ನೀರು ನೆರಳಿನ ದಾರಿ: ಮುಳ್ಳೂರರೆಂಬ ಹೋರಾಟದ ದನಿ..
ಪಿ ನಂದಕುಮಾರ್
ನಾಡು ಕಂಡ ಅಪ್ಪಟ ಅಂಬೇಡ್ಕರವಾದಿಗಲ್ಲಿ ಮುಳ್ಳೂರು ನಾಗರಾಜ್ ಕೂಡ ಒಬ್ಬರು. ‘ನೆಲದ ಜೋಗುಳ, ಮರಣ ಮಂಡಲ ಮಧ್ಯದೊಳಗೆ, ದಂಡಕಾರಣಯ್ಯ’ ಹೀಗೆ ಹಲವಾರು ಮಹತ್ವದ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಇವರ ದಲಿತ ಚಳವಳಿಯ ಬರಹಗಳ ಒಂದು ಗುಚ್ಛ ‘ನೀರು ನೆರಳಿನ ದಾರಿ’ ಈ ಕೃತಿಯನ್ನು ಓದುಗ ವಲಯಕ್ಕೆ ಸಂಪಾದಿಸಿ ಕೊಟ್ಟವರು ಡಾ. ಅಪ್ಪಗೆರೆ ಸೋಮಶೇಖರ್ ರವರು.
ಹೋರಾಟಗಾರ, ನಿಷ್ಠುರವಾದಿ ಮುಳ್ಳೂರು ನಾಗರಾಜ್ ಜಾತಿ, ಅಸ್ಪೃಶ್ಯತೆಯನ್ನು ತೀಕ್ಷ್ಣವಾಗಿ ವಿರೋಧಿಸುತ್ತಿದರು.
ಗಾಂಧಿ ಪ್ರತಿಪಾದಿಸಿರುವ ಅಹಿಂಸಾ ತತ್ವ ಮತ್ತು ಹಳ್ಳಿ ದೇಶಪ್ರೇಮವನ್ನು ಬದನವಾಳ ಘಟನೆಯನ್ನು ವಿವರವಾಗಿ ಕಟ್ಟಿಕೊಡುವುದರ ಮೂಲಕ, ಗಾಂಧಿ ಕಂಡ ಗ್ರಾಮ ಭಾರತದ ಪರಿಕಲ್ಪನೆಯನ್ನು ವ್ಯಂಗ್ಯ ಮಾಡುವಂತಿದೆ. ಜಾತಿ ಪದ್ಧತಿ ಪೋಷಿಸುವ ಶಕ್ತಿ ಹಳ್ಳಿಗಳಲ್ಲಿ ಗಟ್ಟಿಗೊಂಡಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಕಾರಣಕ್ಕಾಗೆ ಬಲಿತವರಿಂದ ದಲಿತರು ಬಲಿಯಾದ ದಾರುಣ ಕಥೆಗಳಿಗೆ ಬರವಿಲ್ಲ. ಮೂಲ ಪರಂಪರೆಯಲ್ಲಿ ಹೊಲದ ಒಡೆಯರಾಗಿದ್ದ ಸಮುದಾಯ ಭೂ ವಂಚನೆಗೆ ಒಳಗಾದ ಬಡ ದಲಿತರ ಶ್ರಮದ ಫಲ ಉಂಡು ಉಳ್ಳವರಾಗಿರುವ ಜಮೀನ್ದಾರರ ದೌರ್ಜನ್ಯ ಇನ್ನೂ ಘೋರ.
ದುಡಿದ ಪ್ರತಿಫಲಕ್ಕಾಗಿ ಅನ್ನ ಕೇಳಿದವರ ಎದೆಗೆ ಗುಂಡಿಟ್ಟು ಕೊಂದ ಬೆಲ್ಚಿಯ ಹತ್ಯಾಕಾಂಡ, ಅನುಸೂಯಮ್ಮಳ ಅತ್ಯಾಚಾರ ಮತ್ತು ಶೇಷಗಿರಿಯಪ್ಪನ ಕೊಲೆ, ಬೆಂಡಗೇರಿ ಮಲ ತಿನ್ನಿಸಿದ ಘಟನೆ ಹೀಗೆ ಮಾನವ ಸಮಾಜವೇ ನಾಚಿಕೆಯಿಂದ ತಲೆತಗ್ಗಿಸುವಂತ ಈ ಬಗೆಯ ಅನ್ಯಾಯಗಳ ವಿರುದ್ಧ ಚಳವಳಿಯನ್ನು ರೂಪಿಸಿ ನ್ಯಾಯ ದೊರಕಿಸಿ ಕೊಟ್ಟ ದಲಿತ ಸಂಘರ್ಷ ಸಮಿತಿಯ ಪ್ರಾಮಾಣಿಕ ಹೋರಾಟಗಳನ್ನು ಮುಳ್ಳೂರರು ತಮ್ಮ ಬರಹಗಳಲ್ಲಿ ದಾಖಲಿಸಿರುವ ಸಂಗತಿಯನ್ನು ಈ ಕೃತಿಯ ಮೂಲಕ ಅರಿಯಬಹುದು.
ಎಪ್ಪತ್ತರ ಕಾಲಘಟ್ಟದ ದಲಿತ ಚಳವಳಿಯ ಹಲವು ಮುಂಚಿಣಿ ನಾಯಕರ ಕುರಿತಾದ ಇವರ ಬರಹ ವ್ಯಕ್ತಿ ಪೂಜೆಯನ್ನು ನಿರಾಕರಿಸಿದೆ. ನೇರ ನುಡಿಯ ಪ್ರಾಮಾಣಿಕ ವ್ಯಕ್ತಿತ್ವ ವಿಮರ್ಶೆಯಲ್ಲಿ ಸೂಕ್ಷ್ಮ ವ್ಯಂಗ್ಯ ಸ್ವರೂಪವನ್ನು ಈ ಕೃತಿಯಲ್ಲಿ ಗುರಿತಿಸಬಹುದು.
ಸ್ವಸಮುದಾಯದ ರಾಜಕೀಯ ನಾಯಕರಿಗೆ ಹಾಗೆ ತಪ್ಪೇಸುಗುವ ಅನ್ಯ ರಾಜಕೀಯ ದುರುಳರಿಗೆ ಮತ್ತು ಸರ್ಕಾರಿ ಅಧಿಕಾರಿಗಳನ್ನು ಮುಖಸ್ತುತಿಯಲ್ಲೇ ವಿಮರ್ಶೆ ಮಾಡುವ, ಪ್ರಶ್ನೆ ಮಾಡುವ ನಿರ್ಭಯ ಗುಣಉಳ್ಳವರು ಮುಳ್ಳೂರರು. ಧಾರ್ಮಿಕ ಮೌಢ್ಯ ಆಚರಣೆಗಳನ್ನು ಆಚರಿಸುವುದು ತಪ್ಪೆಂದು ಜನಗಳೊಟ್ಟಿಗಿನ ಸಂವಾದ ಓದುಗರಿಗೆ ಅವರ ಬರಹಗಳನ್ನು ಮತ್ತಷ್ಟು ಓದಿಸಿಕೊಳ್ಳುವ ಹಿಂಬನ್ನು ನೀಡುತ್ತದೆ. ಪಕೀರನಂತೆ ಜೋಳಿಗೆಯನ್ನು ಕೊಂಕಳಲ್ಲಿ ಸಿಕ್ಕಿಸಿಕೊಂಡು ಪಂಚಮ ಪತ್ರಿಕೆಯನ್ನುವ ಬೌದ್ಧಿಕ ಬುತ್ತಿಯನ್ನ ನಾಡಿನ ತುಂಬೆಲ್ಲ ಹರಡಿಕೊಂಡಿದ್ದ ದಲಿತ ಚಳವಳಿಯ ಹೋರಾಟದ ಮನಗಳಿಗೆ ತಲುಪಿಸುವ ಕಾರ್ಯ ಮಾಡಿದ್ದು ಮತ್ತು ಬರಹಗಳ ಮೂಲಕ ಹೋರಾಟಕ್ಕೆ ಅಣಿಗೊಳಿಸಿದ್ದು ಇವರ ಕಾಯಕ ನಿಷ್ಠೆಯ ಪ್ರತೀಕ.
ಹೊಸ ತಲೆಮಾರಿನ ಯುವ ಸಮುದಾಯಕ್ಕೆ ಮುಳ್ಳೂರರು ಬರೆದಂತಹ ಲೇಖನ ಬರಹಗಳು ಸಮಸಮಾಜ ನಿರ್ಮಾಣದ ಆಶಯದ ಹಿನ್ನೆಲೆಯಲ್ಲಿ ಕುಡಿವೆ. ವೈಚಾರಿಕ ವಿವೇಕ ಪ್ರಜ್ಞೆಯನ್ನು ವಿಸ್ತಾರ ಮಾಡುವಂತವು. ಸಮಾಜದಲ್ಲಿ ನಡೆಯುತ್ತಿದ್ದ ಜಾತಿ ಅಸ್ಪೃಶ್ಯತೆಯ ಶೋಷಣೆ ದೌರ್ಜನ್ಯಗಳ ಕುರಿತು ಪರಿಚಯಿಸುವ ಮೂಲ ಸ್ವರೂಪದ ಹಿನ್ನೆಲೆಯಲ್ಲಿ ಅವರ ಬರಹಗಳು ಇವೆ. ಗತಕಾಲದಲ್ಲಿ ಗತಿಸಿದ ಮೋಸದ ಚರಿತ್ರಯ ಪರಿಚಯ, ಸುಳ್ಳು ಕಂತೆಯ ಪುರಾಣಗಳ, ತಿನ್ನುವ ಆಹಾರದ ಅಪವ್ಯಾಖ್ಯಾನವನ್ನು ಹದಿಹರೆಯದ ಯುವ ಮನಗಳಿಗೆ ಮುಟ್ಟುವಂತಿವೆ ಇವರ ವಿಚಾರಗಳು. ಇವೆಲ್ಲವುಗಳ ಹಿನ್ನೆಲೆಯಲ್ಲಿ ‘ನೀರು ನೆರಳಿನ ದಾರಿ’ ಕೃತಿ ಮುಖ್ಯ. ಚಿಂತನೆ, ಹೋರಾಟ, ತ್ಯಾಗ ಮನೋಭಾವ, ಇವೆಲ್ಲವುಗಳನ್ನು ಮೈಗೂಡಿಸಿಕೊಂಡಿದ್ದ ವ್ಯಕ್ತಿ ಇವರು.
ಸಮಾಜಮುಖಿ ಚಿಂತನೆ ಮತ್ತು ದಲಿತ ಸಂಸ್ಕೃತಿ ಪರಂರೆಯನ್ನು ಪರಿಚಯಿಸುವ ಮೂಲಕ ಶೋಷಿತ ಸಮುದಾಯಗಳಲ್ಲಿ ಸ್ಫೂರ್ತಿದಾಯಕ ಹೋರಾಟದ ದನಿಯಾಗಿದ್ದ ಮುಳ್ಳೂರು ನಾಗರಾಜರವರ ಚಳವಳಿಯ ಬರಹಗಳು ಮತ್ತು ವ್ಯಕ್ತಿತ್ವದ ಕುರಿತಾದ ಕಿರು ಒತ್ತಿಗೆ, ಇದು ಓದುಗರಿಗೆ ಉತ್ತಮ ಆಕಾರ ಗ್ರಂಥವಾಗುವುದರಲ್ಲಿ ಸಂಶಯವಿಲ್ಲ.
0 ಪ್ರತಿಕ್ರಿಯೆಗಳು