ಸಣ್ಣ ಹಳ್ಳಿಯ, ಪುಟ್ಟ ಕೆಲಸಕ್ಕೆ ಜೊತೆಯಾದ ದೊಡ್ಡವರು…
ಕುಸುಮಾ ಆಯರಹಳ್ಳಿ
ಈ ಖುಷಿಯನ್ನು ವಿವರಿಸಲು ನಾನು ನಿಜಕ್ಕೂ ಪದಗಳಿಗಾಗಿ ತಡಕಾಡುತ್ತಿರುವೆ. ನಮ್ಮ ತೋಟದಲ್ಲಿ ಪ್ರತಿ ಭಾನುವಾರ ಸುತ್ತಲ ಹಳ್ಳಿಮಕ್ಕಳಿಗಾಗಿ ಕಲೆಯ ತರಗತಿಗಳು ನಡೆಯುತ್ತದೆ. ಒಂದು ಹುಂಬ ಧೈರ್ಯದಲ್ಲಿ ಆರಂಭಿಸಿದ ಈ ಕೆಲಸಕ್ಕೆ ಆರಂಭದಲ್ಲಿ ಬಂದವರು ಮೂರು ಮಕ್ಕಳು. ಈಗ 30+. ಇದಕ್ಕಿನ್ನೂ ನೆಟ್ಟಗೆ ಒಂದು ಹೆಸರೂ ಇಟ್ಟಿಲ್ಲ.
ಕಳೆದ ವಾರವಷ್ಟೆ ಕಾಸರವಳ್ಳಿ ಸರ್ ನ ಭೇಟಿಯಾಗಿ ಮಾತಾಡಿದ್ದೆ. ವೈಶಾಲಿ ಮೇಡಂ ಇದ್ದಾಗ ನಮಸ್ಕಾರ ಬಿಟ್ಟು ಒಂದು ಪದ ಮಾತಾಡ್ತಿರಲಿಲ್ಲ. ಆಮೇಲೊಂದು ಪ್ರಾಜೆಕ್ಟ್ ಸರ್ ಜೊತೆಯೇ ಮಾಡುವಾಗ ಸ್ವಲ್ಪ ಧೈರ್ಯ ಬಂತು. ಭಾನುವಾರ ತರಗತಿಯ ಹೊತ್ತಿಗೆ ಕಾಸರವಳ್ಳಿ ಸರ್, ಲಿಂಗದೇವರು, ಜೋಗಿ ಸರ್, ಗೋಪಾಲಕೃಷ್ಣ ಪೈ ಗಳು ಬಂದಿಳಿದೇಬಿಟ್ಟರು.
ಎಷ್ಟೋ ದಿನದಿಂದ ಬರಬೇಕಿದ್ದ ಮಂಡ್ಯ ರಮೇಶ್ ಸರ್ ಕೂಡ ಅದೇ ದಿನ ಬಂದಿದ್ದರು. ಮಂಡ್ಯರಮೇಶ್ ಸರ್ ಆಟ ಆಡಿಸುತ್ತಲೇ ನಾಟಕ ಕಲಿಸುವ ಮಾಂತ್ರಿಕ. ಎಲ್ಲರೂ ಆಟದಲ್ಲಿದ್ದಾಗಲೇ ಇವರೆಲ್ಲ ಬಂದರು. ನಿಜಕ್ಕೂ ಈ ಮಕ್ಕಳ ಅದೃಷ್ಟ.
ಇಡೀ ದಿನ ಇವರೆಲ್ಲ ಮನೆಯಲ್ಲಿ ಇದ್ದು ಮಾತಾಡುವಾಗ ಎಷ್ಟೆಲ್ಲಾ ಕಷ್ಟಪಟ್ಟು ಮನೆಕಟ್ಟಿದ್ದಕ್ಕೂ ಸಾರ್ಥಕ ಅನಿಸಿಬಿಟ್ಟಿತು. ನನ್ನ ಮೇಲಿನ ಈ ಹಿರಿಯರ ಪ್ರೀತಿಗೆ ಹೆಚ್ಚೇನೂ ಹೇಳಲು ತೋಚುತ್ತಿಲ್ಲ. ಇದೆಲ್ಲ ನಿಜವಾ ಅಂತ ನಾನೂ ಫೊಟೋ ನೋಡ್ತಾ ಖಾತರಿಪಡಿಸಿಕೊಳ್ತಿರುವೆ.
0 ಪ್ರತಿಕ್ರಿಯೆಗಳು