ಕಳಚಿ ಹೋದ ಸಾಕ್ಷಿಪ್ರಜ್ಞೆ ಪ್ರೊ ಜಿ ಕೆ ಗೋವಿಂದರಾವ್…

ವೈಚಾರಿಕ ಪರಂಪರೆಯ ಹಿರಿಯ ಜೀವ ಜಿ ಕೆ ಗೋವಿಂದರಾವ ನಿಧನಕ್ಕೆ ಅಕ್ಷರ ನಮನ.

ಪ್ರೊ ಸಿದ್ದು ಯಾಪಲಪರವಿ ಕಾರಟಗಿ

‘ಮರಣವೇ ಮಹಾನವಮಿ’ ಎಂದು ಸಾರಿದ ವಿಜಯದಶಮಿ ದಿನ ನಸುಕಿನಲ್ಲಿ ನಮ್ಮ ನಡುವಿನ ಸಾಕ್ಷಿಪ್ರಜ್ಞೆ ಪ್ರೊ.ಜಿ.ಕೆ.ಗೋವಿಂದರಾವ್ ದೇಹ ಬಿಟ್ಟಿದ್ದಾರೆ. ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ಕೆಲಸ ಮಾಡುವುದು ಅನೇಕ ಇಂಗ್ಲಿಷ್ ಮೇಷ್ಟ್ರುಗಳ ಜಾಯಮಾನ. ಇದು ಕನ್ನಡದ ಸಂದರ್ಭಕ್ಕೆ ತುಂಬಾ ಸಾಮಾನ್ಯ. ಲಂಕೇಶ್, ಅನಂತಮೂರ್ತಿ, ಪ್ರೊ.ಟಿ.ಎಸ್.ಲೋಹಿತಾಶ್ವ, ಶರತ್ ಲೋಹಿತಾಶ್ವ, ಅವಿನಾಶ್ ಹೀಗೆ ಸಾಲು ಸಾಲು ಉದಾಹರಣೆಗಳು ನಮ್ಮ ಎದುರಿಗಿವೆ.

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಹಂಗು’ ಚಿತ್ರದ ಮೂಲಕ ಸಿನೆಮಾ ರಂಗದ ಗಮನ ಸೆಳೆದ ಪ್ರೊ.ಜಿ.ಕೆ.ಜಿ. ನೂರಾರು ಸಿನೆಮಾಗಳಲ್ಲಿ ಮತ್ತು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದರು. ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪನ, ಓದು, ಬರಹ, ನಟನೆಯ ಪ್ರವೃತ್ತಿಯ ಜೊತೆಗೆ ತಮ್ಮ ಎಡಪಂಥೀಯ ನಿಲುವಿಗೆ ಸದಾ ಬದ್ಧರಾಗಿದ್ದರು. ವೈಚಾರಿಕ ರಾಜಿಯಿಲ್ಲದೆ ಕೊನೆತನಕ ಬಾಳಿದರು. ಕಂಚಿನ ಕಂಠದ, ಅಗತ್ಯಕ್ಕೆ ತಕ್ಕ ದೇಹಭಾಷೆಯ ಶೈಲಿ ಅವರ ಮಾತು ಮತ್ತು ಅಭಿನಯದಲ್ಲಿ ಎದ್ದು ಕಾಣುತ್ತಿತ್ತು.

ತೊಂಬತ್ತರ ದಶಕದಲ್ಲಿ ಗದುಗಿಗೆ ಶೇಕ್ಸ್‌ಪಿಯರ್‌ ಕುರಿತು ಉಪನ್ಯಾಸ ನೀಡಲು ಬಂದಿದ್ದರು. ಮೊದಲು ಪ್ರೊ.ಶ್ಯಾಮಸುಂದರ ಬಿದರಕುಂದಿಯವರು ಪರಿಚಯಿಸಿದ್ದರು. ಆ ಪರಿಚಯ ಆತ್ಮೀಯತೆಗೆ ತಿರುಗಿ ನಾನವರ ಅಭಿಮಾನಿಯಾಗಿ ಹೋದೆ. ನಾಲ್ಕಾರು ಕಾರ್ಯಕ್ರಮಗಳಿಗೆ ಗದುಗಿಗೆ ಬಂದು, ಒಂದೆರಡು ದಿನ ಉಳಿದು ಹೋಗಿದ್ದರು. ತೋಂಟದಾರ್ಯ ಜಗದ್ಗುರುಗಳ ಜೊತೆಗೆ ಮಾತುಕತೆ, ವೀರನಾರಾಯಣ ದೇವಸ್ಥಾನ, ಲಕ್ಕುಂಡಿ ದೇವಾಲಯಗಳು ಮತ್ತು ನಮ್ಮ ಕಾಲೇಜಿಗೂ ಭೇಟಿ ಕೊಟ್ಟು ವಿದ್ಯಾರ್ಥಿಗಳನ್ನು ಉದ್ದೇಶಿಸಿ ತುಂಬಾ ಪ್ರಖರವಾಗಿ ಭಾಷಣ ಮಾಡಿದ್ದರು.

ಅನೇಕ ಬೈಟಕ್ಕುಗಳು, ಸಂದರ್ಭದಲ್ಲಿ ಅವರು ವಿವರಿಸುತ್ತಿದ್ದ ವೈಚಾರಿಕ ಮಾತುಗಳ ಆಳ ಅಪರೂಪ. ಇಂಗ್ಲೆಂಡ್ ಪ್ರವಾಸ ಕಥನದ ನನ್ನ ಮಾತುಗಳಲ್ಲಿ ರಾಜ್ಯದ ಒಬ್ಬ ಮಂತ್ರಿಗಳ ಹೆಸರು ಪ್ರಸ್ತಾಪಿಸಿ ಕೃತಜ್ಞತೆ ಸಲ್ಲಿಸಿದ್ದೆ, ‘ಈ ಪುಸ್ತಕದಲ್ಲಿ ಈ ಹೆಸರು ಬೇಕಿತ್ತಾ?’ ಎಂದು ಮುಖ ಸಿಂಡರಿಸಿ ಖಾರವಾಗಿ ಬೈದು ತಿಳಿ ಹೇಳಿದ್ದರು.

ಶಿಸ್ತು ಬದ್ಧ ಜೀವನಶೈಲಿ, ವೈಚಾರಿಕ ಪ್ರಖರತೆ, ತಾತ್ವಿಕ ಸಂವಾದ, ಸಾತ್ವಿಕ ಸಿಟ್ಟು ಮತ್ತು ಸ್ನೇಹಮಯ ವರ್ತನೆ ಅನುಕರಣೀಯ.
ವೈಚಾರಿಕ ಭಿನ್ನಾಭಿಪ್ರಾಯ ಇರುವವರ ಜೊತೆಗೆ ತುಂಬಾ ಗಂಭೀರವಾದ ಅಂತರ ಕಾಪಾಡಿಕೊಳ್ಳುತ್ತಿದ್ದರು. ತಮ್ಮ ನಟನೆಯ ಸೆಲೆಬ್ರಿಟಿ ಸ್ಟೇಟಸ್ಸನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿರಲಿಲ್ಲ. ಕೇವಲ ಪ್ರೀತಿ, ವಿಶ್ವಾಸ ಮತ್ತು ಸ್ನೇಹದ ಆರಾಧಕರಾಗಿದ್ದರು. ಒಮ್ಮೆ ಚಾಮ್ಸ್ಕೀ ವಿಚಾರಗಳನ್ನು ಖಾಸಗಿ ಬೈಟಕ್ಕಿನಲ್ಲಿ ಅರ್ಥಪೂರ್ಣವಾಗಿ ಮಂಡಿಸಿದ್ದು ಈಗಲೂ ಹಸಿರಾಗಿ ಉಳಿದಿದೆ. ಸಂಸ್ಕೃತಿ ಚಿಂತಕರ ಚಾವಡಿಯಲ್ಲಿ ಕೆಲವರ ಹಿಡನ್ ಅಜೆಂಡಾಗಳನ್ನು ಆಕರ್ಷಕವಾಗಿ, ಮನ ಮುಟ್ಟುವಂತೆ ಚರ್ಚೆ ಮಾಡುತ್ತಿದ್ದರು.

ಶೇಕ್ಸ್‌ಪಿಯರ್ ಮತ್ತು ವಚನಗಳ ಕುರಿತ ಆಳ ಅಧ್ಯಯನ ಅವರ ವ್ಯಕ್ತಿತ್ವದ ಮೇಲೆ ಗಾಢ ಪ್ರಭಾವ ಬೀರಿತ್ತು. ಅವರು ಬರೆದ ಕೃತಿಗಳಲ್ಲಿ ಕೂಡ ಆ ಛಾಯೆ ಎದ್ದು ಕಾಣುತ್ತದೆ. ಕೋಮುವಾದದ ಅಪಾಯಗಳನ್ನು ವಿವರಿಸುವಾಗ ಕೇಳುಗರ ಮೈ ಜುಂ ಎನ್ನುತ್ತಿತ್ತು.

ಲಂಕೇಶ್ ಪತ್ರಿಕೆ ಪರಂಪರೆಯ ಜೊತೆಗಿನ ಒಡನಾಟ, ಗೌರಿ ಲಂಕೇಶ್ ಜೊತೆಗೂ ಮುಂದುವರೆದಿತ್ತು. ಗೌರಿ ಮತ್ತು ಕಲಬುರ್ಗಿಯವರ ಹತ್ಯೆಯ ನಂತರ ಅವರು ರೋಸಿ ಹೋಗಿದ್ದರು. ನಂಬಿದ ಸಿದ್ಧಾಂತಗಳಿಗೆ ಅಪಚಾರವಾಗುವ ವಾತಾವರಣ ಕಂಡು ಬೇಸರಗೊಂಡಿದ್ದರೂ, ನಂಬಿದ ವಿಚಾರಗಳನ್ನು‌ ಪ್ರತಿಪಾದಿಸುತ್ತ, ಬೇಡವಾದದ್ದನ್ನು ತೀವ್ರವಾಗಿ ಖಂಡಿಸುತ್ತಲೇ ಕೊನೆ ದಿನಗಳಗಳನ್ನು ಕಳೆದರು.
ವೈಚಾರಿಕ ಪರಂಪರೆಯ ಕೊಂಡಿಯೊಂದು ಕಳಚಿ ಶೂನ್ಯ ಭಾವ ಕಾಡುತ್ತಿದೆ. ಹೋಗಿ ಬನ್ನಿ ಸರ್.

‍ಲೇಖಕರು Admin

October 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: