25
ಕಾಲೇಜು ಪ್ರಾಧ್ಯಾಪಕರುಗಳಿಗೆ ಯುಜಿಸಿ ಸಂಬಳ ಶುರುವಾಗುವ ತನಕವೂ ವಾರ್ಷಿಕ ಪರೀಕ್ಷೆಗಳ ಉಸ್ತುವಾರಿಯಾಗಲೀ ಪೇಪರು ತಿದ್ದುವ ಹೊಣೆಗಾರಿಕೆಯಾಗಲೀ ಕಡ್ಡಾಯವಾಗಿರಲಿಲ್ಲ. ನಾನು ಕಾಲೇಜು ಉಪನ್ಯಾಸಕ ವೃತ್ತಿಗೆ ಸೇರಿ ಕೆಲವು ವರ್ಷಗಳ ತನಕವೂ ಖಾಯಂ ನೇಮಕಾತಿ ಆಗದೆ ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೆ. ಆಗೆಲ್ಲಾ ಮಾರ್ಚ್ ಮೂವತ್ತಕ್ಕೆ ರಜೆ ಪ್ರಾರಂಭವಾದರೆ ಮತ್ತೆ ಜೂನ್ ಹದಿನಾರಕ್ಕೆ ವಾಪಸ್ ಬಂದರಾಗಿತ್ತು.
ಇಡೀ ವರ್ಷ ಪಾಠ. ಪ್ರವಚನ. ವರುಷಾಂತ್ಯದ ಎಪ್ರಿಲ್ ಮೇ ತಿಂಗಳುಗಳಲ್ಲಿ ಪರೀಕ್ಷೆಯಲ್ಲಿ ಬರೆದು ಪಾಸ್ ಆದರಾಯ್ತು. ಸೆಮೆಸ್ಟರ್ ಪರೀಕ್ಷೆಗಳು ಆಂತರಿಕ ಮೌಲ್ಯ ಮಾಪನ ಯಾವುದರದ್ದೂ ರಗಾಳೆ ಇಲ್ಲ. ರಜೆ ಅಂದರೆ ರಜೆಯೇ. ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಸಾಕಷ್ಟು ಬಿಡುವು. ಮನರಂಜನೆ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲದರಲ್ಲಿಯೂ ತೊಡಗಿಕೊಳ್ಳಬಹುದಾದ ವಿರಾಮ.
ರಜೆ ಕಳೆಯಲೆಂದು ಕರಾವಳಿಯ ಸೆಕೆಗೆ ವಿದಾಯ ಹೇಳಿ ಊರಿಗೆ ಹೋಗಿಳಿದ ಕೊಡಲೇ ನಮ್ಮ ಹಳ್ಳಿಯ ಮಲೆನಾಡಿನ ತಂಪು ‘ಥಂಡಿ’ಯಾಗಿ ನನ್ನನ್ನಾಕ್ರಮಿಸುತ್ತಿತ್ತು. ನಾನು ಅಕ್ಷೀಪೀಡಿತಳಾಗಿ ಶಿತೋಪಶಮನಕ್ಕಾಗಿ ಡಾಕ್ಟರ್ ಶಾಪಿಗೆ ಹೊರಟು ನಿಂತಾಗ ಮನೆಮಂದಿಯೆಲ್ಲ ರೋಗಿಗಳಾಗಿ ಬಿಡುತ್ತಿದ್ದರು.
ಆ ಬಾರಿ ಊರಿಗೆ ಹೋದಾಗ ಮೇ ತಿಂಗಳಲ್ಲಿಯೇ ಮಳೆ ಮೊದಲಿಟ್ಟಿತ್ತು. ಊರಿಗೆ ಹೊಸ ಡಾಕ್ಟರ ಒಬ್ಬರ ಆಗ ಮನ ವಾಗಿದ್ದು ಅಷ್ಟರಲ್ಲಾಗಲೇ ಹಳ್ಳಿಯಲ್ಲಿ ಭಾರಿ ಸುದ್ದಿ ಮಾಡಿ ಜನಪ್ರಿಯರಾಗಿಬಿಟ್ಟಿದ್ದರು.
ಆಗಲೂ ಒಬ್ಬರಿಗೆ ಥಂಡಿ ಹತ್ತಿಕೊಂಡಿತೆಂದರೆ ಮನೆಮಂದಿಗೆಲ್ಲ ಸರದಿಯಂತೆ ಥಂಡಿ ಯಾಗುತ್ತಿತ್ತು. ಆಗೆಲ್ಲಾ ಥಂಡಿ ಶೀತ ಕೆಮ್ಮು ಗಳೆಂದರೆ ನಮ್ಮ ಜೊತೆಯಲ್ಲೇ ಬದುಕುತ್ತಿರುವ ಉಪಗ್ರಹಗಳಾಗಿದ್ದವೇ ಹೊರತು ಪ್ರಾಣ ಭಯ ತರುವ ಈಗಿನ ವೈರಸ್ ನ ಥರ ಮಹಾಮಾರಿ ಎಂದೆಲ್ಲ ಕರೆಸಿಕೊಳ್ಳುವ ಮಟ್ಟದ ದುಷ್ಟ ಕಾಯಿಲೆಯೇ ಆಗಿರಲಿಲ್ಲ.
ಸಾಮೂಹಿಕವಾಗಿ ಎಲ್ಲರೂ ಕೆಮ್ಮುತ್ತಾ ಕನಿಷ್ಠ ಹದಿನೈದು ದಿನ ಥಂಡಿ ಆಚರಣೆ ಮಾಡುತ್ತಿದ್ದೆವು. ‘ಥೋ ಮಾರಾಯ ಈ ಥಂಡೀಲಿ ಸತ್ತ ಹಂಗೇಯ’ ಎನ್ನುತ್ತಿದ್ದರೇ ವಿನಃ ಯಾರೂ ಸಾಯುತ್ತಿರಲಿಲ್ಲ. ನನ್ನ ಅಮ್ಮನಿಗೆ ಥಂಡಿ ಯಾಯಿತೆಂದರೆ ಹಲಸಿನಕಾಯಿ ತೊಳೆ ಸೂಜಿಮೆಣಸಿನ ಖಾರ ಹಾಗೂ ಲಿಂಬೆ ಹುಳಿ ಹಿಂಡಿದ ಘೋರ ಖಾರದ ಸಾರೊಂದು ರೆಡಿಯಾಗುತ್ತಿತ್ತು. ಅದನ್ನು ಉಂಡ ಎಂಥವನಿಗೂ ಮೂಗು ಒಣಗಿ ಹೋಗ ಬೇಕು.
ಊರಿಗೆ ಹೋಗಿ ಉಳಿದ ನನಗೆ ಘೋರ ಥಂಡಿ ಹತ್ತಿ ಕೊಂಡಿತಾದ್ದರಿಂದ ಆ ದಿನ ನಾನು ಡಾಕ್ಟ್ರ ಶಾಪಿಗೆ ಹೊರಟು ನಿಂತಿದ್ದೆ. ಕೂಡು ಕುಟುಂಬದ ಮನೆ ಮಂದಿಗೆಲ್ಲ ಒಂದೊಂದು ಕಾಯಿಲೆ ವೇದನೆ ನೆನಪಾಗಿಬಿಟ್ಟಿತು. ಎಲ್ಲರಿಗೂ ಔಷಧ ಬೇಕು. ನಾನು ನನ್ನ ಸ್ವಂತ ತಲೆಭಾರ ಶೀತ ಮರೆತು ಎಲ್ಲರ ಕಾಯಿಲೆಗಳ ವಿವರ ಕಲೆ ಹಾಕ ತೊಡಗಿದೆ.
| ಇನ್ನು ಮುಂದಿನ ವಾರಕ್ಕೆ |
0 ಪ್ರತಿಕ್ರಿಯೆಗಳು