ಎಂ ಎನ್ ಮಹಿಪಾಲರೆಡ್ಡಿ ಸೇಡಂ
ʻಚಲನಶೀಲತೆʼಯನ್ನು ಬೊಗಸೆಯಿಂದ ಬಗೆದು ಬಗೆದು ಕೊಟ್ಟದ್ದು ಎಂಬುದಕ್ಕೆ ʻಪುಕ್ಸಟ್ಟೆ ಲೈಫುʼ ಸಿನಿಮಾದ ಕ್ರಿಯಾಶೀಲತೆಯೇ ಕಾರಣ.
ʻಪುಕ್ಸಟ್ಟೆ ಲೈಫುʼ ಸಿನಿಮಾ ತುಂಬೆಲ್ಲಾ ʻಚಲನಶೀಲತೆʼ ತುಂಬಿಕೊಂಡಿದೆ. ಎಲ್ಲೂ ʻಪುಟ್ಟʼ ಗ್ಯಾಪುಗಳೂ ಇಲ್ಲ. ಬಿಟ್ಟೂ ಬಿಡದಂತೆ ನೋಡಬೇಕೆಂಬ ʻಭಾವʼವಂತೂ ಬರುತ್ತದೆ. ʻವ್ಯವಸ್ಥೆʼಯ ಒಂದು ʻಪುಟ್ಟ ಸಂಗತಿʼಯನ್ನು ಎಳೆ ಎಳೆಯಾಗಿ ಬಿಚ್ಚಿಡುವುದನ್ನು ಸಿನಿಮಾದುದ್ದಕ್ಕೂ ನೋಡುತ್ತೇವೆ. ಈ ಕಾರಣಕ್ಕೆ ಸರ್ವಸ್ವ ಚಿತ್ರತಂಡಕ್ಕೆ ಮತ್ತು ನಿರ್ದೇಶಕ ಅರವಿಂದ ಕುಪ್ಳಿಕರ್ ಅವರ ಕ್ರಿಯಾಶೀಲತೆಗೆ ಸೆಲ್ಯೂಟ್ .
ಬೀಗ ರಿಪೇರಿ ಮಾಡುತ್ತ ಸಲೀಸಾಗಿ ಬದುಕುತ್ತಿದ್ದ ಶಹಾಜಹಾನ್ ಪಾತ್ರದಲ್ಲಿ ತುಂಬಾ ಸಹಜತೆಯಲ್ಲಿ ಅಭಿನಯಿಸಿರುವ ಸಂಚಾರಿ ವಿಜಯ್ ʻಆಪ್ತʼವಾಗುತ್ತಾರೆ. ಬದುಕಿನ ಬಂಡಿ ಸರಾಗವಾಗಿ ಸಾಗುವಂತಾಗಲು ಯತ್ನಿಸುತ್ತಿರುವಾಗ ಲೈಫು ಏರು ಪೇರಾಗಿ ಉಯ್ಯಾಲೆಯಂತಾಗುತ್ತದೆ. ವ್ಯವಸ್ಥೆಯ ಚಕ್ರಸುಳಿಗೆ ಸಿಲುಕುತ್ತಾನೆ. ಸಂಪಾದನೆ ಮತ್ತು ಎಂಜಾಯ್ ಗೆ ʻಪುರುಸೊತ್ತೆ ʼ ಕೊಡದ ಸಿನಿಮಾವೇ ʻಪುಕ್ಸಟ್ಟೆ ಲೈಫು. ವಕೀಲೆ ಆಗಿ ನಟಿಸಿರುವ ಮಾತಂಗಿ ಪ್ರಸನ್ನಾ ಅವರು ʻಸಹೃದಯಿ ಗೆಳತಿಯಾಗಿʼ, ಸಂಚಾರಿ ವಿಜಯನ ʻಪ್ರೀತಿʼಯಲ್ಲಿ ತೊಳಲಾಡದೇ, ಕೊನೆಯಲ್ಲಿ ಪಶ್ಚಾತ್ತಾಪದ ವಿರಹದುಸಿರಿಗೆ ಬೇಗೆಯಾಗುತ್ತಾಳೆ.
ಸಿಸಿಬಿ ಅಧಿಕಾರಿಯಾಗಿ ರಂಗಾಯಣ ರಘು ಅವರ ಅಭಿನಯವು, ಹಾಸ್ಯಪ್ರಜ್ಞೆಯ ಜೊತೆಗೆ ಸೀರಿಯಸ್ಸಾಗಿ ಜನಮನ ಸೂರೆಗೊಳ್ಳುತ್ತದೆ.
ನಿರ್ದೇಶಕ ಅರವಿಂದ ಕುಪ್ಳಿಕರ್ ಅವರ ಕ್ರಿಯಾತ್ಮಕವಾದ ದಿಗ್ದರ್ಶನಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು. ಸೊಗಸಾದ ಸಂಗೀತವಿದೆ. ವಚನಗಳು, ತತ್ವಪದಗಳಂತಿರುವ ಹಾಡುಗಳು ಇಂಪು ನೀಡಿವೆ.
ಇಡೀ ಚಿತ್ರದುದ್ದಕ್ಕೂ ಸಂಚಾರಿ ವಿಜಯ ನಟನೆ ʻಅವನಿಲ್ಲವಲ್ಲʼ ಎಂಬ ಭಾವನೆಯ ನಡುವೆಯೂ ʻಅವನಿದ್ದಾನೆ ನಮ್ಮ ನಡುವೆʼ ಎಂಬಂತೆ ಅನಿಸಿದ್ದಂತೂ ಖರೆ.
ಅಚ್ಯುತ್ ಕುಮಾರ ಅವರ ನಟನೆ ಟಕಾ ಟಕಾ ಅಂತ ಓಡಾಡುವ, ಮಾತಾಡುವ ಪೊಲೀಸ್ ಅಧಿಕಾರಿಯ ವರ್ತನೆ ಹಿಡಿಸುತ್ತದೆ. ರಂಗಭೂಮಿಯಿಂದ ಬಂದ ಶ್ರೀಪತಿ ಮಂಜನಬೈಲು ಗಮನ ಸೆಳೆಯುತ್ತಾರೆ.
ಅನುಭವಿ ಕಲಾವಿದರ ಪೈಕಿ, ರಂಗಾಯಣ ರಘು, ಅಚ್ಯುತ್ ಮನಸಿನಲ್ಲಿ ನಿಲ್ಲುತ್ತಾರೆ. ಅದ್ವೈತ್ ಗುರುಮೂರ್ತಿ ಅವರ ಸೊಗಸಾದ ಕ್ಯಾಮೆರಾ ಕಣ್ಣೋಟವು, ಸಿನಿಮಾ ನೋಡುವಾಗ ಎದ್ದುಹೋಗದಂತೆ ತಡೆಯುತ್ತದೆ. ಸುರೇಶ ಆರ್ಮುಗಂ ಅವರ ಎಡಿಟಿಂಗ್ ಚಾಕಚಕ್ಯತೆ ಇಡೀ ಚಿತ್ರದುದ್ದಕ್ಕೂ ಗಮನಿಸಬಹುದು.
ಚಿತ್ರ: ಪುಕ್ಸಟ್ಟೆ ಲೈಫು
ತಾರಾಗಣ: ಸಂಚಾರಿ ವಿಜಯ, ರಂಗಾಯಣ ರಘು, ಅಚ್ಯುತ್ ಕುಮಾರ, ಮಾತಂಗಿ ಪ್ರಸನ್ನಾ, ಶ್ರೀಪತಿ ಮಂಜನಬೈಲು.
ನಿರ್ದೇಶನ: ಅರವಿಂದ ಕುಪ್ಳಿಕರ್
ಸಂಗೀತ ನಿರ್ದೇಶನ: ವಾಸು ದೀಕ್ಷಿತ್
ಹಿನ್ನೆಲೆ ಸಂಗೀತ : ಪೂರ್ಣಚಂದ್ರ ತೇಜಸ್ವಿ
0 ಪ್ರತಿಕ್ರಿಯೆಗಳು