ಈ ಹಿಂದೆ ಕನ್ನಡಪ್ರಭ ಕವಿಮನೆಗಳ ಇಂದಿನ ಕಥೆಯನ್ನು ಕುರಿತು ಆಸಕ್ತಿ ಹೊಂದಿ ಅದರ ಶೋಧ ನಡೆಸಿತ್ತು. ಕನ್ನಡದ ಮಹಾ ಮನಗಳು ಇದ್ದ ಕುರುಹುಗಳು ಇದೆಯೇ? ಎಂದು ಬೆನ್ನು ಹತ್ತಿತ್ತು. ಈಗ ಹೇಗಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಓಡಾಟ ನಡೆಸಿತ್ತು.
ಆ ಸರಣಿಯಲ್ಲಿ ಕನ್ನಡದ ಪ್ರಜ್ಞೆಯನ್ನು ಕಲಕಿದ, ಚಿಂತನೆಗೆ ಹಚ್ಚಿದ, ತಲೆಮಾರುಗಳ ಓದುಗರನ್ನು ಪ್ರಶ್ನಿಸಲು ಪ್ರೇರೇಪಿಸಿದ ನಿರಂಜನರ ಹುಟ್ಟೂರಿಗೆ ಆತ್ಮ ಭೂಷಣ್ ಹೋಗಿ ಬಂದಿದ್ದಾರೆ.
ಅವರು ಕಂಡದ್ದು ಇಲ್ಲಿದೆ.
ಆತ್ಮಭೂಷಣ್
‘ಕಿಶೋರ’ ಕತೆಗಾರ, ಪ್ರಗತಿಶೀಲ, ಸತ್ಯಶೋಧಕ ಕುಳುಕುಂದ (ಕುಲ್ಕುಂದ) ಶಿವರಾಯರ ಹೆಸರು ಸಾಹಿತ್ಯಲೋಕದಲ್ಲಿ ‘ನಿರಂಜನ’ ಅಂಕಿತದಿಂದಲೇ ಪ್ರಸಿದ್ಧ. ಕತೆಗಾರ, ಕವಿ, ಅಂಕಣಕಾರ, ಸಂಪಾದಕರಾಗಿ ಕನ್ನಡದ ಕೆಲಸ ಮಾಡಿರುವ ಇವರು ‘ಕಾಮ್ರೇಡ್ ಶಿವರಾವ್’ ಕೂಡ ಆಗಿದ್ದರು. ಕುಕ್ಕೆ ಸುಬ್ರಹ್ಮಣ್ಯದ ಬಳಿಯ ಕುಲ್ಕುಂದದಲ್ಲಿ ಜನಿಸಿ ಪುತ್ತೂರಿನ ಕಾವಿನಲ್ಲಿ ಶಾಲೆಗೆ ಕಾಲಿಟ್ಟ ಶಿವರಾಯರು, ಸುಳ್ಯ ಮತ್ತು ಕಾಸರಗೋಡಿನ ನೀಲೇಶ್ವರದಲ್ಲಿ ವಿದ್ಯಾಭ್ಯಾಸ ಮಾಡಿದರು.
ಶಿವರಾಯರು ಹುಟ್ಟಿದಲ್ಲಿಂದ ವಿದ್ಯಾಭ್ಯಾಸ ಪಡೆದಲ್ಲಿವರೆಗಿನ ಪ್ರದೇಶಗಳಲ್ಲಿ ಅವರ ಮನೆಯ ಯಾವುದೇ ಕುರುಹು ಈಗ ಸಿಗದು. ಕುಲ್ಕುಂದದ ಬಸವನಗುಡಿ ಬಳಿ ಜೋಪಡಿಯಲ್ಲಿ 1924ರಲ್ಲಿ ಶಿವರಾಯರ ಜನನ. ಇವರ ತಂದೆ ದೇವಸ್ಥಾನದಲ್ಲಿ ಶ್ಯಾನುಭೋಗರಾಗಿದ್ದರು. ತಾಯಿ ಕುಲ್ಕುಂದದಲ್ಲಿ ಪುಟ್ಟ ಹೊಟೇಲ್ ನಡೆಸುತ್ತಿದ್ದರು. ಈಗ ಅಲ್ಲಿ ಗುಡ್ಡ ಇದೆ. ಮನೆ ಇರುವ ಬಗ್ಗೆ ಯಾವುದೇ ಕುರುಹು ಇಲ್ಲ.
ಶಿವರಾಯರಿಗೆ 6 ತಿಂಗಳಾಗುತ್ತಲೇ ಕಾವು ಎಂಬಲ್ಲಿಗೆ ತಾಯಿ, ಮಗು ಬಂದರು. ಕಾವಿನ ಪೂವಂದೂರಿನಲ್ಲಿ ಮಂಜುನಾಥ ಪೈ ಎಂಬವರು ಹುಲ್ಲು ಮಾಡಿನ ಮನೆ ನಿರ್ಮಿಸಿಕೊಟ್ಟಿದ್ದರು. ಜೀವನೋಪಾಯಕ್ಕೆ ಸಣ್ಣ ಹೊಟೇಲ್. 1924ರಿಂದ 1935ರವರೆಗೆ ಇಲ್ಲಿಯೇ ಇದ್ದರು. ಬಳಿಕ ಸುಳ್ಯ ಕಾನತ್ತಿಲ ಭಜನಾ ಮಂದಿರ ಬಳಿ ಹೊಟೇಲ್ ಮನೆಯಲ್ಲಿದ್ದರು. ಈ ಮೂರು ಕಡೆಯಲ್ಲೂ ಬಾಡಿಗೆ ಮನೆಯನ್ನೇ ಹೊಟೇಲ್ ಮಾಡಿಕೊಂಡು ಶಿವರಾಯರನ್ನು ತಾಯಿ ಪೋಷಿಸುತ್ತಿದ್ದರು.
ಪೂವಂದೂರಿನಲ್ಲಿ ಬಾಡಿಗೆಗಿದ್ದ ಶಿವರಾಯರ ಮನೆಯನ್ನು ಕೆಡವಿ ಅಲ್ಲಿ ಸಾವಯವ ಗೊಬ್ಬರ ತಯಾರಿಯ ಫ್ಯಾಕ್ಟರಿ ನಿರ್ಮಿಸಲಾಗಿದೆ. ಈಗ ಫ್ಯಾಕ್ಟರಿಯೂ ಕೆಲಸ ಮಾಡುತ್ತಿಲ್ಲ. ಪಾಳುಬಿದ್ದ ಕೊಂಪೆಯಾಗಿದ್ದು, ಸುತ್ತಲೂ ಹುಲ್ಲು, ಗಿಡ, ಪೊದರು ಬೆಳೆದಿದೆ. ಹಳೇ ಹುಣಸೆ ಮರವೊಂದು ದೊಡ್ಡದಾಗಿ ಬೆಳೆದು ನಿಂತಿದೆ. ಒಂದನೇ ತರಗತಿಯಿಂದ ನಾಲ್ಕರವರೆಗೆ ಕಾವು ಸರ್ಕಾರಿ ಶಾಲೆಗೆ ಶಿವರಾಯರು ಹೋಗಿದ್ದರು.
ನಂತರ ಸುಳ್ಯದಲ್ಲಿ ಹೈಯರ್ ಎಲಿಮೆಂಟ್ರಿಗೆ 5ರಿಂದ 8ನೇ ತರಗತಿ ವರೆಗೆ, ಬಳಿಕ ದ.ಕ.ಜಿಲ್ಲೆಗೆ ಸೇರಿದ್ದ ಕಾಸರಗೋಡು ತಾಲೂಕಿನ ನೀಲೇಶ್ವರದಲ್ಲಿ. ಅಲ್ಲಿನ ರಾಜಾಸ್ ಹೈಸ್ಕೂಲ್ನಲ್ಲಿ 9ರ ವರೆಗೆ ಕಲಿತು ಮಂಗಳೂರಿನಲ್ಲಿ ಪತ್ರಿಕಾಲಯ ಸೇರಿದ್ದರು. ಮುಂದೆ ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಲ್ಲಿ ಸಾಹಿತ್ಯ ಕೃಷಿ. ಸುಳ್ಯ ಹಾಗೂ ನೀಲೇಶ್ವರದಲ್ಲಿ ಶಿವರಾಯರ ಮನೆ ಕುರುಹುಗಳಿಲ್ಲ.
ಪ್ರತಿ ವರ್ಷ ನಿರಂಜನ ಪ್ರಶಸ್ತಿ ರಾಜ್ಯ ಸರ್ಕಾರ ನಿರಂಜನರನ್ನು ನೆನಪಿಸದಿದ್ದರೂ ಪುತ್ತೂರಿನ ವಿವೇಕಾನಂದ ಕಾಲೇಜಿನ ಡಾ. ಶಿವರಾಮ ಕಾರಂತ ಅಧ್ಯಯನ ಕೇಂದ್ರ ಕಳೆದ 13 ವರ್ಷದಿಂದ ಪ್ರತಿ ವರ್ಷ ‘ನಿರಂಜನ’ ಹೆಸರಿನಲ್ಲಿ ಸಾಹಿತ್ಯ ಕಾರ್ಯಕ್ರಮ ನಡೆಸಿ ಪ್ರಶಸ್ತಿ ಪ್ರದಾನ ಮಾಡುತ್ತಿದೆ. ನಿರಂಜನ ನೆನಪಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಸುತ್ತಿದೆ.
19 Nov 2013
0 ಪ್ರತಿಕ್ರಿಯೆಗಳು