ಶಂಕರಾನಂದ ಹೆಬ್ಬಾಳ
ನ್ಯಾಯದೇವತೆಗೆ ಕಪ್ಪು ಬಟ್ಟೆ ಕಟ್ಟಿ
ಅನ್ಯಾಯಕೆ ಜಯ ದೊರಕಿಸಿ ಕೊಟ್ಟು
ಕೊಲೆ, ಮೋಸ, ಸುಲಿಗೆ, ದಬ್ಬಾಳಿಕೆಗೆ
ಬೆಲೆ ಕೊಟ್ಟಿರುವೆ
ದೇವರೆ,
ನಿನ್ನ ದಾರಿ ಸರಿಯಿಲ್ಲ..?
ಉಗ್ರರ ಅಟ್ಟಹಾಸ ಭುಗಿಲೆದ್ದು,
ಕಾಣದ ಕೀಟದ ತಾಪತ್ರಯ
ಕಾರ್ಮೋಡದಂತೆ ಮುತ್ತುತಿದೆ,
ಸುಳಿಯಲಿ ಸಿಕ್ಕ ಮೀನಿನಂತೆ
ನರಳಾಡಿ,
ಜೀವನಕೆ ಮುಕ್ತಿಕೊಡದ
ದೇವರೇ,
ನಿನ್ನ ದಾರಿ ಸರಿಯಿಲ್ಲ….?
ಹಿಟ್ಲರ,ಮುಸಲೋನಿಯಂತವರು
ಸಾರ್ವಭೌಮರಾಗಿದ್ದಾರೆ,
ಬಡವರ ಶೋಷಿಸುತ ಶ್ರೀಮಂತರು
ಅಟ್ಟಹಾಸದಿ ಮೆರೆದು
ದುರುಳತನ ದರ್ಪವನು
ತೋರುತಿರಲು,
ದೇವರೆ,
ನಿನ್ನ ದಾರಿ ಸರಿಯಿಲ್ಲ.?
ಜಾತಿ ಮತಗಳ ಹೆಸರಿನಲ್ಲಿ
ಕೋಮು ಗಲಭೆ,
ಗುಡಿ,ಚರ್ಚು ,ಮಸದಿಗಳ
ಹಾಳುಗೆಡವಿ ಧರ್ಮಾಂಧರಾಗಿ
ಮತಿಗೆ ತುಕ್ಕುಹಿಡಿದಿರಲು
ದೇವರೆ,
ನಿನ್ನ ದಾರಿ ಸರಿಯಿಲ್ಲ…?
ಸ್ತ್ರೀಯರಿಗೆ ತಗಹುಗಳನ್ನಿಟ್ಟು
ಪುರುಷರಿಗೆ ಸ್ವತಂತ್ರದ ಗರಿಕಟ್ಟಿ
ಮೆರೆಯಲು ಬಿಟ್ಟೆ,
ಅನಾಚಾರವು ದಾಂಗುಡಿಯಿಟ್ಟಿದೆ,
ಕ್ಷೀಪ್ರಮಾರ್ಗದಲಿ ಗೋಸುಂಬೆಯಂತೆ
ಮನಬದಲಿಸುವ
ಹಾದಿಯ ತೋರಿಸಲು
ದೇವರೆ,
ನಿನ್ನ ದಾರಿ ಸರಿಯಿಲ್ಲ..?
ವೇದ ಪುರಾಣಗಳ ಕಟ್ಟಿಟ್ಟು
ಬೂಟಾಟಿಕೆಯ ಡಂಭಾಚಾರಿ
ಕೃತ್ಯಗಳ ಎಸಗುವ ದುರ್ಮಾರ್ಗಿಗಳ
ಇಂಬು ಕೊಡುವ
ದೇವರೆ,
ನಿನ್ನ ದಾರಿ ಸರಿಯಿಲ್ಲ..?
0 ಪ್ರತಿಕ್ರಿಯೆಗಳು