ಕೂರಿಸುವ ಹಂಗಿತ್ತು!
ಕಿರಣ್ ವಟಿ ಹಾಗೂ ರವಿ ಕುಲಕರ್ಣಿ ಕಂಡಂತೆ
ಸುಂದರ ಅನುಭವ, ಬೇಂದ್ರೆ ಕಾವ್ಯದ ಅಭ್ಯಂಗದಾಗ ಮೀಯುದಂದ್ರ ಆ ಮಾತೇ ಬೇರೆ, ಅಪೂರ್ವ ಕಾರ್ಯಕ್ರಮ. ಮಿಸ್ ಆಗಿದ್ದಕ್ಕೆ ಖೇದವಾಗ್ತಿದೆ.