ಪುರುಷೋತ್ತಮ ಬಿಳಿಮಲೆ
ದ್ವೇಷ ಭಾಷಣಗಳಿಂದ ಸಂಸ್ಕೃತಿ ನಲುಗುತ್ತಿರುವಾಗ, ನಾಡಿನ ಸೌಹಾರ್ದ ಸಂಸ್ಕೃತಿಯ ಬಗ್ಗೆ ಮಾತಾಡುವವರ ಮತ್ತು ಬರೆಯುವವರ ಸಂಖ್ಯೆ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಸುಮಾರು ಏಳು ನೂರು ಪುಟಗಳ ಸೌಹಾರ್ದ ಪಥ ಗ್ರಂಥದಲ್ಲಿ ಕರ್ನಾಟಕದ ಸೌಹಾರ್ದತೆಯನ್ನು ವಿವರಿಸುವ ೧೦೧ ಅತ್ಯಮೂಲ್ಯ ಲೇಖನಗಳಿವೆ. ಶಿಕ್ಷಣ ತಜ್ಞ, ಲೇಖಕ ಡಾ. ಕಲ್ಯಾಣರಾವ ಪಾಟೀಲರ ಅಭಿನಂದನ ಸಂಪುಟ ಇದಾದರೂ ಪಾಟೀಲರ ಬಗ್ಗೆ ಇಲ್ಲಿ ಒಂದೇ ಒಂದು ಲೇಖನವಿದೆ. ಉಳಿದ ಲೇಖನಗಳನ್ನು ಓದಿದರೆ ಕರ್ನಾಟಕಕ್ಕೆ ಒಂದು ಸುತ್ತು ಹೊಡೆದು ಬಂದಂತಾಗಿದೆ.
ಸಂಪಾದಕರಾದ ಡಾ. ಗುರುಲಿಂಗ ಧಬಾಲೆ ಮತ್ತು ಡಾ. ಲಕ್ಷ್ಮೀಕಾಂತ ಪಂಚಾಳ ಅವರು ಇಲ್ಲಿನ ಲೇಖನಗಳನ್ನು ನಾಲ್ಕು ವಿಭಾಗಗಲ್ಲಿ ಮಂಡಿಸಿದ್ದಾರೆ. ಮೊದಲನೆಯ ಭಾಗದಲ್ಲಿ ೨೨ ಲೇಖನಗಳಿದ್ದು ಇವು ಕರ್ನಾಟಕದ ಸೌಹಾರ್ದತೆಯ ಪರಿಕಲ್ಪನೆಯನ್ನು ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಯ ಚೌಕಟ್ಟಿನಲ್ಲಿ ವಿವರಿಸುತ್ತವೆ. ಎರಡನೆಯ ಭಾಗದಲ್ಲಿ ೫೭ ಲೇಖನಗಳಿದ್ದು ಇವು ಭಾಲ್ಕಿ, ಬಸವಕಲ್ಯಾಣ, ಅಷ್ಟೂರು, ಘೋಡವಾಡಿ, ಸಾವಳಗಿ, ಕೊಡೇಕಲ್, ಗೋಗಿ, ಇಂಚಗೇರಿ, ಮೊದಲಾದ ಇತಿಹಾಸ ಪ್ರಸಿದ್ಧ ಜಾಗಗಳು ಬೆಳೆಸಿಕೊಂಡು ಬಂದ ಸೌಹಾರ್ದತೆಯ ನೆಲೆಗಳನ್ನು ಅನ್ವೇಷಿಸುತ್ತವೆ.
ಬಹುಶಃ ಎಲ್ಲ ಕನ್ನಡಿಗರೂ ಓದಬೇಕಾದ ಹಲವು ಲೇಖನಗಳು ಇಲ್ಲಿವೆ. ಮೂರನೇ ಭಾಗದಲ್ಲಿ ೨೯ ಲೇಖನಗಳಿದ್ದು ಅವುಗಳಲ್ಲಿ ಕೊಟ್ಟೂರು ಬಸವ, ವೀರಣ್ಣ ಮುತ್ಯಾ, ಕಡಕೋಳ ಮಹಾದೇವಪ್ಪ, ಪಿಂಜಾರ್ ಸಾಬ್, ಹಸನ ಸಾಬ್, ಸಾಯಿಬಣ್ಣ ಮೊದಲಾದ ಮಹನೀಯರ ಸೌಹಾರ್ದ ಪಥವನ್ನು ಪರಿಚಯಿಸಲಾಗಿದೆ. ನಾಲ್ಕನೆಯ ಭಾಗದಲ್ಲಿ ಕಲ್ಯಾಣ ರಾವ್ ಅವರು ಸ್ವತಃ ಹೇಗೆ ಎಲ್ಲರಿಗೂ ಬೇಕಾದವರಾಗಿ ಬದುಕಿದರು ಎಂಬ ಬಗ್ಗೆ ಮಾಹಿತಿಯಿದೆ.
೧೨೦೦ ರೂಪಾಯಿಗಳ ಈ ಪುಸ್ತಕವನ್ನು ವೈಯಕ್ತಿಕವಾಗಿ ಕೊಳ್ಳುವವರು ಕಡಿಮೆ ಇರಬಹುದು. ಆದರೆ ಕರ್ನಾಟಕದ ಎಲ್ಲ ಗ್ರಂಥಾಲಯಗಳಲ್ಲಿ ಇರಬೇಕಾದ ಅಮೂಲ್ಯ ಕೃತಿಯಿದು. ಸಂಪಾದಕರ ಶ್ರಮಕ್ಕೆ ತಲೆ ಬಾಗಿ ಗೌರವ ಸಲ್ಲಿಸುವೆ
0 ಪ್ರತಿಕ್ರಿಯೆಗಳು