ಸುಷ್ಮ
ಕೋವಿ ಹಿಡಿದು ತನ್ನ ಶತೃವನ್ನು ಮುಗಿಸಲು ಹೊರಟ ಮುದುಕನೊಬ್ಬನಿಗೆ ಕಣ್ಣನ ದೃಷ್ಟಿಯೇ ಸರಿಯಿಲ್ಲ. ಶತೃವನ್ನು ಮುಗಿಸಲು ದೃಷ್ಟಿ ಸರಿಯಾಗಬೇಕು, ಹಾಗಾಗಿ ಆತನಿಗೊಂದು ಕನ್ನಡಕ ಬೇಕು. ಮೊಮ್ಮಗನೊಂದಿಗೆ ಕಣ ್ಣನ ವೈದ್ಯನ ಬಳಿ ಬರುವ ಮುದುಕ ತನ್ನ ದೃಷ್ಟಿ ಸರಿಪಡಿಸಿಕೊಂಡನೇ ? ನಿಜಕ್ಕೂ ಆತನ ಸಮಸ್ಯೆ ಕನ್ನಡಕದ್ದೇ? ಕನ್ನಡಕ ಆತನಿಗೆ ಬೇಕಿತ್ತೇ, ಆತನ ಶತೃವನ್ನು ಮುಗಿಸಲು ಬೇಕಾದ ಕೋವಿಗೇ ಕನ್ನಡಕ ಬೇಕಿತ್ತೇ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಲು ,ನೋಡಿ ನಾಟಕ ‘ಕೋವಿಗೊಂದು ಕನ್ನಡಕ’ !
ರೂಪಾಂತರ ಮತ್ತು ನಿರ್ದೇಶನ : ವೆಂಕಟೇಶ್ ಪ್ರಸಾದ್
ರಂಗ ಶಾಸ್ತ್ರ : ನಿಶಾ ಅಬ್ದುಲ್ಲಾ
ರಂಗ ವಿನ್ಯಾಸ: ಶ್ರೀಧರ್ ಮೂರ್ತಿ
ಸಂಗೀತ ಸಂಯೋಜನೆ : ಉತ್ಥಾನ ಭಾರಿಘಾಟ್
ಬೆಳಕು ವಿನ್ಯಾಸ : ವಿನಯ್ ಚಂದ್ರ ಪಿ.
ನಿರ್ಮಾಣ ನಿರ್ವಹಣೆ: ಅರುಣ್ ಡಿ.ಟಿ, ಸುಷ್ಮ
ರಂಗದ ಮೇಲೆ: ವಿಜಯ್ ಕುಲ್ಕರ್ಣಿ, ರಾಗ್ ಅರಸ್, ಪಣೀಶ್ ಪಿ.
ಭಿತ್ತಿಪತ್ರ ವಿನ್ಯಾಸ : ಸತೀಶ್ ಗಂಗಯ್ಯ
ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಪ್ರಸ್ತುತಿ
‘ಬೆಂಗಳೂರು ಥಿಯೇಟರ್ ಕಲೆಕ್ಟಿವ್’ ೨೦೧೫ ರಲ್ಲಿ ಚರ್ರಿ ತೋಟ ನಾಟಕದೊಂದಿಗೆ ರೂಪುಗೊಂಡ ರಂಗ ತಂಡ ‘ಬೆಂಗಳೂರು ಥಿಯೇಟರ್ ಕಲೆಕ್ಟಿವ್’.
ರಂಗ ಭೂಮಿಯಲ್ಲಿ ಹೊಸತನ್ನು ಹುಡುಕಿ ಹೋರಾಟ, ಸುಮಾರು ೨೫ ವರ್ಷ ಗಳ ಒಟ್ಟು ಅನುಭವವುಳ್ಳ ೩ ಗೆಳೆಯರ ಕನಸು, ಬೆಂಗಳೂರು ಥೀಯೇಟರ್ ಕಲೆಕ್ಟಿವ್, ರೂಪುಗೊಂಡಿದ್ದು ರಂಗ ಶಂಕರದ ಯುವ ನಾಟಕೋತ್ಸವದಲ್ಲಿ ವೆಂಕಟೇಶ್ ಪ್ರಸಾದ್ ರವರಿಗೆ ನಾಟಕ ನಿರ್ದೇಶಿಸಲು ಅವಕಾಶ ದೊರೆತಾಗ.
ಜಾಗತಿಕ ರಂಗಭೂಮಿಯಲ್ಲಿ ನಡೆಯುತ್ತಿರುವ ಹೊಸ ಪ್ರಕಾರಗಳನ್ನು ಅಳವಡಿಸಿಕೊಳ್ಳುವ ಮತ್ತು ಕನ್ನಡದಲ್ಲಿ ಪ್ರಯೋಗಿಸುವ ಹಂಬಲದಿಂದ ಹುಟ್ಟಿದ ಬೆಂಗಳೂರು ಥೀಯೇಟರ್ ಕಲೆಕ್ಟಿವ್ ಗೆ ಈಗ ೫ ವರ್ಷ ತುಂಬಿದೆ. ಜನಪ್ರಿಯ ಮಾದರಿಯ ನಾಟಕಗಳು ಮತ್ತು ಮನರಂಜನೆ ಮಾತ್ರ ಕೇಂದ್ರ ವಾಗಿಟ್ಟುಕೊಂಡ ಪ್ರಯೋಗಗಳನ್ನು ಹೊರತುಪಡಿಸಿ, ಉತ್ತಮ ಗುಣಮಟ್ಟದ, ಸಮಾಜ ಮುಖಿಯಾದ ಗಂಭೀರ ವಿಷಯಗಳನ್ನೂ ಜನರಿಗೆ ತಲುಪಿಸುವ ಉದ್ದೇಶ ಬೆಂಗಳೂರು ಥೀಯೇಟರ್ ಕಲೆಕ್ಟಿವ್ ನದು.
ಬೆಂಗಳೂರು ಥೀಯೇಟರ್ ಕಲೆಕ್ಟಿವ್ ನ ಮೊದಲ ಪ್ರಯೋಗ, ಚರ್ರಿ ತೋಟ ೨೫ ಪ್ರದರ್ಶನಗಳನ್ನು ಕಂಡಿದ್ದು ಉತ್ತಮ ಪ್ರತಿಕ್ರಿಯೆ ಮತ್ತು ಜನಮನ್ನಣೆ ಪಡೆದಿದೆ. ವೆಂಕಟೇಶ್ ಪ್ರಸಾದ್ ರವರ ನಿರ್ದೇಶನದ ನಾಟಕ, ಮೈಸೂರು ರಂಗಾಯಣದ ಗ್ರೀಷ್ಮ ರಂಗೋತ್ಸವದಲ್ಲಿ, ಗುಲ್ಬರ್ಗಾ ರಂಗಾಯಣದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡಿದೆ.
ಪ್ರಕಾಶ್ ಬೆಳವಾಡಿಯವರ ನಿರ್ದೇಶನ ಬೆಕೆಟ್, ಬೆಂಗಳೂರು ಥೀಯೇಟರ್ ಕಲೆಕ್ಟಿವ್ ನ ಎರಡನೇ ಪ್ರಯತ್ನ. ಧರ್ಮ ಮತ್ತು ರಾಜಕಾರಣಗಳ ಒಳ ಸಂಬಂಧ ಮತ್ತು ಒಂದರಮೇಲೆ ಮತ್ತೊಂದು ಬೀರವ ಪರಿಣಾಮಗಳನ್ನು ಕುರಿತಾದ ನಾಟಕ. ಕನ್ನಡ ದಲ್ಲಿ ಬಹುತೇಕ ಪ್ರದರ್ಶನ ಗೊಳ್ಳದ ‘ಬೆಕೆಟ್’ ನಾಟಕದ ಪ್ರಯೋಗ ನಮ್ಮ ಹೆಮ್ಮೆಯಾಗಿದೆ.
ಮೂರನೇ ಪ್ರಯೋಗವಾಗಿ ಆಯ್ಕೆಮಾಡಿಕೊಂಡ ‘ಒಂದು ಪ್ರೀತಿಯ ಕಥೆ’ ನಾಟಕವು ೨೬ ಪ್ರದರ್ಶನಗಳನ್ನು ಕಂಡಿದ್ದು, ಹೆಣ್ಣೊಬ್ಬಳ ಸಲಿಂಗ ಪ್ರೇಮದ ಕುರಿತಾದ ನಾಟಕ. ಮರಾಠಿ ಮೂಲದ ವಿಜಯ್ ತೆಂಡೂಲ್ಕರ್ ರ ‘ಮಿತ್ರಾಚಿ ಗೋಷ್ಟ್’ ನಾಟಕವನ್ನು ಕನ್ನಡಕ್ಕೆ ಅನುವಾದ ಮತ್ತು ನಿರ್ದೇಶನ ವೆಂಕಟೇಶ್ ಪ್ರಸಾದ್ ರವರು ಮಾಡಿದ್ದಾರೆ. ಈ ವಿಷಯದ ಕುರಿತಾದ ಮೊದಲ ಕನ್ನಡ ನಾಟಕವಾಗಿದ್ದು ಇದರ ಬಗ್ಗೆ ಹೆಮ್ಮೆ ಇದ್ದರೂ, ನಮ್ಮ ನಡುವಿನಲ್ಲೇ ಬದುಕುವ ಒಂದು ಸಮುದಾಯ ಬಗೆಗಿನ ನಾಟಕ ಇನ್ನೂ ಕನ್ನಡದಲ್ಲಿ ಪ್ರಯೋಗಗೊಳ್ಳದಿರುವುದು ವಿಷಾದನೀಯ ಕೂಡ.
ನಿರ್ದೇಶಕರ ಬಗ್ಗೆ
ಕಳೆದ ೧೫ ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿರುವ ವೆಂಕಟೇಶ್ ಪ್ರಸಾದ್, ನಟರಾಗಿ, ಸಂಘಟಕರಾಗಿ ಮತ್ತು ಇತ್ತೀಚಿಗೆ ನಿರ್ದೇಶಕರಾಗಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಬಹುಪಾಲು ರಂಗಭೂಮಿಯ ಸಾಂಗತ್ಯವನ್ನು ಅಂದರೆ ಸುಮಾರು ೧೧ ವರ್ಷಗಳ ಕಾಲ ‘ಸಮುದಾಯ’ ಸಂಘಟನೆ ಜೊತೆ ಗುರುತಿಸಿಕೊಂಡ ವೆಂಕಟೇಶ್ ಪ್ರಸಾದ್, ರಂಗಭೂಮಿಯ ಮತ್ತು ಸಂಘಟನೆಯ ಪಾಠಗಳನ್ನು ಕಲಿತಿದ್ದು ಸಮುದಾಯದಲ್ಲಿ. ರಂಗ ಶಂಕರದೊಂದಿಗೆ ಕಳೆದ ೭ ವರ್ಷಗಳಿಂದ ಹಲವು ಪಾತ್ರಗಳಲ್ಲಿ ತೊಡಗಿಸಿಕೊಂಡ ಇವರು. ರಂಗ ಶಂಕರದ ಹಲವು ನಾಟಕಗಳ ನಿರ್ಮಾಣ ನಿರ್ವಹಣೆ, ಸಹ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಅಭಿಷೇಕ್ ಮಜುಂದಾರ್, ಮೋಹಿತ್ ತಕಾಲ್ಕರ್, ಸುರೇಂದ್ರನಾಥ ಎಸ್. ಮುಂತಾದ ಹೆಸರಾಂತ ನಿರ್ದೇಶಕರೊಂದಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.
೨೦೧೫ ರಲ್ಲಿ ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಎಂಬ ರಂಗ ಸಂಘಟನೆಯ ರೂವಾರಿಯಾದ ಇವರು. ಆಂಟನ್ ಚೆಕಾವ್ರ ಚರ್ರಿ ತೋಟ, ವಿಜಯ್ ಟೆಂಡೂಲ್ಕರ್ ರ ಮಿತ್ರಾಚಿ ಗೋಷ್ಟ್ ಮತ್ತು ಇತ್ತೀಚೆಗೆ, ಸ್ಲಾವೋಮೇರ್ ಮ್ರೋಜೆ಼ಕ್ ರ ಚಾರ್ಲಿ ನಾಟಕ ಆಧಾರಿತ ‘ಕೋವಿಗೊಂದು ಕನ್ನಡಕ’ ನಾಟಕವನ್ನು ನಿರ್ದೇಶಿಸಿದ್ದಾರೆ.
ಪ್ರಕಾಶ್ ಬೆಲ್ವಾಡಿ, ಎಂ.ಎಸ್. ಸತ್ಯು, ಅಭಿಷೇಕ್ ಮಜುಂದಾರ್, ಮೋಹಿತ್ ತಕಾಲ್ಕರ್, ಶ್ರೀಪಾದ ಭಟ್, ಪ್ರಮೋದ್ ಶಿಗ್ಗಾಂವ್, ಸ್ಯಾಮ್ಕುಟ್ಟಿ ಪಟ್ಟಂಕರಿ, ಸುರೇಂದ್ರನಾಥ ಎಸ್. ಮುಂತಾದ ನಿರ್ದೇಶಕರೊಂದಿಗೆ ಪ್ರಮುಖ ಪಾತ್ರಗಳಲ್ಲಿ ನಟನಾಗಿ ಕೆಲಸ ಮಾಡಿದ್ದಾರೆ. ಕನ್ನಡ ರಂಗ ಭೂಮಿಯ ಪ್ರಮುಖ ನಾಟಕಗಳಾದ ‘ಕುರಿ’, ‘ಜುಗಾರಿ ಕ್ರಾಸ್’, ‘ಪಂಪ ಭಾರತ’, ಕತ್ತಲೆ ದಾರಿ ದೂರ’, ‘ಸುತ್ತಿ ಕೊಂಡರೆ ಸರ್ಪ’, ‘ಗೋರಾ’ ‘ತುಘಲಕ್’ ಹೀಗೆ ಹಲವು ಮಹತ್ವದ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇವರು ಅಭಿನಯಿಸಿರುವ ‘ತುಘಲಕ್’ ಕನ್ನಡ ರಂಗಭೂಮಿಯಲ್ಲೇ ವಿಶಿಷ್ಟವಾದ ಸಂಚಲನ ಮೂಡಿಸಿದ ನಾಟಕ. ಇವರ ತುಘಲಕ್ ಪಾತ್ರ ನಿರ್ವಹಣೆ ಪ್ರೇಕ್ಷಕರಿಂದಲೂ, ವಿಮರ್ಶಕರಿಂದಲೂ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ನಟನೆ ಮತ್ತು ನಿರ್ದೇಶನಕ್ಕಷ್ಟೇ ಸೀಮಿತಗೊಳ್ಳದೇ, ವೆಂಕಟೇಶ್ ಪ್ರಸಾದ್ ರವರು, ಭಾಷಾಂತರ, ಪ್ರೊಡಕ್ಷನ್ ಮ್ಯಾನೇಜರ್, ಸ್ಟೇಜ್ ಮ್ಯಾನೇಜರ್ ಆಗಿ ರಂಗಭೂಮಿಯಲ್ಲಿ ವಿವಿಧ ಸಾಮರ್ಥ್ಯಗಳಲ್ಲಿ ಕೆಲಸ ಮಾಡಿದ್ದಾರೆ. ದಿ ಬ್ರಿಟಿಷ್ ಕೌನ್ಸಿಲ್ ನ ಮೂಲಕ ಎಡಿನ್ಬರ್ಗ್ ಇಂಟರ್ನ್ಯಾಷನಲ್ ಥಿಯೇಟರ್ ಫೆಸ್ಟಿವಲ್ -೨೦೧೫ ಕ್ಕೆ ಭಾರತವನ್ನು ಪ್ರತಿನಿಧಿಸುವ ೪ ಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದಾರೆ. ೨೦೧೫ ರಲ್ಲಿ ಸ್ಮಾರ್ಟ್ – ಆರ್ಟ್ ಮ್ಯಾನೇಜ್ಮೆಂಟ್ ಕಾರ್ಯಗಾರ, ೨೦೧೭ ರಲ್ಲಿ ರಂಗ ಶಂಕರರಿಂದ ಯುವ ನಿರ್ದೇಶಕರಿಗೆ ರಂಗ ನಿರ್ದೇಶನದ ಕಾರ್ಯಾಗಾರ ಮುಂತಾದ ವಿವಿಧ ಕಾರ್ಯಾಗಾರಗಳಿಗೆ ಪಾಲ್ಗೊಳ್ಳುವ ಮೂಲಕ ತಮ್ಮ ರಂಗ ಕೌಶಲ್ಯಗಳನ್ನು ಕ್ರಿಯಾಶೀಲವಾಗಿಟ್ಟುಕೊಂಡಿದ್ದಾರೆ.
೨೦೧೯ ರ ದಿ ಗೋಥೆ ಇನ್ ಸ್ಟಿಟ್ಯೂಟ್ ಆಯೋಜಿಸಿದ ರಂಗಶಾಸ್ತ್ರ ಕಾರ್ಯಾಗಾರಕ್ಕೆ ಭಾರತದಾದ್ಯಂತ ಆಯ್ಕೆಯಾದ ೨೦ ಜನರಲ್ಲಿ, ಕನ್ನಡ ರಂಗಭೂಮಿಯಿಂದ ಆಯ್ಕೆಯಾದ ಇವರು, ಕಾರ್ಯಾಗಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ರಂಗ ಭೂಮಿ ಅಷ್ಟೇ ಅಲ್ಲದೇ, ವೆಂಕಟೇಶ್ ಪ್ರಸಾದ್ ರವರು ಕಿರುತೆರೆ ಮತ್ತು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ.
0 ಪ್ರತಿಕ್ರಿಯೆಗಳು