ಸಿರೂರು ರೆಡ್ಡಿ
1982ರಲ್ಲಿ ಲಂಕೇಶರ ಕಚೇರಿಯಲ್ಲಿ ಸಿಕ್ಕ ಗೌಡರು ನೆನ್ನೆ ತೀರಿಕೊಂಡಿದ್ದಾರೆ. ಇವರನ್ನ ನಾವು ಡಾಕ್ ಅಥವಾ ಡಾಕ್ಟ್ರೇ ಎಂದು ಪ್ರೀತಿಯಿಂದ ಕರೆಯುತ್ತಿದ್ದೆವು. ಲಂಕೇಶರಿಗೆ ಆತ್ಮೀಯ ಸ್ನೇಹಿತರು ಕಡಿಮೆ. ಆ ವಿರಳತೆಯಲ್ಲೂ ಗೌಡರನ್ನ ಲಂಕೇಶರು ತುಂಬಾನೇ ಇಷ್ಟಪಡುತ್ತಿದ್ದರು.
ನಮ್ಮ ಡಾಕ್ ಒಂಥರಾ ಇಂಗ್ಲಿಷ್ ಗೌಡರಾಗಿದ್ದರು. ಬೆಂಗಳೂರು ಲಿಟಲ್ ಥಿಯೇಟರ್ ಅನ್ನೋ ನಾಟಕದ ಗುಂಪು ಕಟ್ಟಿದ ಗುಂಪಿನ ಮೊದಲಿಗರು. ಅವರು ಮತ್ತು ಅವರ ಆಪ್ತ ಮಿತ್ರ ಬಸವರಾಜ್ ಅರಸು ಅನ್ನೋ ಮತ್ತೊಬ್ಬ ಮೇಧಾವಿಗಳ ಜೊತೆ ನಾನು ಒಂದು ದಶಕ ಒಡನಾಡಿದ ನೆನಪುಗಳು ಈಗಲೂ ಕಾಡುತ್ತವೆ.
ತುಂಬು ಜೀವನ ಸವೆಸಿ ನಮ್ಮನಗಲಿದ ಡಾಕ್ ಮತ್ತು ನಾನು ಲಂಕೇಶರ ಕಚೇರಿಯಲ್ಲಿ ನಡೆಯುತ್ತಿದ್ದ ಇಸ್ಪೀಟ್ ಆಟದ ಮೂಲ ರೂವಾರಿಗಳು. 1982ರ ಆರಂಭಿಕ ದಿನಗಳ ಒಂದು ಶನಿವಾರದ ಸಂಜೆ ಮೇಷ್ಟ್ರು, ನಾನು ಮತ್ತು ಗೌಡರು ಸಂಜೆಯ ಪಾನ ಗೋಷ್ಠಿಯಲ್ಲಿ ಹೀಗೇ ಜೂಜಿನ ಮನರಂಜನೆಯ ಆಯಾಮದ ಬಗ್ಗೆ ಮಾತನಾಡುತ್ತಾ ನಾವೇಕೆ ವಾರಾಂತ್ಯದಲ್ಲಿ ಇಸ್ಪೀಟು ಆಡಬಾರದು ಅನ್ನೋ ಪ್ರಶ್ನೆಗೆ ಉತ್ತರಾವಾಗಿ ಮುಂದಿನ ಶನಿವಾರವೇ ಇಸ್ಪೀಟು ಕ್ಲಬ್ ಆರಂಭಿಸಿದ್ದು ಈಗ ಇತಿಹಾಸ. ಇತಿಹಾಸ ಯಾಕಂದ್ರೆ, ಮೊದಮೊದಲು ಮೇಷ್ಟ್ರು, ನಾನು ಮತ್ತು ಗೌಡರು ಇದ್ದ ಆ ಕ್ಲಬ್ಬಿಗೆ ಬೇಗನೇ ಸೇರಿಕೊಂಡವರು ಘಟಾನುಘಟಿ ಸಾಹಿತಿಗಳು ಮತ್ತು ಮೇಷ್ಟ್ರ ಆಪ್ತ ವಲಯದ ಶಿಷ್ಯ ವರ್ಗ. ಮಧ್ತಾಹ್ನ ಒಮ್ಮೊಮ್ಮೆ ಮೇಷ್ಟ್ರು ಮತ್ತು ನಾನು ಇಬ್ಬರೇ ಶುರು ಹಚ್ಚಿಕೊಳ್ಳುತ್ತಿದ್ದ ಆಟಕ್ಕೆ ಗೌಡರು ಬರೋರು. ನಂತರ ಕವಿ ರಾಮಚಂದ್ರ ಶರ್ಮ ಮತ್ತು ಹಿರಿಯರಾದ ಮೈಸೂರು ಮಠ. ತರುವಾಯ ಮೇಷ್ಟ್ರ ಅಳಿಯ ಚಿದಾನಂದ ರಾಜಘಟ್ಟ. ಅವನು ಒಂದು ಕಡೆ ಇಸ್ಪೀಟು ಇನ್ನೊಂದು ಕಡೆ ಇಂಗ್ಲಿಷ್ ಪದಬಂಧ ಮತ್ತೆ ಸಿಗರೇಟು!! ಆಗಾಗ ಗೌರಿಯ ಆಗಮನ. ಗೌರಿ ಇಸ್ಪೀಟೆಲೆ ಕೈಗೆತ್ತಿಕೊಂಡು ಮತ್ತೊಂದು ಎಲೆ ಎಸೆಯೋದರಲ್ಲಿ ಮೈಸೂರ ಮಠರನ್ನೂ ಮೀರಿಸುಯುತ್ತಿದ್ದಳು. ಆ ಜೂಜಾಟಕ್ಕೆ ಶೂದ್ರ, ಅಗ್ರಹಾರ, ಮುಕುಂದರಾಜ, ಅಪರೂಪಕ್ಕೆ ಡಿ. ಆರ್. ನಾಗರಾಜ್ ….. ಎಂತಹ ಅದ್ಭುತ ಅನುಭವ ಅದು. ಅಲ್ಲಿ ಜೂಜಿನ ಹೊರತಾಗಿ ನಡೆಯೋ ಸಾಹಿತ್ಯದ ಚರ್ಚೆ, ತಮಾಷೆ, ಹರಟೆ …. ಆ ದಿನಗಳು ಮತ್ತೆ ಬರಬಾರದೇ?
ಇಷ್ಟೆಲ್ಲ ನೆನಪುಗಳನ್ನ ಕೆದಕಲೇ ನಮ್ಮನ್ನಗಲಿದ ಡಾಕ್ಟರ್ ಶ್ರೀನಿವಾಸ ಗೌಡರಿಗೆ ಶ್ರದ್ಧಾನಂಜಲಿ.
0 ಪ್ರತಿಕ್ರಿಯೆಗಳು