ರವಿಕುಮಾರ್ ಟೆಲೆಕ್ಸ್
ಅದೊಂದು ದಿನ ಬಿಜೆಪಿಯ ಮುಖಂಡರೋರ್ವರು ನನಗೆ ಸಿಕ್ಕು ” ರವಿಯವರೇ ಪೇಜಾವರ ಶ್ರೀಗಳನ್ನು ನಿಮ್ಮ ಮನೆಗೆ ಕರೆದರೆ ಬರುವವರಿದ್ದಾರೆ. ಯಾಕೆ ಕರೆಯಬಾರದು”? ಎಂದು ಶ್ರೀಗಳನ್ನು ನನ್ನ ಮನೆಗೆ ಕರೆತರುವ ಇಂಗಿತವನ್ನು ವ್ಯಕ್ತಪಡಿಸಿದರು.
“ನಾನು ದಲಿತ ಎನ್ನುವ ಕಾರಣಕ್ಕೆ ಅವರು ಬರುವುದಾದರೆ ಬರುವುದೇ ಬೇಡ. ನಾನು ಜಾತಿಯ ಕಾರಣಕ್ಕೆ ಯಾರ ಹಿತಾಸಕ್ತಿಯ religious marketing material ಅಲ್ಲ,” ಎಂದು ಖಡಾಖಂಡಿತವಾಗಿ ನಿರಾಕರಿಸಿಬಿಟ್ಟೆ.
ಅವರು ನಮ್ಮ ಮನೆಗಳಿಗೆ ಬರುವುದಕ್ಕಿಂತ ನಮ್ಮನ್ನು ಅವರವರ ‘ಮನ’ ದೊಳಗೆ ಬಿಟ್ಟುಕೊಳ್ಳಬೇಕು. ದಲಿತರ ಮನೆಗಳಿಗೆ ಹೋಗುವುದಕ್ಕಿಂತ ಅವರವರ ಮನ – ಮನೆಗಳಲ್ಲಿ ಬದಲಾವಣೆ ತರಬೇಕು.ಅದು ಸಾರ್ಥಕ ಕೆಲಸವೆಂದು ಹೇಳುವ ಹೊತ್ತಿಗೆ ಆ ಬಿಜೆಪಿ ಮುಖಂಡರು ಕಾಲ್ಕಿತ್ತಿದ್ದರು.
ಯಾವ ರಥಯಾತ್ರೆಯ ದಿಗ್ದರ್ಶಕರಂತಿದ್ದು ಅಸಂಖ್ಯಾತ ಜನರ ಸಾವುಗಳನ್ನು ಹಿಂದೂ ಧರ್ಮದ ಉತ್ಥಾನದ ಶ್ರೇಯಸ್ಸು ಎಂದು ಭಾವಿಸಿದ ಪೇಜಾವರರಲ್ಲಿ ಕಾಲ ಸರಿದಂತೆ ಗುಬ್ಬಚ್ಚಿಯಂತ ಅವರ ಎಲುಬಿನಗೂಡೊಳಗೆ ಸಂತನೊಬ್ಬ ಆವಿರ್ಭವಿಸತೊಡಗಿದ್ದ. ಸಾಮಾಜಿಕ, ಧಾರ್ಮಿಕ ಸಾಮರಸ್ಯದ ನಿಜ ಮಾತುಗಳು ಜನಿಸತೊಡಗಿದವು.
ಕಟ್ಟುಪಾಡುಗಳಿಂದ ಕಟ್ಟಲ್ಪಟ್ಟ ಕೃಷ್ಣನನ್ನು, ಕೃಷ್ಣ ಮಠಗಳನ್ನು ಬಯಲ ಆಲಯವಾಗಿಸುವ ಮಹೋನ್ನತ ಮಾರ್ಗ ಹಗೆಯತೊಡಗಿದರು.
ಆ ಮಾರ್ಗದಲ್ಲಿ ಬರುವ ಪೇಜಾವರ ಎಂಬ ಸಂತನಿಗಾಗಿ ನಾನು ಬಾಗಿಲು ತೆರೆದುಕೊಂಡು ಕಾಯುತ್ತಿದ್ದೆ. ಸಣ್ಣದೊಂದು ಜಗಳ, ಅಗಾಧವಾದ ಪ್ರೀತಿ ಯನ್ನು ಹಂಚಿಕೊಳ್ಳಬೇಕಿತ್ತು ಅವರೊಂದಿಗೆ.
ಬಹುಶಃ ಇದು ವೈದ್ಧಿಕ ಮಠವ್ಯವಸ್ಥೆಯ ಹಿತಾಸಕ್ತಿಗಳಿಗೆ ಇದು ಅಪಥ್ಯವಾಗಿತ್ತೇನೋ…..? ಕೈಗೂಡಲಿಲ್ಲ. ಕಾಲವೂ ಇದಕ್ಕೆ ಸಹಕರಿಸಲಿಲ್ಲ.
ಪೇಜಾವರ ಯತಿಗಳೇ…,
ನೀವು ಹಾಗೆಯೇ ಹೊರಟು ಬಿಟ್ಟಿರಿ.
ನಾನು ಜಗಳ ಕೈ ಬಿಟ್ಟಿದ್ದೇನೆ.
ನೀವು ಹೋಗಿ ಬನ್ನಿ;
ನಿಮ್ಮ ಆತ್ಮ ಪ್ರಕೃತಿಯಲ್ಲಿ ಲೀನವಾಗಿ ಎಲ್ಲರೆದೆಯಲ್ಲಿ
ಪ್ರೇಮ.ಮಾನವತೆ ಎಂಬ ನಿಜಧರ್ಮದ ಮರುಹುಟ್ಟಿನ ಉಸಿರಾಡಲಿ.
ನಿಮಗೆ ನಮಸ್ಕಾರಗಳು.
– N.Ravikumar telex
ಒಳ್ಳೆಯ ಲೇಖನ