ಜಿ ಪಿ ಬಸವರಾಜು
ತೇಲಿಬಂದ ಹಾಡಿನಲ್ಲಿ
ಧೂಳು, ಡೀಸೆಲ್ ವಾಸನೆ
ಗಟಾರದ ನೂರೆಂಟು ನಾತ
ಅನಾಥ ಮಕ್ಕಳು ಹಾಡುತ್ತಾರೆ
ರಾಗ ತಾಳಬದ್ಧವಾಗಿ
ಕಲಿಸಿದಾತನ ಕೋಲ ನೆರಳಲ್ಲಿ
ಹಸಿದ ಹೊಟ್ಟೆಗೆ ತಲೆಸುತ್ತು
ಮುಗಿಯುವುದಿಲ್ಲ ಬೆಳಗಿನ
ಪ್ರೇಯರ್ ಎಷ್ಟೆ ಸಿಟ್ಟಾದರೂ
ಉರಿ ಉರಿಗಣ್ಣ ಸೂರ್ಯದೇವ
ಹಾಡು ಗೊರಗೊರ, ಮೈಕು
ರಿಪೇರಿಯವ ಕೈಕೊಟ್ಟಿದ್ದಾನೆ
ಸಮಯ ನೋಡಿ, ಹಾಡಲೇ
ಬೇಕು ಸಮಯಕ್ಕೆ ಸರಿಯಾಗಿ
ಕಾಯುತ್ತಲೇ ಇದೆ ನಾಡು
ಹಂದಿಗಳ ಅಟ್ಟಿಸಿಕೊಂಡು
ಓಡುತ್ತಿವೆ ಕಾವಲು ನಾಯಿ
ರಾತ್ರಿಯೆಲ್ಲ ಬೊಗಳಿದರೂ
ಬೆಳಗಾಗುವುದಿಲ್ಲ ಬೇಗ
ದೇಶ ಓಡುತ್ತಿದೆ ಮುಂದೆ
ಮುಂದೆ, ನಮ್ಮ ಬೌಲರ್ಗಳ
ವೇಗ ಸಾಲದು ಏನೇನೂ ವಿಶ್ವಕಪ್ಪಿಗೆ
ಎಲ್ಲ ಕ್ರಾಂತಿಗಳೂ ಮುಗಿದು
ಹೊದ್ದು ಮಲಗಿದ್ದಾರೆ ಜನ
ಬೆರ್ಚಪ್ಪಗಳು ನಗುತ್ತಿವೆ
ಹೊಲಗಳಲ್ಲಿ ಮನೆಮನೆಗಳ ಮೇಲೆ
ಮಹಾಸ್ಫೋಟಕ್ಕೆ ಕಾಯುತ್ತಿವೆ ಕಿವಿ
ಆಗುವುದು ಈಗ ಈ ಗಳಿಗೆಯಲ್ಲಿಯೇ
ಆದರೂ ಹಾಡಬೇಕು ಹಾಡು ಗೀತೆ
ಫರ್ಮಾನು ಬಂದಿದೆ ದಿಲ್ಲಿಯಿಂದ
0 ಪ್ರತಿಕ್ರಿಯೆಗಳು