ರಾಜಾರಾಂ ತಲ್ಲೂರು
ಇದೊಂದು ವಿಚಿತ್ರ ಸಂತಸದ ಸುದ್ದಿ. ಯಾಕೆಂದರೆ, ನಮ್ಮ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಗೆ ಇಂತಹದೊಂದು ಅವಕಾಶ ದೊರಕಿದೆ.
ಅದೇ ವೇಳೆಗೆ, ಯಾವುದೋ ಯೂನಿವರ್ಸಿಟಿ ಕೈಚಾಚಿ ಪಡೆದು ಮುದ್ರಿಸಿ ಸಾರ್ವಜನಿಕರಿಗೆ ಒದಗಿಸಬೇಕಾಗಿದ್ದ ಮಹತ್ವದ ಕೆಲಸ ಇದು. ಅವರು ಮಾಡಿಲ್ಲ ಎಂಬ ಕಾರಣಕ್ಕಾಗಿ ಈ ಗೌರವ ನಮಗೆ ದೊರೆತಿದೆ.
ಅಸಲಿಗೆ ವಿಷಯ ಏನೆಂದರೆ, ಗೆಳೆಯ ಪಂಜು ಗಂಗೊಳ್ಳಿ ಅವರು ಕಳೆದ ಇಪ್ಪತ್ತು ವರ್ಷಗಳಿಂದ ತಮ್ಮ ಕಾರ್ಟೂನಿಸ್ಟ್ ವೃತ್ತಿಯ ಜೊತೆಗೇ ತಪಸ್ಸಿನೋಪಾದಿಯಲ್ಲಿ ಕೆಲಸ ಮಾಡಿ ಸಂಗ್ರಹಿಸಿದ 10,000ಕ್ಕೂ ಮಿಕ್ಕಿ ಕುಂದಗನ್ನಡ ಶಬ್ದಗಳ ಅರ್ಥ ವಿವರಣೆಗಳು ಮತ್ತು 1700ರಷ್ಟು ನುಡಿಗಟ್ಟುಗಳ ಸಂಗ್ರಹವನ್ನು ಕಳೆದ ಏಳೆಂಟು ವರ್ಷಗಳಿಂದ ಪ್ರಕಟಿಸಲು ಶ್ರಮಪಡುತ್ತಿದ್ದರು.
ಇದನ್ನು ನಾವೇ ಏಕೆ ಪ್ರಕಟಿಸಬಾರದು ಎಂಬ ಯೋಚನೆ ನಮ್ಮ ಟ್ರಸ್ಟಿಗೆ ಬಂದಾಕ್ಷಣ ಅದನ್ನು ಪಂಜು ಅವರ ಗಮನಕ್ಕೆ ತಂದಾಗ, ಅವರು ಬಹಳ ಸಂತೋಷದಿಂದ ಇದಕ್ಕೆ ಒಪ್ಪಿದ್ದಾರೆ ಮತ್ತು ಈ ನೆಪದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟಿನ “ಹಿಗ್ಗು-ಅರಿವಿನ ಮಾಲೆ” ಪುಸ್ತಕ ಪ್ರಕಟಣಾ ದತ್ತಿ ಸ್ಥಾಪನೆಗೂ ಪ್ರೇರಣೆ ಆಗಿದ್ದಾರೆ. ಈ ದತ್ತಿಯ 2,00,000 ರೂಗಳನ್ನು ಟ್ರಸ್ಟ್ ಬಹಳ ಹೆಮ್ಮೆಯಿಂದ “ಕುಂದಾಪ್ರ ಕನ್ನಡ ನಿಘಂಟು” ಪ್ರಕಟಣೆಗೆ ಬಳಸಲಿದೆ. ಟ್ರಸ್ಟಿನ “ಕರಾವಳಿ ಕಟ್ಟು” ಚಟುವಟಿಕೆಗಳ ಭಾಗವಾಗಿ ಈ ಪುಸ್ತಕ ಪ್ರಕಟಗೊಳ್ಳಲಿದೆ.
ಸುಮಾರು 700-800 ಪುಟಗಳ ಈ ನಿಘಂಟು ಜನವರಿ ಅಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆ. ನಮ್ಮದೇ ಪ್ರೊಡಿಜಿ ಪ್ರಕಾಶನ ಪುಸ್ತಕವನ್ನು ಪ್ರಕಟಿಸಲಿದ್ದು, ಮುದ್ರಣ ಪೂರ್ವ ಖರೀದಿಗೂ ರಿಯಾಯಿತಿ ದರದಲ್ಲಿ ಪುಸ್ತಕ ಲಭ್ಯವಾಗಲಿದೆ. ವಿವರಗಳನ್ನು ಶೀಘ್ರವೇ ಹಂಚಿಕೊಳ್ಳುತ್ತೇನೆ.
ಕುಂದಗನ್ನಡಕ್ಕೆ ಸಂಬಂಧಿಸಿ ಇದೊಂದು ಮಹತ್ವದ ಪ್ರಕಟಣೆ ಆಗಲಿದೆ, ಅದರ ಪ್ರಕಾಶನದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಪಾತ್ರ ಇರುತ್ತದೆ ಎಂಬುದು ಮತ್ತು ಅದು ಗೆಳೆಯ ಪಂಜು ಅವರ 20ವರ್ಷಗಳ ತಪಸ್ಸಿನ ಫಲ ಎಂಬುದು ಈ ಸಂತಸಕ್ಕೆ ಮತ್ತಷ್ಟು ಮೆರುಗು ಕೊಡಲಿದೆ.
ಪಂಜು ಅವರ ಕುಂದಾಪ್ರ ಕನ್ನಡ ಯೋಜನೆಯು ಅತ್ಯಂತ ಅಗತ್ಯವಾದ ಕೆಲಸವಾಗಿದೆ. ತಲ್ಲೂರ್ ಅದನ್ನು ಪ್ರಕಟಿಸುತ್ತಿರುವದೂ ಮಹತ್ವದ ಸಂಗತಿ. ಸಾಹಸ ಕಾರ್ಯಕ್ಕೆ ಅಭಿನಂದನೆಗಳು