ಆರ್ ಜಿ ಹಳ್ಳಿ ನಾಗರಾಜ
ಗಾಂಧೀ ಅಜ್ಜ,
ನಿನಗೆ ಬರೀ ‘ಗಾಂಧಿ’ ಅಂತ ಕರೆಯೋಕೆ ನಂಗಿಷ್ಟ ಇಲ್ಲ! ಕಾರಣ ಕೇಳಿ ನನ್ನ ಮನಸು ಕೆದಕು ಬ್ಯಾಡ ಅಜ್ಜ.
ನಾನು ನಿನ್ನ ಬಗ್ಗೆ ಯಾವ ಕತೆ, ಕವನ ಬರೆದಿಲ್ಲ.
ಅದೆಲ್ಲಾ ಬರಿಯೋಕೆ ನನಗೆ ವಸ್ತುನೇ ಸಿಕ್ಕಿಲ್ಲ!
ಹುಡುಕಾಟ ಕೆದಕಾಟ
ಅರಚಾಟ ಕೆಸರೆರಚಾಟದ ನಡುವೆ ನಾನೇ ಸೊನ್ನೆ!
ಅವತ್ತು, ಪಾಟೀಚೀಲ ಹೊತ್ತು ಊರ ಮುಂದಿನ
ಹನುಪ್ಪನಗುಡಿ ಸಾಲಿಲಿ
“ಅಜ್ಜನ ಕೋಲಿದು ನನ್ನಯ ಕುದುರೆ…”
ಅಂತ ಹೇಳಿದ್ದು ನಿಂಗೇನಾ? ಗೊತ್ತಿಲ್ಲ ಬಿಡಜ್ಜ…
ಅದ್ಕೇ ನಿನ್ನ ಬಗ್ಗೆ ನನಗೇನೂ ತಿಳಿದಿಲ್ಲ ಅಂಬೋಣ! ತಿಳಿದಿದ್ದರೆ ನಾನೂ ನಿನ್ನ ಬದುಕು ಅಪ್ಪುತ್ತಿದ್ದೆ.
ಆಗ, ನಿನ್ನಂಗೇ ಬರೀ ಮೈಲಿ ತಿರುಗುತ್ತಿದ್ದೆ.
ನೋಡು ಅಜ್ಜ, ಅವ್ರಿವ್ರು ತಾಕ್ಸಿದ ಬಿಸಿಗಾಳಿಗೆ
ನನಗೂ ಒಮ್ಮೊಮ್ಮೆ ಬೆತ್ತಲೆ ಓಡೋ ಆಸೆ.
ಅಜ್ಜ,
ನಿನ್ನ ಸುಕ್ಕುಗಟ್ಟಿದ ಬೆತ್ತಲೆ ದೇಹ ನೋಡಿ
ಎಲುಬು ಮೂಳೆ ಅಸ್ತಿಪಂಜರ ಕಂಡು ವಿದೇಶೀಯನೊಬ್ಬ ನಕ್ಕನಂತೆ!
ಏಕೆ ಗೊತ್ತಾ? ನಮಗಿಲ್ಲಿ ಮೈತುಂಬಾ ಹೊದಿಯಲು ಬಟ್ಟೆ ಇಲ್ವಂತೆ,
ತಿನ್ನಲೂ ಅನ್ನ ಸಿಕ್ತಿಲ್ವಂತೆ
ಇನ್ನೂ … ಏನೇನೋ ಇಲ್ವಂತೆ!
ಇಲ್ಲಿ, ಈ ಇಂಡಿಯಾದಲ್ಲಿ.
ಅದ್ಕೇ ಅಜ್ಜ, ನಿನ್ನ ಬಡಕಲು ದೇಹ ಕಂಡು ನಾನೂ ಅನುಕಂಪ ಸೂಚಿಸ್ತೀನಿ.
ಅಜ್ಜ,
ನನಗೂ ಹಂಗಿನ ಬದುಕು ಅಪ್ಪೋ ಆಸೆಯಿಲ್ಲ,
ನೀ ತಿಳಿದಿದ್ದ ಹಲವು ಸ್ವಾತಂತ್ರ್ಯದ ಅರ್ಥ ನಂಗಿನ್ನೂ ಗೊತ್ತಿಲ್ಲ.
ಏಕಂದ್ರೆ, ಹಾಗೆಂದರೇನು ಅನ್ನೋದೇ ಇನ್ನೂ ತಿಳಿದಿಲ್ಲ.
ಅದೇ ಅಜ್ಜ,
ನಿನ್ನ ಆದರ್ಶದ ಬದುಕು ನಮಗೆ ಎಟುಕ್ತ ಇಲ್ಲ
ನಿನ್ನ ಕನಸಿನ ರಾಮರಾಜ್ಯ ಎಂದೂ ಆಗೊಲ್ಲ
ನಿನ್ನ ತಿಳ್ಕೊಳ್ಳೋ ಹೊತ್ಗೆ ನಾವಿಲ್ಲೇ ಇರೊಲ್ಲ ಅಲ್ವ ಅಜ್ಜ ?
೧೯೭೯
0 ಪ್ರತಿಕ್ರಿಯೆಗಳು