ಹೇರಂಬ ಹೆಗಡೆ ಕಿಲಾರ
ಶ್ರೀ ಗಜಾನನ ಶರ್ಮ ಅವರ ಪುನರ್ವಸು ಉತ್ತಮ ಕೃತಿ. ಅದನ್ನೋದಿದ ನಾನು ಅವರು ಇನ್ನೊಂದು ಕಾದಂಬರಿ ಚೆನ್ನಭೈರಾದೇವಿ ಬರೆದಿದ್ದಾರೆಂದು ತಿಳಿದ ಮೇಲೆ ಅದನ್ನೇ ಕಾಯುತ್ತಿದ್ದೆ. ಮಗಳು ಸಹನಾಳ ಕೃಪೆಯಿಂದ ನಮ್ಮ ಮನೆಗೇ ಬರುವಂತಾಯಿತು.
ಈ ಐತಿಹಾಸಿಕ ಕಾದಂಬರಿ ಬರೆಯಬೇಕಾದರೆ, ಎಷ್ಟು ವಿಷಯ ಸಂಗ್ರಹ ಮಾಡಿರಬೇಕು. ಅವರ ಪ್ರಯತ್ನಕ್ಕೆ ತಲೆದೂಗಲೇಬೇಕು.
ಚೆನ್ನಭೈರಾದೇವಿ ರಾಜ್ಯ ವಿಸ್ತರಿಸುವ ಆಕಾಂಕ್ಷಿಯಾಗಿರಲಿಲ್ಲ. ಹಾಗಂತ ಯಾರಿಗೂ ಹೆದರಲಿಲ್ಲ. ಪ್ರಜೆಗಳ ಹಿತರಕ್ಷಣೆಯೇ ಗುರಿಯಾಗಿತ್ತು. ಸಣ್ಣ ವಯಸ್ಸಿಗೇ ನಗಿರೆಯ ರಾಣಿಯಾದರೂ ಅವಳ ಕಿರೀಟ ಧಾರಣೋತ್ಸವ, ರಾಜ್ಯಾಭಿಷೇಕ ನಡೆದಿದ್ದು ಕೆಲವು ವರ್ಷಗಳ ನಂತರ. ಆ ಕಾರ್ಯಕ್ರಮದ ತಯಾರಿ, ಸಡಗರವನ್ನು ಶರ್ಮ ಅವರು ಓದುಗರ ಕಲ್ಪನೆ ಮೀರಿ ವಿವರಿಸಿದ್ದಾರೆ. ಅರಮನೆಯಲ್ಲಿ ನಾವೂ ಭಾಗವಹಿಸಿದಂತೆ ಅನಿಸುತ್ತದೆ.
ಪರದೇಶದೊಡನೆ ವ್ಯಾಪಾರ, ವ್ಯವಹಾರ ವಿಸ್ತರಿಸಿಕೊಂಡು ರಾಜ್ಯ ಮತ್ತು ಪ್ರಜೆಗಳು ಆರ್ಥಿಕವಾಗಿ ಪ್ರಬಲರಾಗಲು ತುಂಬಾ ಶ್ರಮ ಪಟ್ಟಿದ್ದಾಳೆ. ಗೌರಿ ಎಂಬ ಸಾಮಾನ್ಯ ಹುಡುಗಿಯನ್ನು ತನ್ನ ಜೊತೆಗೇ ಇಟ್ಟುಕೊಂಡು ಅವಳನ್ನು ತನ್ನ ಸ್ವಂತ ಬೇಹುಗಾರ್ತಿಯನ್ನಾಗಿಟ್ಟುಕೊಂಡಿದ್ದಲ್ಲದೇ ಕೊನೆಯ ತನಕ ಶಬಲೆಯೆಂಬ ಹೆಸರಿನಲ್ಲಿ ಜೊತೆಯಾಗಿದ್ದಳು.
ಅದ್ಭುತ ಟ್ರಾಜೆಡಿ. ಓದು ಮುಗಿದ ನಂತರ ಬಹಳ ಕಾಲದವರೆಗೆ ಅದೇ ಗುಂಗಿನಲ್ಲಿರುವಂತಾಗುತ್ತದೆ. ಇತ್ತೀಚೆಗೆ ಓದಿದ ಪುಸ್ತಕಗಳಲ್ಲಿ ಗಜಾನನ ಶರ್ಮರ ಈ ಕೃತಿ ತುಂಬಾ ಚೆನ್ನಾಗಿದೆ.
0 ಪ್ರತಿಕ್ರಿಯೆಗಳು