ಮೌಡ್ಯ ನಿಷೇಧ ಕಾಯಿದೆಗೆ 'ಮುಹೂರ್ತ' ಕೂಡಿ ಬಂದಿಲ್ಲ

rajaram tallur low res profile

ರಾಜಾರಾಂ ತಲ್ಲೂರು

Ego ಮೌಢ್ಯ!

“ಮೌಢ್ಯ ನಿಷೇಧ ಕಾಯಿದೆಯಲ್ಲಿ ಈಗಾಗಲೇ ಭಾರತೀಯ ದಂಡ ಸಂಹಿತೆಯಲ್ಲಿ (IPC) ಇಲ್ಲದ್ದು ಏನಿದೆ? ಅದು ಬಹಳ ambiguous ಕಾಯಿದೆ” – ಹೀಗೆಂದು ಮೌಢ್ಯ ನಿಷೇಧ ಕಾಯಿದೆಯನ್ನು ಮಹಾರಾಷ್ಟ್ರದಲ್ಲಿ ವಿರೋಧಿಸಿದವರು ಇಂದಿನ ಮುಖ್ಯಮಂತ್ರಿಯೂ, ಅಂದಿನ ಪ್ರತಿಪಕ್ಷ ನಾಯಕರೂ ಆಗಿದ್ದ ದೇವೇಂದ್ರ ಫಡ್ನವೀಸ್. ಮುಂದೆ ದಾಬೋಲ್ಕರ್ ಅವರ ಹತ್ಯೆಯ ಬಳಿಕ, 2013 ಡಿಸೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರ ಈ ಶಾಸನವನ್ನು ಜಾರಿಗೆ ತಂದಿತು.
avadhi-column-tallur-verti- low res- cropಕರ್ನಾಟಕದಲ್ಲಿ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕದ ಕರಡು 2013ರಲ್ಲೇ ಸಿದ್ಧಗೊಂಡಿದ್ದರೂ, ಇನ್ನೂ ವಿಧಾನಮಂಡಲ ಹೊಕ್ಕು ಹೊರಬರಲು ಅದಕ್ಕೆ “ಮುಹೂರ್ತ” ಬಂದಿಲ್ಲ. ಮಹಾರಾಷ್ಟ್ರದಲ್ಲಿ ಆದದ್ದು, ಕರ್ನಾಟಕದಲ್ಲಿ ಯಾಕೆ ಆಗೋದಿಲ್ಲ ಎಂದು ಹುಡುಕಿ ಹೊರಟಾಗ ಕಾಣಸಿಕ್ಕಿದ ಅಂಶಗಳಿವು:
1. ಕರ್ನಾಟಕ – ಮಹಾರಾಷ್ಟ್ರಗಳ ಎರಡೂ ಕಾಯಿದೆಗಳೂ ಬಹುತೇಕ ಒಂದೇ ವಿಧದ್ದೇ ಆಗಿದ್ದು, ಈಗಾಗಲೇ ಭಾರತೀಯ ದಂಡಸಂಹಿತೆಯ ಬೇರೆ ಕಲಮುಗಳಲ್ಲಿ ಅಪರಾಧ ಎಂದು ವಿಧಿಸಲಾಗಿರುವ ವಿಚಾರಗಳೇ ಈ ಕಾಯಿದೆಯಲ್ಲೂ ಇವೆ.
2. ಮಹಾರಾಷ್ಟ್ರದ ಕಾಯಿದೆ ಸ್ವಲ್ಪ ವಿಶಾಲ ತಳಹದಿ ಹೊಂದಿದ್ದು, ಯಾವುದೆಲ್ಲ ಈ ಕಾಯಿದೆಯ ಅಡಿ ಬರುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ. ಕರ್ನಾಟಕದ ಕರಡು, ಮಹಾರಾಷ್ಟ್ರದ ಕಾಯಿದೆಯ ಹಾದಿಯಲ್ಲೇ ಇದ್ದರೂ ಅನುಷ್ಠಾನಕ್ಕೆ ಕುರಿತಾದಂತೆ ಮಹಾರಾಷ್ಟ್ರದ್ದಕ್ಕಿಂತ ಹೆಚ್ಚು ಖಚಿತವಾದ ಹಾದಿಯನ್ನು ಹೊಂದಿದೆ.
 
3. ಕರ್ನಾಟಕದ ಕರಡಿನಲ್ಲಿ ಮಹಾರಾಷ್ಟ್ರದ ಕಾಯಿದೆಗೆ ಹೊರತಾಗಿ ನಿರ್ದಿಷ್ಟವಾಗಿರುವ ಮತ್ತು ಹೆಚ್ಚಿನಂಶ ಇದನ್ನು ವಿರೋಧಿಸುತ್ತಿರುವವರ ಕೆಂಗಣ್ಣಿಗೆ ಗುರಿಯಾಗಿರುವ ಅಂಶಗಳೆಂದರೆ: ಸಿಡಿ ಆಚರಣೆ, ಮಕ್ಕಳನ್ನು ಮುಳ್ಳುಗಳ ಮೇಲೆ ಎಸೆಯುವುದು, ದುರ್ಬಲ ವರ್ಗದ ಮಹಿಳೆಯರ ಮೇಲೆ ಓಕುಳಿ ನೀರೆರಚುವುದು, ಗಾವು ಮತ್ತಿತರ ಪ್ರಾಣಿ ಹಿಂಸೆ, ಮಡೆಸ್ನಾನ, ಪಾದರಕ್ಷೆ ತಲೆಯ ಮೇಲೆ ಒಯ್ಯುವುದು, ಆಹಾರ ವಿತರಣೆಯಲ್ಲಿ ಜಾತಿ-ಪಂಕ್ತಿಬೇಧ, ಭವಿಷ್ಯ ಹೇಳಿ ಆರ್ಥಿಕ ಹಾನಿ ಮಾಡುವುದು.
ಯಾವುದು ವಿರೋಧದ ಮೂಲ?
ಕರ್ನಾಟಕದ ಕರಡಿನಲ್ಲಿ ನಿರ್ದಿಷ್ಟವಾಗಿ ಹೇಳಿರುವ ಅಂಶಗಳೆಲ್ಲ ಅಮಾನವೀಯವಾಗಿದ್ದರೂ, ರಾಜ್ಯದಲ್ಲಿ ಅಲ್ಲಲ್ಲಿ ಬೇರೆ ಬೇರೆ ಮುಸುಕುಗಳಲ್ಲಿ ಇನ್ನೂ ಆಚರಣೆಯಲ್ಲಿರುವುದು; ಈ ಬಗ್ಗೆ ವಾದ ವಿವಾದಗಳು ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ನಾಗರಿಕ ಸಮಾಜ ನಿಜವಾಗಿಯೂ ನಾಗರಿಕ ಅನ್ನಿಸಿಕೊಳ್ಳಲು ಇವತ್ತಲ್ಲ ನಾಳೆ ಇವು ಜಾರಿಗೆ ಬರಲೇ ಬೇಕು ಎಂಬುದರಲ್ಲಿ ಸಂಶಯ ಇಲ್ಲ.
Lemon-Chilliಆದರೆ, ಈ ಕರಡನ್ನು ರಾಜಕೀಯ ನೆಲೆಯಲ್ಲಿ ವಿರೋಧಿಸುವವರು ಈ ಅಂಶಗಳನ್ನು ನೇರವಾಗಿ ಎತ್ತದೆ, ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ, ಜನರಲ್ಲಿ ಚರ್ಚೆ ಮಾಡದೇ ಯಾರೋ ಕೆಲವರು ತಯಾರಿಸಿದ ಕಾಯಿದೆ ಎಂದೆಲ್ಲ beating around the bush  ನಡೆಸಿದ್ದಾರೆ. ಜೊತೆಗೆ, ಆಳುವ ಪಕ್ಷದಲ್ಲೇ ಈ ಕಾಯಿದೆಯ ಬಗ್ಗೆ ಅನುಮಾನಗಳು, ಅಸಮಾಧಾನಗಳೂ ಇದ್ದಂತಿದೆ.
ಒಂದು ರಾಜಿ ಪಂಚಾಯ್ತಿ!
ಈ Egoಗಳ ಸಂಘರ್ಷದಲ್ಲಿ, ಮಾನವೀಯ ಕಾಯಿದೆಯೊಂದು ಹೊರಬರದೇ ನೆನೆಗುದಿಗೆ ಬೀಳುವ ಸ್ಥಿತಿ ಇದು.
ಇದಕ್ಕೆ ಸರಳ ಪರಿಹಾರ ಎಂದರೆ, ಹೆಚ್ಚಿನಂಶ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವಷ್ಟು ಅಂಶಗಳನ್ನು ಕರ್ನಾಟಕದಲ್ಲೂ ತಕ್ಷಣ ಜಾರಿಗೆ ತರುವುದು. ಅದಕ್ಕೆ ಯಾವುದೇ ಪಕ್ಷದ ತಕರಾರು ಇರಲಾರದು. ಅದಾದ ಮೇಲೆ, ಹಂತ ಹಂತವಾಗಿ ಉಳಿದ ಅಮಾನವೀಯ ಅಂಶಗಳನ್ನು ಕಾಯಿದೆಗೆ ಸೇರಿಸಲು ಅವಕಾಶ ಯಾವತ್ತಿಗೂ ಇದೆ.
ಕರಡು ಈಗ ಎತ್ತಿರುವ ನಿರ್ದಿಷ್ಟ ಅಂಶಗಳ ಬಗ್ಗೆ ಮುಂದೆ ಒಂದೊಂದಾಗಿ ಚರ್ಚೆ ನಡೆದರೆ, ಯಾವುದು ಮಾನವೀಯ ಯಾವುದು ಅಮಾನವೀಯ ಎಂದು ನೇರಾನೇರ ಹೊರಬರುವ ಅವಕಾಶ ಇರುವಾಗ, ಈ ಮುಸುಕು ಹಾಕಿ ಗುದ್ದಾಡುವ ಗೊಡವೆ ಯಾಕೆ?

ಮೌಢ್ಯ ನಿಷೇಧ ಕಾಯಿದೆಯ ಕರಡು ಪ್ರತಿ ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿದೆ. ಆಸಕ್ತರಿಗಾಗಿ ಅವಕ್ಕೆ ಲಿಂಕನ್ನು ಇಲ್ಲಿ ನೀಡಲಾಗಿದೆ:

ಮಹಾರಾಷ್ಟ್ರದಲ್ಲಿ ಶಾಸನವಾಗಿರುವ ಮೌಢ್ಯ ಕಾಯಿದೆ: ಇಲ್ಲಿ ಕ್ಲಿಕ್ಕಿಸಿ 

ಕರ್ನಾಟಕದ ಕಾಯಿದೆ ಕರಡು: ಇಲ್ಲಿ ಕ್ಲಿಕ್ಕಿಸಿ 

ಕರ್ನಾಟಕ ಕಾನೂನು ಆಯೋಗ ಮಾಡಿರುವ ಶಿಫಾರಸುಗಳು: ಇಲ್ಲಿ ಕ್ಲಿಕ್ಕಿಸಿ 

‍ಲೇಖಕರು avadhi

July 12, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ರಾಜಾರಾಂ ತಲ್ಲೂರು

    ಮೌಢ್ಯ ನಿಷೇಧ ಕಾಯಿದೆಯ ಕರಡು ಪ್ರತಿ ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿದೆ. ಆಸಕ್ತರಿಗಾಗಿ ಅವಕ್ಕೆ ಲಿಂಕನ್ನು ಇಲ್ಲಿ ನೀಡಲಾಗಿದೆ:
    ಮಹಾರಾಷ್ಟ್ರದಲ್ಲಿ ಶಾಸನವಾಗಿರುವ ಮೌಢ್ಯ ಕಾಯಿದೆ: http://bombayhighcourt.nic.in/libweb/acts/Stateact/2013acts/2013.30.pdf
    ಕರ್ನಾಟಕದ ಕಾಯಿದೆ ಕರಡು: https://www.nls.ac.in/results/superstitionbill2013.pdf
    ಕರ್ನಾಟಕ ಕಾನೂನು ಆಯೋಗ ಮಾಡಿರುವ ಶಿಫಾರಸುಗಳು: https://www.karnataka.gov.in/lawcommission/Reports/Report%20No.34%20(English%20Version).pdf

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: