ತಮ್ಮಣ್ಣ ಬೀಗಾರ
ಬಾಲ್ಯವೇ ಹಾಗೆ. ಯಾವುದೋ ಕೆಲಸ ಮಾಡುತ್ತೇವೆ ಎಂದು ಹೊರಡುವುದು… ಆ ಕೆಲಸ ಮಾಡುವುದನ್ನು ಮರೆತು ಆಟಕ್ಕೆ ಇಳಿಯುವುದು, ಬಾಲಿನ ಕುರಿತಾಗಿಯೋ ಅಥವಾ ಯಾರು ಮೊದಲು ಆಟವಾಡುವುದು ಎಂಬುದಾಗಿಯೋ ತಕರಾರು ಮಾಡಿಕೊಂಡು ಸಿಟ್ಟಾಗುವುದು, ಸ್ವಲ್ಪ ಹೊತ್ತಿನಲ್ಲಿಯೇ ಇದನ್ನೆಲ್ಲಾ ಮರೆತು ಇನ್ಯಾವುದೋ ಆಕರ್ಷಣೆಯತ್ತ ಹೊರಡುವುದು ಇದೆಲ್ಲ ಸಹಜ ಸಂಗತಿಗಳು.
ಅಂತಹ ಬಾಲ್ಯದ ಸ್ವಭಾವಗಳನ್ನು, ಅಲ್ಲಿನ ಸಂತಸದ ಕ್ಷಣಗಳನ್ನು, ತಪ್ಪಿನಿಂದಾಗುವ ಅನಾಹುತಗಳನ್ನು ಹಾಗೂ ಮಿತಿಯಿಲ್ಲದ ಕಲ್ಪನಾ ಲೋಕದ ವಿಸ್ತಾರವನ್ನೆಲ್ಲ ಈ ‘ನೀಲ ಕಿನ್ನರಿ ಮತ್ತು ಸೂತ್ರದ ಗೊಂಬೆ’ ಕಾದಂಬರಿ ಹೇಳುತ್ತ ಹೋಗುತ್ತದೆ.
ಇದೊಂದು ಜಾನಪದ ಮಾದರಿಯ ಕಥೆಯಾದರೂ ಕಥೆಯ ತುಂಬೆಲ್ಲ ಬರುವ ಚಿತ್ರಗಳು ತುಂಬಾ ಉದ್ದ ಅಗಲಕ್ಕೆ ನಮ್ಮನ್ನು ಸುತ್ತಾಡಿಸುತ್ತವೆ ಅನಿಸುತ್ತದೆ. ಮರದ ಕೊರಡೊಂದು ಮಾತಾಡುವುದೇ ಕುತೂಹಲ. ಅದು ಸೂತ್ರದ ಗೊಂಬೆ ಆಗುವುದು, ಜೀವ ಪಡೆಯುವುದು, ಗೊಂಬೆಯ ತಂದೆ ಕುದುರೆ ಬಾಲದ ಗಪ್ಪು, ಗೊಂಬೆ ಸೊಣ್ಣಪ್ಪನನ್ನು ಸರಿಪಡಿಸಲು ಸತತ ಪ್ರಯತ್ನಿಸುವ ನೀಲ ಕಿನ್ನರಿ, ಬುದ್ಧಿ ಹೇಳುವ ಕುದುರೆ ಹುಳು ಎಲ್ಲ ಆಪ್ತವಾಗುತ್ತವೆ.
ಪ್ರತಿಸಲ ತುಂಟತನ ಹಾಗೂ ಯಾರಯಾರದೋ ಮಾತಿನ ಆಕರ್ಷಣೆಗೆ ಒಳಗಾಗಿ ದಾರಿ ತಪ್ಪುವ ಸೂತ್ರದ ಗೊಂಬೆ, ಅದನ್ನು ಸರಿಪಡಿಸಲು ಪ್ರಯತ್ನಿಸುವ ನೀಲ ಕಿನ್ನರಿಯ ಪ್ರಯತ್ನ ಹಾಗೂ ಕಷ್ಟ… ಕೊನೆಯಲ್ಲಿ ಗೊಂಬೆ ತನ್ನ ಒಳಿತಿನ ನಡೆಯಿಂದಾಗಿ ನಿಜವಾದ ಬಾಲಕನಾಗುವುದು… ಅಪ್ಪನೂ ಪ್ರಾಯಕ್ಕೆ ಮರಳಿ ಒಟ್ಟಾಗಿ ಇರುವುದು ಎಲ್ಲಾ ಇದೆ.
ಸುಳ್ಳು ಹೇಳಿದಾಗ ಮೂಗು ಉದ್ದ ಆಗುವುದು, ಹಸಿರು ಹಾವು ಹಾಗೂ ಕಪ್ಪು ಬೆಕ್ಕಿನ ಬಾಲದ ಬಾರಕೋಲು, ಬೆಂಕಿ ನವಾಬ, ಚಿನ್ನದ ನಾಣ್ಯದ ಅವಾಂತರ, ಕುಂಟ ನರಿ ಕುರುಡ ಬೆಕ್ಕು, ಪೆದ್ದರ ಪೇಟೆ, ದುಡ್ಡಿನ ಮರ, ತಿಮಿಂಗಿಲದ ಹೊಟ್ಟೆ ಸೇರುವುದು, ಪುಟಾಣಿ ಮೀನಿನ ಸಹಾಯ ಎಲ್ಲ ಏನೇನು ಎಂಬುದಕ್ಕೆ ಕಾದಂಬರಿ ಓದಿಯೇ ಖುಷಿಪಡಬೇಕು.
ಇಂಗ್ಲೀಷಿನಿಂದ ಅನುವಾದಿತ ಈ ಕಾದಂಬರಿ ಕಲ್ಪನಾ ಲೋಕದ ಹರವಿಗೆ ಕೊಂಡೊಯ್ದು ಅಲ್ಲಿಯ ಚಿತ್ರಗಳೊಂದಿಗೆ ಸಂವಾದ ನಡೆಸುವ ಖುಷಿಯನ್ನು ನೀಡುತ್ತದೆ ಎಂದು ನಾನು ಅಷ್ಟೇ ಖುಷಿಯಿಂದ ಹೇಳುತ್ತೇನೆ. ಇದನ್ನು ಕನ್ನಡಕ್ಕೆ ತಂದ ರಜನಿ ನರಹಳ್ಳಿ ಅವರು ವಿಸ್ತಾರವಾದ ಓದಿನ ಹಿನ್ನೆಲೆ ಉಳ್ಳವರು. ಮಕ್ಕಳಿಗಾಗಿಯೂ ಬರೆದವರು. ಅವರು ಕನ್ನಡದ ಮಕ್ಕಳಿಗೆ ತುಂಬಾ ಆಪ್ತವಾಗುವಂತೆ ಅನುವಾದಿಸಿದ್ದಾರೆ. ಆನಂದ ಪಾಟೀಲರ ರೇಖಾ ಚಿತ್ರಗಳು ಆಕರ್ಷಕವಾಗಿವೆ.
ಮುಖಪುಟ ವಿನ್ಯಾಸ ಸಂತೋಷ ಸಸಿಹಿತ್ಲು ಚನ್ನಾಗಿ ಮಾಡಿದ್ದಾರೆ. ಎಂದಿನಂತೆ ಅಭಿನವದವರು ಉತ್ತಮ ವಿನ್ಯಾಸ ಮುದ್ರಣದೊಂದಿಗೆ ಕೃತಿ ನೀಡಿದ್ದಾರೆ. ಲೇಖಕರಿಗೆ, ಪ್ರಕಟಿಸಿದ ಅಭಿನವದವರಿಗೆ ವಂದನೆಗಳನ್ನು ಹೇಳುತ್ತಾ ಕನ್ನಡದ ಮಕ್ಕಳ ಕೈಗೆ ಈ ಕೃತಿ ತಲುಪಿ ಅವರ ಖುಷಿ ಹೆಚ್ಚಲಿ ಎಂದು ಆಶಿಸುತ್ತೇನೆ.
0 ಪ್ರತಿಕ್ರಿಯೆಗಳು