ಶಿವಕುಮಾರ ಮಾವಲಿ
ಚಿತ್ರಗಳು: ರಾಹುಲ್ ಬೆಳಗಲಿ
ನಾವೆಲ್ಲರೂ ಮನೆಗಳಲ್ಲಿರುವುದೇ ಈಗ ದಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಅದನ್ನು ಪಾಲಿಸಲೇಬೇಕಂಬುದೂ ಸತ್ಯ.
ಆದರೆ …
ಈ ಸಂದರ್ಭದಲ್ಲಿ ಎಲ್ಲದಕ್ಕೂ ಕೇವಲ ಜನರನ್ನೇ ಹೊಣೆ ಮಾಡಲು ಸರ್ಕಾರ ಮತ್ತು ಮಾಧ್ಯಮಗಳು ತುದಿಗಾಲಲ್ಲಿದ್ದಂತಿದೆ. ಪೋಲೀಸರು ಹೊಡೆಯುತ್ತಿರುವ ಚಿತ್ರಗಳನ್ನು ನೋಡಿದಾಗ ಈ ತರಕಾರಿ ಮಾರುವವರು, ಹೂವು ಮಾರುವವರೇ ಕೊರೊನಾ ವೈರಸ್ ನ್ನು ತಂದು ಈ ದೇಶಕ್ಕೆ ಹರಡಿದವರಂತೆ ಭಾಸವಾಗುತ್ತದೆ.
ಕೊರೋನಾ ತಂದವರು ಯಾರು ? ವಿಮಾನಗಳಲ್ಲಿ ಓಡಡುವ ಜನ ಯಾರು ಮತ್ತು ಅವರ ಸಂಖ್ಯೆ ಎಷ್ಟು ? ಅದರಲ್ಲಿ ಮಕ್ಕಾ ಮದೀನ ಅಂದುಕೊಂಡ ಹೋದವರೆಷ್ಟು ? ಅವರನ್ನು ನಿಯಂತ್ರಿಸಲು , ಅವರನ್ನು ಪ್ರತ್ಯೇಕಗೊಳಿಸುವ ,ನಿಗಾ ವಹಿಸುವ ದೂರದೃಷ್ಟಿ ಯಾಕೆ ನಮ್ಮ ಯಾವ ನಾಯಕರುಗಳಿಗೂ ಬರಲೇ ಇಲ್ಲ ? ಹಾಗಾದರೆ ಯಾರೆಲ್ಲ ತುರ್ತಾಗಿ ಈ ವಿದೇಶಗಳಿಂದ ಬಂದು ನಮ್ಮ ದೇಶ ಸೇರಿಕೊಳ್ಳಲಿ ಎಂದು ಹರಡುತ್ತಿದ್ದರು ? ಬೀದಿಗೆ ಇಳಿದವನಿಗೆ ಹೊಡೆದಂತೆ ವಿಮಾನ ನಿಲ್ದಾಣದಲ್ಲಿ ಟೆಸ್ಟ್ ತಪ್ಪಿಸಿಕೊಂಡು ಓಡಲೆತ್ನಿಸಿದವರ ಮೇಲೂ ಹೀಗೆ ಲಾಟಿ ಬೀಸುತ್ತಿದ್ದರೆ ? ಇಡೀ ದೇಶವನ್ನು ಲಾಕ್ ಡೌನ್ ಮಾಡುವ ಅನಿವಾರ್ಯ ಸ್ಥಿತಿ ತಲುಪುವ ತನಕ ಕಾದದ್ದು ಯಾರಿಗೆ ?
ಈಗ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಆದರೆ ಇಂಥ ಸಮಯದಲ್ಲಿ ಟಿವಿ ಚಾನೆಲ್ ಗಳು ಕೇವಲ ಜಾಗೃತಿಯನ್ನು ಮಾತ್ರ ಮೂಡಿಸುತ್ತಿಲ್ಲ .ಜೊತೆಗೆ ಭಯ ಹುಟ್ಟಿಸುತ್ತ , ಪ್ರತಿ ಸಾಮಾನ್ಯ ಮನುಷ್ಯನನ್ನೂ ಅಪರಾಧಿ ಸ್ಥಾನದಲ್ಲಿ ಇರಿಸುವಂತೆ ಮಾಡುತ್ತಿರುವುದರಿಂದ ಇದನ್ನು ನೆನಪು ಮಾಡಿಕೊಳ್ಳ ಬೇಕಾಗುತ್ತದೆ. ಜೊತೆಗೆ ಅವರು ರೋಗದ ಲಕ್ಷಣಗಳು ಕಾಣಿಸಿಕೊಂಡರೂ ಭಯ ಪಡದೆ ತಕ್ಷಣ ಏನು ಮಾಡಬೇಕು ? ಇದರಿಂದ ಗುಣಮುಖರಾಗಲು ಪ್ರಯತ್ನ ಹೇಗೆ ನಡೆದಿದೆ ಎಂಬ ಮಾಹಿತಿಯನ್ನೂ ನೀಡುವ ಕಡೆ ಗಮನ ಕೊಡಬೇಕಲ್ಲವೆ ? ಅಲ್ಲದೆ , ಸಾವು , ತಿಥಿ, ಸಮಾಧಿ , ಸ್ಮಶಾನ , ಹೊಗೆ ಹಾಕೊಸ್ಕೋತೀರ ಇಂಥ ಪದಗಳ ಪ್ರಯೋಗವನ್ನು ದಯವಿಟ್ಟು ಮಾಡಬೇಡಿ. ಇದು ಮನೆಯಲ್ಲೇ ಇರುವ ಜನರನ್ನು ಅಧೈರ್ಯಗೊಳಿಸುತ್ತದೆ. ಅಗತ್ಯ ವಸ್ತುಗಳನ್ನು ತರಲು ಹೋದಾಗಲೂ ಈ ಸೋಂಕು ಅಕಸ್ಮಾತ್ ತಗುಲಬಹುದಲ್ಲವೆ ? ಅದಕ್ಕೂ ಯಾರನ್ನು ಹೊಣೆ ಮಾಡುವುದು ? ಹಾಗಾಗಿ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವೂ ನಿಮ್ಮಿಂದಾಗಬೇಕಿದೆ. ದಯವಿಟ್ಟು ಸುದ್ದಿಗಳನ್ನು ಓದುವಾಗ ಅರಚಾಡಬೇಡಿ. ಎಲ್ಲ ವಯಸ್ಸಿನವರೂ ಈ ಸುದ್ದಿಗಳನ್ನು ನೋಡುತ್ತಿರುತ್ತಾರೆ ಎಂಬುದನ್ನು ಮರೆಯದಿರಿ.
ಬೇರೆ ದೇಶಗಳ ಪರಿಸ್ಥಿತಿಯಿಂದ ಪಾಠ ಕಲಿಯಬೇಕು. ಹಾಗೆಯೇ ಆ ದೇಶಗಳು ಎಲ್ಲ ನಾಗರೀಕರನ್ನು ಸಮಾನವಾಗಿ ಕಾಣುವ ಪಾಠವನ್ನೂ ಕಲಿಯಬೇಕು ನಾವು …
ವಿದೇಶಗಳಿಂದ ಬರುವವರನ್ನು ರಕ್ಷಿಸಲು , ದೊಡ್ಡ ಸಂಖ್ಯೆಯ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಬಗ್ಗೆ ಕಾಳಜಿ ಮರೆತು ,ಈಗ ಇವರೆಲ್ಲರನ್ನು ಕಾಪಾಡಲೇಬೇಕೆಂದು ತೀರ್ಮಾನಿಸಿ, ಕಡುಬಡವರು, ನಿರ್ಗತಿಕರನ್ನು ಮರೆಯುವಷ್ಟು ಸ್ವಾರ್ಥಿಗಳಾದೆವೆ ನಾವು ?
0 Comments